A r v i n d r a j   D e s a i

Tuesday, October 22, 2013

ನೇತಾಜಿ: ಚಲೋ ದಿಲ್ಲಿ ಎಂದು ಹೋದರೆಲ್ಲಿ? : ಒಂದು ವಿಮರ್ಶೆ, ಒಂದು ಚಿಂತನೆ.

'Give me your blood, I promise you the freedom'. ಎಂದು ಹೇಳಲು ಯಾವುದೇ ಮನುಷ್ಯನಿಗೆ ಎದೆಯಲ್ಲಿ ಅದೆಷ್ಟು ಕ್ರಾಂತಿಯ ಕಿಚ್ಚು ಹೊತ್ತಿರಬೇಕು? ಅದೆಂಥ ಗುಂಡಿಗೆ ಇರಬೇಕು?. ಹೌದು ೧೯೪೫ ಆ, ೧೮ ರಂದು ಕಣ್ಮರೆಯಾದಂಥ, ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್. ಅವರ ಕಣ್ಮರೆಯ ಚಿತ್ರಣವನ್ನು ತಮ್ಮ ಕಣ್ಮುಂದೆ ತೆರೆದಿಡುವ ಕೆಲಸವನ್ನು ಮಾಡಿದವರು, ಜಗತ್ತಿನ ಸೋಗಿನ ಬಟ್ಟೆಯನ್ನು ಕಳಚಿ ಬೆತ್ತಲಾಗಿ ತೋರಿಸುವ, 'ಬೆತ್ತಲೆ ಜಗತ್ತು' ಪ್ರಖ್ಯಾತಿಯ ಪ್ರತಾಪ್ ಸಿಂಹ.
'The great escape', ಕನ್ನಡ ಅವತರಣಿಕೆಯನ್ನು, ೬ನೇ ಕ್ಲಾಸಿನಲ್ಲಿದ್ದಾಗ, ಬೆರಗುಗಣ್ಣಿನಿಂದ ಓದಿದ್ದ ಬಾಲಕ ನಾನು. ಆವತ್ತಿನಿಂದ ಇಲ್ಲಿಯವರೆಗೆ, ನೇತಾಜಿ ಎಲ್ಲಿ ಹೋದರು? ಎಂಬ ಪ್ರಶ್ನೆ ಯಾವತ್ತಿಗೂ ಕಾಡುತ್ತಿರುತ್ತದೆ. ಆ ಪ್ರಶ್ನೆಗೆ ಉತ್ತರ ಅರಸಿ, ಪುಸ್ತಕವನ್ನು ತೆರೆದು, ಓದಿ, ಮುಗಿಸಿದರೂ ಉತ್ತರ ಸಿಕ್ಕಿಲ್ಲ. ನೇತಾಜಿ ಜೀವನದ ಸುತ್ತ ಒಂದು ಸಣ್ಣ 'ಪಿಕ್ ನಿಕ್' ಹೋಗಿ ಬರಲಾಗಿದೆ. ಹೃದಯ ಭಾಗದ ಕಥೆ ಮಾತ್ರ ಕುತೂಹಲಕಾರಿಯಾದ 'ನೇತಾಜಿ ಕಾಣೆಯಾದುದರ ಬಗ್ಗೆಯೇ'!!
ಭಾರತಾಂಬೆಯನ್ನು ಬ್ರಿಟಿಷರ ಬಂಧನದಿಂದ ಬಿಡುಗಡೆ ಮಾಡಬೇಕೆಂಬ ಮಹದಾಸೆ ಹೊತ್ತ ಮಹಾನ್ ನಾಯಕರಲ್ಲಿ ಇವರೂ ಒಬ್ಬರು. ೧೯೩೫ರಲ್ಲಿ ಕಾಂಗ್ರೆಸ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಚಲೋ ದಿಲ್ಲಿ ಎಂದು ಕೆರೆಕೊಟ್ಟರು. ಅವರ ಕಿಚ್ಚು ಹೊತ್ತಿಸುವ ಭಾಷಣವನ್ನು ಕೇಳಿ ಬ್ರಿಟಿಷರು ಬೆಪ್ಪಾಗಿ, ಅವರನ್ನು ಗೃಹಬಂಧನದಲ್ಲಿ ಇಡುತ್ತಾರೆ. ಅವರು ಗೃಹಬಂಧನದಿಂದ ಕಾಶ್ಮೀರ್, ಕಾಬುಲ್ ಮೂಲಕ ಬರ್ಲಿನ್ ತಲುಪಿದ್ದು, ನಿಜಕ್ಕೂ ರೋಮಾಂಚನಕಾರಿ, ಇತಿಹಾಸ ಎಂದೂ ಮರೆಯದ ಘಟನೆ. ನೇತಾಜಿ ದೇಶವಲ್ಲದ ದೇಶಕ್ಕೆ ಹೋಗಿ, ಹೊರದೇಶದಲ್ಲಿರುವ ಭಾರತೀಯರನ್ನು ಒಕ್ಕೂಡಿಸಿ, ೩೦,೦೦೦ ಜನರ 'ಇಂಡಿಯನ್ ನ್ಯಾಷನಲ್ ಆರ್ಮಿ (INA)' ಸ್ಥಾಪಿಸಿದ್ದು ಸಾಮಾನ್ಯ ವಿಷಯವೇನಲ್ಲ.
ನಂತರ ಮುಸ್ಸೊಲಿನಿ, ಸರ್ವಾಧಿಕಾರಿ ಹಿಟ್ಲರ್, ಜಪಾನ್ ಮಿಲಿಟರಿಯನ್ನು ಸಂಧಿಸಿ, ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ಒಪ್ಪಂದ ಮಾಡಿಕೊಂಡಿದ್ದು, ಸುಭಾಷರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯೇ ಸರಿ. ರಷ್ಯಾ ಆವತ್ತಿನ ಮಟ್ಟಿಗೆ ಜಗತ್ತಿನ ಎರಡನೇ ಶಕ್ತಿ ಕೇಂದ್ರ, ಅಂಥ ಶಕ್ತಿಯ ಜೊತೆಗೆ ಕೈ ಜೋಡಿಸ ಹೋದ ಭಾರತದ ಬೆಂಕಿ ಚೆಂಡು ಚಂದ್ರ ಬೋಸ್.
ಈ ಕಾದಂಬರಿಯು ನೇತಾಜಿ ಕಥಾಕಥಿತ ವಿಮಾನ ಅಪಘಾತದಲ್ಲಿ ಸತ್ತಿಲ್ಲವೆಂಬುದರ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದೆ. ಅವರು ಕಾಣೆಯಾದುದರ ಬಗ್ಗೆ ಹಲವಾರು ರೋಚಕ, ಕುತೂಹಲಕಾರಿ ಕಥೆಗಳನ್ನು, ಮಜಲುಗಳನ್ನಾಗಿ ಹೆಣೆಯಲಾಗಿದೆ. ೧೯೪೫ ಆ ೧೮ ರಂದು ನೇತಾಜಿ ಸಾವನ್ನಪ್ಪಿಲ್ಲವಾದರೆ ಹೋದರಾದರೂ ಎಲ್ಲಿಗೆ? ಎಂಬ ಪ್ರಶ್ನೆಯನ್ನು ದಟ್ಟವಾಗಿಸುವಲ್ಲಿ, ಲೇಖಕ ಯಶಸ್ವಿ.
ನಾನು ಯಾವುದೇ ರಾಜಕೀಯ ಪಕ್ಷದ ಪರ/ವಿರೋಧಿ ಅಲ್ಲವಾದರೂ, ಕಾಂಗ್ರೆಸ್ಸನ್ನು ಪ್ರತಿ ಹಂತದಲ್ಲೂ ದೂಷಿಸಿರುವುದು, ಈ ಕಾದಂಬರಿಯ ಪಾರದರ್ಶಕತೆಯನ್ನು ಪ್ರಶ್ನಿಸಿಸಲು ಪ್ರೇರಣೆ ನೀಡುತ್ತದೆ.
ಒಂದು ಮೂಲದ ಪ್ರಕಾರ, ಅವರು ರಹಸ್ಯವಾಗಿ ರಷ್ಯ ತೆರೆಳಿದ್ದಾರೆ  ಎಂತಾದರೆ, ಇನ್ನೂ ಕೆಲವು ಮೂಲಗಳ ಪ್ರಕಾರ, ಅವರು ರಷ್ಯದಲ್ಲಿ ಯುದ್ಧ ಖೈದಿಯಾಗಿದ್ದಾರೆ ಎಂಬುದು, ಬಲೂಚಿಸ್ಥಾನದಲ್ಲೆಲ್ಲೋ  ಕೊಲೆಯಾದರು, ೧೯೬೭ರ ತನಕ ವಿಜಯ್ ಭಗವಾನ್ ಎಂಬ ಹೆಸರಿನಲ್ಲಿ ಜೀವಿಸಿರುವುದು, ೧೯೭೫ರ ತನಕ ಗಮ್ ನಾಮೀ ಬಾಬಾ ಎಂಬ ಹೆಸರಿನಲ್ಲಿ ಜೀವಿಸಿರುವುದು. ಕೇವಲ ಊಹಾಪೋಹವಷ್ಟೇ, ಯಾವುದಕ್ಕೂ ಖಚಿತ ಮಾಹಿತಿಗಳಿಲ್ಲ, ಸಾಕ್ಷಿ ಪುರಾವೆಗಳಿಲ್ಲ.
ಹಾಗಾದರೆ ನೇತಾಜಿ ಕಣ್ಮರೆ ಅಷ್ಟೊಂದು ನಿಗೂಢವಾಗಿ ಉಳಿಯಲು ಕಾರಣವೇನು? ಭಾರತ ಸರಕಾರನಾ? ಭಾರತದ ಆಯೋಗಕ್ಕೆ ಸ್ಪಂದಿಸದ ಇತರೆ ರಾಷ್ಟ್ರಗಳಾ? ಸ್ವಾತಂತ್ರ್ಯ ಪೂರ್ವ ಒಳ ರಾಜಕೀಯವಾ? ಇದೆಲ್ಲದರ ಮೇಲೆ ಮುಖರ್ಜಿ ಆಯೋಗ, ಕೊಂಚ ಮಟ್ಟಿಗೆ ಬ್ಯಾಟರಿ ಹಾಕಿ ಸತ್ಯ ಬಗೆಯಲು ಪ್ರಯತ್ನವೇನೋ ಮಾಡಿತಾದರೂ, 'ನೇತಾಜಿ ಆ ವಿಮಾನ ಅಪಘಾತದಲ್ಲಿ ಸತ್ತಿಲ್ಲವೆಂದು' ಸಾಕ್ಷಿ ಸಮೇತ ಪ್ರತಿಪದಿಸಿತಾದರೂ, ನೇತಾಜಿ ಎಲ್ಲಿ ಹೋದರು ಎಂಬ ಪ್ರಶ್ನೆ ಕೋಟಿ ರೂಪಾಯಿ ಪ್ರಶ್ನೆಯಾಗಿಯೇ ಉಳಿಸಿಬಿಟ್ಟಿತು.


ನಮ್ಮೆಲ್ಲರ ಸ್ವಾತಂತ್ರ್ಯಕ್ಕಾಗಿ, ಶ್ರೆಯೋಭಿಲಾಷಕ್ಕಾಗಿ ಬಡಿದಾಡಿದ ನೇತಾಜಿಯ ಬಗ್ಗೆ ಯಾಕಿಷ್ಟು ತಾತ್ಸಾರ? ಅಂಥ ಮಹಾನ್ ನಾಯಕರು ಕಾಣೆಯಾದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದಿರುವಾಗ ನಮ್ಮಂಥ ಜನಸಾಮಾನ್ಯರು ಕಾಣೆಯಾದರೆ ಗತಿಯೇನು?

ಜಪಾನ್ ಹೇಳುವ ಪ್ರಕಾರ, ವಿಮಾನ ಅಪಘಾತದಲ್ಲಿ ನೇತಾಜಿ ತೀರಿ ಹೋದರು ಎಂಬ ಸುಳ್ಳನ್ನು, ಭಾರತದ ಜನಮಾನಸ ಯಾವತ್ತೂ ಒಪ್ಪುವುದಿಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾ, 'ನೇತಾಜಿಯ ಸಾಧನೆಗಳನ್ನು ನಾವು ಎಂದು ಮರೆಯುತ್ತೆವೆಯೋ ಅಂದೇ ಅವರು ಸತ್ತಂತೆ', ಎಂದು ಹೇಳುತ್ತಾ, ಮತ್ತೆ ಹುಟ್ಟಿ ಬನ್ನಿ ನೇತಾಜಿ, ಹಿಂದೂಸ್ತಾನವು ಎಂದೂ ಮರೆಯದ ಭಾರತರತ್ನವು ನೀವು, ನಿಮ್ಮನ್ನೆಂದೂ ಮರೆವೆವು ನಾವು. ನಿಮಗೂ ಏನಾದರೂ ಅನಿಸಿದರೆ, ಪ್ರತ್ಯುತ್ತರಕ್ಕಾಗಿ ಯಾವತ್ತೂ ಕಾಯುವ, ನಿಮ್ಮವ
ಅರವಿಂದರಾಜ ಬಿ ದೇಸಾಯಿ.