A r v i n d r a j   D e s a i

Friday, April 24, 2015

ಮೊಗ್ಗಿನ ಮನಸ್ಸುಗಳ ಮೇಲೆ ದೊಡ್ಡವರ ದರ್ಬಾರ್

ಇತ್ತೀಚಿನ ಕೆಲವೊಂದು ಮಕ್ಕಳ ಮಲಿನ ಸಂಗತಿಗಳು, ನನ್ನನ್ನು ಖಿನ್ನನನ್ನಾಗಿಸಿ ಈ ಲೇಖನ ಬರೆಯುವುದಕ್ಕೆ ದಾರಿಮಾಡಿಕೊಟ್ಟಿವೆ. ನನ್ನಲ್ಲಿರುವ ಕೋಪ ಹೊರಹಾಕುವ ಪ್ರಯತ್ನವೂ ಇರಬಹುದು. 
ಮಕ್ಕಳು ಏನು ಮಾಡಿದರೂ ಚಂದ, ಪುಟ್ಟ ಮಕ್ಕಳ ಮನಸ್ಸು ತಿಳಿ ನೀರು ಇದ್ದ ಹಾಗೆ. ನಾನು ಎಷ್ಟೋ ಸಲ ಮಕ್ಕಳೊಂದಿಗೆ ಮಾತನಾಡುತ್ತಾ, ಅವು ಏನೂ ತಿಳಿಯದೆ ಕೊಡುವ ಚಿಕ್ಕ ಚಿಕ್ಕ ಉತ್ತರಗಳು, ನನ್ನನ್ನು ಮಗುವಾಗಿಸಿ, ತಮ್ಮ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಂಡು ಬಿಡುತ್ತವೆ. ನಮ್ಮಲ್ಲಿ ಮದ, ಮತ್ಸರ, ಕೋಪ, ದ್ವೇಷ, ಕ್ರೋಧ, ಆಸೆ ಹೊತ್ತಿ ಉರಿಯುತ್ತಿರುವಾಗ ಮಕ್ಕಳೊಂದಿಗೆ ಒಂದು ಬೈಠಕ್ ಹಾಕಿ ನೋಡಿ, ನೀವು ಕೂಡಾ ಮಗುವಿನೊಂದಿಗೆ ಮಗುವಾಗುತ್ತೀರಾ. ಇಂಥ ನಿಶ್ಚಲ ನಿರ್ಮಲ ಮನಸ್ಸುಗಳ ಬಿಳಿ ಹಾಳೆಯ ನಾಳೆಗಳು ನಾವು ನೀಡುವ ನೋಟ್ಸ್ ಇದ್ದಂತೆ, ನಾವೇನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ ಎಂಬ ಅರಿವು ನಮಗಿರಬೇಕು. 
ಇತ್ತೀಚಿಗೆ ನಡೆದಂಥ ಪೇಷಾವರ ಶಾಲೆಯ ದುರಂತ ಕೂಡಾ ಇದಕ್ಕೊಂದು ತಾಜಾ ಉದಾಹರಣೆ. ಇದಕ್ಕೆ ದರ್ಮಾಂದತೆ ಕಾರಣ. ಇಂಥ ಕ್ರೌರ್ಯದಲ್ಲಿ ಬದುಕುಳಿದ ಮಕ್ಕಳೇ ನಾಳೆ ಇಂಥದೇ ಕ್ರೌರ್ಯದಲ್ಲಿ ತೊಡಗಿದರೂ ಅಚ್ಚರಿಯಿಲ್ಲ. ನಮ್ಮ ಮಕ್ಕಳಿಗೆ ನಾವೇನು ಕಲಿಸುತ್ತಿದ್ದೇವೆ ಎಂದು ಆ ಮತಾಂಧರ ಪೋಷಕರು ಒಂದು ಬಾರಿ ಕೇಳಿಕೊಂಡಿದ್ದರೆ, ಈ ದುರ್ಗತಿಯನ್ನು ನಾವು ಕಣ್ಣಾರೆ ನೋಡುವ ಪರಸ್ಥಿತಿ  ಬಂದೊದಗುತ್ತಿರಲಿಲ್ಲ. ಎಲ್ಲೋ ಮತಾಂಧರು ಏನೋ ಮಾಡುತ್ತಿದ್ದಾರೆ ನಮಗ್ಯಾಕೆ ಬೇಕು ಅಂತಿರಾ ? ನಮ್ಮಲ್ಲಿಯದೇ ಇನ್ನೊಂದು ಸಂಗತಿ ಹೇಳುತ್ತೇನೆ ಕೇಳಿ. 
ಕೆಲವು ದಿನಗಳ ಹಿಂದೆ ದಿನಪತ್ರಿಕೆ ಓದುವಾಗ, ಮೈಸೂರು ಜಿಲ್ಲೆಯ ಕುಪ್ಪೇಗಾಲ ಗ್ರಾಮದಲ್ಲಿ, ದಲಿತ ಮಹಿಳೆಯರು ಮಾಡಿ  ಬಡಿಸಿದ ಬಿಸಿಯೂಟ ಮಾಡಬಾರದೆಂದು ಮನೆಯ ದೊಡ್ಡವರು ಮಕ್ಕಳಿಗೆ ಹೇಳಿ ಶಾಲೆಗೆ ಕಳುಹಿಸಿದ್ದರು ಅಂತ. ಸಾವಿರಾರು ವರ್ಷಗಳ ಹಿಂದಿನಿಂದ ಪಾಲಿಸಿಕೊಂಡು ಬಂದ ಅಸ್ಪೃಶ್ಯತೆಯನ್ನು ನೂರಾರು ವರ್ಷ ವಯಸ್ಸಿನ ಚಳುವಳಿಗಳು ಬೇರು ಸಮೇತ ಕಿತ್ತೊಗೆಯಲು ಸಾದ್ಯವೇ?... ಸಾದ್ಯ ಇದೆ. ನಮ್ಮ ನಿಮ್ಮೆಲ್ಲರ ವಿವೇಕತನದಿಂದ, ಮೌಡ್ಯದಿಂದ ಹೊರಬಂದು, ಮಕ್ಕಳಲ್ಲಿ ನಾವೆಲ್ಲಾ ಒಂದು ಎಂಬ ಭಾವವನ್ನು ಮೂಡಿಸುವುದರಿಂದ. 
 ಅದೇ ದಿನ ವಾರ್ತೆಯನ್ನು ನೋಡುತ್ತಿದ್ದಾಗ, ದೊಡ್ಡವರ ಮಕ್ಕಳು ಮನೆಯಲ್ಲಿ ಮಾಡಿದ ಟಿಫನ್ ಬಾಕ್ಸ್ ಗಳನ್ನು ಕ್ಯಾಮೆರಾ ಮುಂದೆ ಅಲ್ಲಾಡಿಸುತ್ತಿದ್ದಾಗ, ಭಾರತದ ಭವಿಷ್ಯದ ಬುಡವನ್ನೇ ಅಳುಗಾದಡಿಸಿದಂತೆ ಅನಿಸಿತು. ಅರ್ರೆ, ಊರಲ್ಲಿ ಮನೆಯಲ್ಲಿ ಮನಸ್ಸಿನಲ್ಲಿರುವ ಜಾತ್ಯಾಂದತೆಯ ಕಸವನ್ನು ಶಾಲೆಯ ಅಂಗಳಕ್ಕೆ ತಂದು ಸುರಿದರೆ, ಅದೇ ಶಾಲೆಯಲ್ಲಿ ಓದುವ ನಮ್ಮ ಮಕ್ಕಳು 'ಜಾತಿ'ಯ ದುರ್ನಾತದ ನಡುವೆ ನಲುಗುತ್ತಾರೆ ಎಂಬ ಸಣ್ಣ ಅರಿವೂ ನಮಗೆ ಇಲ್ಲದೇ ಹೋದರೆ ಹೇಗೆ? "ಅಸ್ಪ್ರುಶ್ಯತೆ ಎಂಬುದು ಸಾವಿರ ಹೆಡೆಗಳ ಸರ್ಪವಿದ್ದಂತೆ" ಎಂದು ಗಾಂಧಿಜಿಯವರು ಹೇಳಿದ್ದು ನೂರಕ್ಕೆ ನೂರು ಸತ್ಯ. 
ಇದನ್ನು ಸರಿಪಡಿಸುವವರು ಯಾರು? 
ಸರ್ಕಾರ,  ಕಾರ್ಯಾಂಗ, ನ್ಯಾಯಾಂಗ, ಜಾರಿ ನಿರ್ದೇಶನಾಲಯ, ಆಯೋಗಗಳು ತಮ್ಮ ತಮ್ಮಲ್ಲೇ ಹೊಂದಾಣಿಕೆ ಇದ್ದಂತಿಲ್ಲ. ಅದಕ್ಕಾಗಿ ನಾವೇ ಇದರಲ್ಲಿ ಭಾಗಿದಾರರಾಗಬೇಕು. 
ನಮ್ಮ ಮಕ್ಕಳಿಗೆ ನೈತಿಕತೆಯನ್ನು ಹೇಳಿಕೊಡಬೇಕು. ಸಾದ್ಯವಾದರೆ ಜೀವಿಸಿ ತೋರಿಸಬೇಕು. "ದಯವೇ ಧರ್ಮದ ಮೂಲವಯ್ಯಾ, ದಯವಿಲ್ಲದ ದರ್ಮ ಯಾವುದಯ್ಯಾ?" ಎಂಬ ಪಾಠವನ್ನು ಮುಸ್ಲಿಂ ಧರ್ಮ ಸೇರಿದಂತೆ ಎಲ್ಲ ಧರ್ಮಗಳೂ ಹೇಳಿಕೊಡಬೇಕು. 
ಇನ್ನು ಭಾರತದ ಭಯೋತ್ಪಾದನೆ ಯಾದಂಥ 'ಜ್ಯಾತ್ಯಂಧತೆ'ಯನ್ನು ಮಟ್ಟ ಹಾಕಬೇಕಾದರೆ, ದಲಿತ ಸಮಾರಂಭಗಳಿಗೆ ಮೇಲ್ವರ್ಗದವರು ಹೋಗಬೇಕು, ಗೃಹಪ್ರವೇಶ ಆಗಬೇಕು, ದೇವಸ್ಥಾನಗಳಲ್ಲಿ ದಲಿತರನ್ನು ಪೂಜಿಸಲು ಬಿಡಬೇಕು, ಅಂತರ್ ಜಾತಿ ವಿವಾಹಗಳು ಆಗಬೇಕು. ಈ ಎಲ್ಲಾ ವಿಷಯಗಳು ಇಂದಿನ ಮಕ್ಕಳ, ನಾಳೆಯ ನಾಗರೀಕರ ಸರಿ ದಾರಿಯಲ್ಲಿ ನಡೆಯಲು ಉಪಯೋಗವಾಗುವ ದಾರಿದೀಪಗಳು. 
ಮುದ್ದು ಮಕ್ಕಳ ಮನಸ್ಸುಗಳೊಂದಿಗೆ ಮಾತನಾಡುತ್ತಾ ಮಗುವಾಗುತ್ತಾ ಮುಗ್ಧತೆಯನ್ನು ಕಲಿತು ಉಳಿಸಿ ಬೆಳೆಸಿ ಎಂದು ಹೇಳುತ್ತಾ, ಮನಸ್ಸಿಗೆ ಹಿಡಿಸಿದರೆ ಮಕ್ಕಳಿಗೆ ಕಲಿಸಿ, ಹಿಡಿಸದಿದ್ದರೆ ನನಗೆ ತಿಳಿಸಿ. ಜೈ ಭಾರತ್ ಮಾತೆ 
-- ಅರವಿಂದರಾಜ್ ಬಿ ದೇಸಾಯಿ   

No comments:

Post a Comment