A r v i n d r a j   D e s a i

Tuesday, October 22, 2013

ನೇತಾಜಿ: ಚಲೋ ದಿಲ್ಲಿ ಎಂದು ಹೋದರೆಲ್ಲಿ? : ಒಂದು ವಿಮರ್ಶೆ, ಒಂದು ಚಿಂತನೆ.

'Give me your blood, I promise you the freedom'. ಎಂದು ಹೇಳಲು ಯಾವುದೇ ಮನುಷ್ಯನಿಗೆ ಎದೆಯಲ್ಲಿ ಅದೆಷ್ಟು ಕ್ರಾಂತಿಯ ಕಿಚ್ಚು ಹೊತ್ತಿರಬೇಕು? ಅದೆಂಥ ಗುಂಡಿಗೆ ಇರಬೇಕು?. ಹೌದು ೧೯೪೫ ಆ, ೧೮ ರಂದು ಕಣ್ಮರೆಯಾದಂಥ, ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್. ಅವರ ಕಣ್ಮರೆಯ ಚಿತ್ರಣವನ್ನು ತಮ್ಮ ಕಣ್ಮುಂದೆ ತೆರೆದಿಡುವ ಕೆಲಸವನ್ನು ಮಾಡಿದವರು, ಜಗತ್ತಿನ ಸೋಗಿನ ಬಟ್ಟೆಯನ್ನು ಕಳಚಿ ಬೆತ್ತಲಾಗಿ ತೋರಿಸುವ, 'ಬೆತ್ತಲೆ ಜಗತ್ತು' ಪ್ರಖ್ಯಾತಿಯ ಪ್ರತಾಪ್ ಸಿಂಹ.
'The great escape', ಕನ್ನಡ ಅವತರಣಿಕೆಯನ್ನು, ೬ನೇ ಕ್ಲಾಸಿನಲ್ಲಿದ್ದಾಗ, ಬೆರಗುಗಣ್ಣಿನಿಂದ ಓದಿದ್ದ ಬಾಲಕ ನಾನು. ಆವತ್ತಿನಿಂದ ಇಲ್ಲಿಯವರೆಗೆ, ನೇತಾಜಿ ಎಲ್ಲಿ ಹೋದರು? ಎಂಬ ಪ್ರಶ್ನೆ ಯಾವತ್ತಿಗೂ ಕಾಡುತ್ತಿರುತ್ತದೆ. ಆ ಪ್ರಶ್ನೆಗೆ ಉತ್ತರ ಅರಸಿ, ಪುಸ್ತಕವನ್ನು ತೆರೆದು, ಓದಿ, ಮುಗಿಸಿದರೂ ಉತ್ತರ ಸಿಕ್ಕಿಲ್ಲ. ನೇತಾಜಿ ಜೀವನದ ಸುತ್ತ ಒಂದು ಸಣ್ಣ 'ಪಿಕ್ ನಿಕ್' ಹೋಗಿ ಬರಲಾಗಿದೆ. ಹೃದಯ ಭಾಗದ ಕಥೆ ಮಾತ್ರ ಕುತೂಹಲಕಾರಿಯಾದ 'ನೇತಾಜಿ ಕಾಣೆಯಾದುದರ ಬಗ್ಗೆಯೇ'!!
ಭಾರತಾಂಬೆಯನ್ನು ಬ್ರಿಟಿಷರ ಬಂಧನದಿಂದ ಬಿಡುಗಡೆ ಮಾಡಬೇಕೆಂಬ ಮಹದಾಸೆ ಹೊತ್ತ ಮಹಾನ್ ನಾಯಕರಲ್ಲಿ ಇವರೂ ಒಬ್ಬರು. ೧೯೩೫ರಲ್ಲಿ ಕಾಂಗ್ರೆಸ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಚಲೋ ದಿಲ್ಲಿ ಎಂದು ಕೆರೆಕೊಟ್ಟರು. ಅವರ ಕಿಚ್ಚು ಹೊತ್ತಿಸುವ ಭಾಷಣವನ್ನು ಕೇಳಿ ಬ್ರಿಟಿಷರು ಬೆಪ್ಪಾಗಿ, ಅವರನ್ನು ಗೃಹಬಂಧನದಲ್ಲಿ ಇಡುತ್ತಾರೆ. ಅವರು ಗೃಹಬಂಧನದಿಂದ ಕಾಶ್ಮೀರ್, ಕಾಬುಲ್ ಮೂಲಕ ಬರ್ಲಿನ್ ತಲುಪಿದ್ದು, ನಿಜಕ್ಕೂ ರೋಮಾಂಚನಕಾರಿ, ಇತಿಹಾಸ ಎಂದೂ ಮರೆಯದ ಘಟನೆ. ನೇತಾಜಿ ದೇಶವಲ್ಲದ ದೇಶಕ್ಕೆ ಹೋಗಿ, ಹೊರದೇಶದಲ್ಲಿರುವ ಭಾರತೀಯರನ್ನು ಒಕ್ಕೂಡಿಸಿ, ೩೦,೦೦೦ ಜನರ 'ಇಂಡಿಯನ್ ನ್ಯಾಷನಲ್ ಆರ್ಮಿ (INA)' ಸ್ಥಾಪಿಸಿದ್ದು ಸಾಮಾನ್ಯ ವಿಷಯವೇನಲ್ಲ.
ನಂತರ ಮುಸ್ಸೊಲಿನಿ, ಸರ್ವಾಧಿಕಾರಿ ಹಿಟ್ಲರ್, ಜಪಾನ್ ಮಿಲಿಟರಿಯನ್ನು ಸಂಧಿಸಿ, ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ಒಪ್ಪಂದ ಮಾಡಿಕೊಂಡಿದ್ದು, ಸುಭಾಷರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯೇ ಸರಿ. ರಷ್ಯಾ ಆವತ್ತಿನ ಮಟ್ಟಿಗೆ ಜಗತ್ತಿನ ಎರಡನೇ ಶಕ್ತಿ ಕೇಂದ್ರ, ಅಂಥ ಶಕ್ತಿಯ ಜೊತೆಗೆ ಕೈ ಜೋಡಿಸ ಹೋದ ಭಾರತದ ಬೆಂಕಿ ಚೆಂಡು ಚಂದ್ರ ಬೋಸ್.
ಈ ಕಾದಂಬರಿಯು ನೇತಾಜಿ ಕಥಾಕಥಿತ ವಿಮಾನ ಅಪಘಾತದಲ್ಲಿ ಸತ್ತಿಲ್ಲವೆಂಬುದರ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದೆ. ಅವರು ಕಾಣೆಯಾದುದರ ಬಗ್ಗೆ ಹಲವಾರು ರೋಚಕ, ಕುತೂಹಲಕಾರಿ ಕಥೆಗಳನ್ನು, ಮಜಲುಗಳನ್ನಾಗಿ ಹೆಣೆಯಲಾಗಿದೆ. ೧೯೪೫ ಆ ೧೮ ರಂದು ನೇತಾಜಿ ಸಾವನ್ನಪ್ಪಿಲ್ಲವಾದರೆ ಹೋದರಾದರೂ ಎಲ್ಲಿಗೆ? ಎಂಬ ಪ್ರಶ್ನೆಯನ್ನು ದಟ್ಟವಾಗಿಸುವಲ್ಲಿ, ಲೇಖಕ ಯಶಸ್ವಿ.
ನಾನು ಯಾವುದೇ ರಾಜಕೀಯ ಪಕ್ಷದ ಪರ/ವಿರೋಧಿ ಅಲ್ಲವಾದರೂ, ಕಾಂಗ್ರೆಸ್ಸನ್ನು ಪ್ರತಿ ಹಂತದಲ್ಲೂ ದೂಷಿಸಿರುವುದು, ಈ ಕಾದಂಬರಿಯ ಪಾರದರ್ಶಕತೆಯನ್ನು ಪ್ರಶ್ನಿಸಿಸಲು ಪ್ರೇರಣೆ ನೀಡುತ್ತದೆ.
ಒಂದು ಮೂಲದ ಪ್ರಕಾರ, ಅವರು ರಹಸ್ಯವಾಗಿ ರಷ್ಯ ತೆರೆಳಿದ್ದಾರೆ  ಎಂತಾದರೆ, ಇನ್ನೂ ಕೆಲವು ಮೂಲಗಳ ಪ್ರಕಾರ, ಅವರು ರಷ್ಯದಲ್ಲಿ ಯುದ್ಧ ಖೈದಿಯಾಗಿದ್ದಾರೆ ಎಂಬುದು, ಬಲೂಚಿಸ್ಥಾನದಲ್ಲೆಲ್ಲೋ  ಕೊಲೆಯಾದರು, ೧೯೬೭ರ ತನಕ ವಿಜಯ್ ಭಗವಾನ್ ಎಂಬ ಹೆಸರಿನಲ್ಲಿ ಜೀವಿಸಿರುವುದು, ೧೯೭೫ರ ತನಕ ಗಮ್ ನಾಮೀ ಬಾಬಾ ಎಂಬ ಹೆಸರಿನಲ್ಲಿ ಜೀವಿಸಿರುವುದು. ಕೇವಲ ಊಹಾಪೋಹವಷ್ಟೇ, ಯಾವುದಕ್ಕೂ ಖಚಿತ ಮಾಹಿತಿಗಳಿಲ್ಲ, ಸಾಕ್ಷಿ ಪುರಾವೆಗಳಿಲ್ಲ.
ಹಾಗಾದರೆ ನೇತಾಜಿ ಕಣ್ಮರೆ ಅಷ್ಟೊಂದು ನಿಗೂಢವಾಗಿ ಉಳಿಯಲು ಕಾರಣವೇನು? ಭಾರತ ಸರಕಾರನಾ? ಭಾರತದ ಆಯೋಗಕ್ಕೆ ಸ್ಪಂದಿಸದ ಇತರೆ ರಾಷ್ಟ್ರಗಳಾ? ಸ್ವಾತಂತ್ರ್ಯ ಪೂರ್ವ ಒಳ ರಾಜಕೀಯವಾ? ಇದೆಲ್ಲದರ ಮೇಲೆ ಮುಖರ್ಜಿ ಆಯೋಗ, ಕೊಂಚ ಮಟ್ಟಿಗೆ ಬ್ಯಾಟರಿ ಹಾಕಿ ಸತ್ಯ ಬಗೆಯಲು ಪ್ರಯತ್ನವೇನೋ ಮಾಡಿತಾದರೂ, 'ನೇತಾಜಿ ಆ ವಿಮಾನ ಅಪಘಾತದಲ್ಲಿ ಸತ್ತಿಲ್ಲವೆಂದು' ಸಾಕ್ಷಿ ಸಮೇತ ಪ್ರತಿಪದಿಸಿತಾದರೂ, ನೇತಾಜಿ ಎಲ್ಲಿ ಹೋದರು ಎಂಬ ಪ್ರಶ್ನೆ ಕೋಟಿ ರೂಪಾಯಿ ಪ್ರಶ್ನೆಯಾಗಿಯೇ ಉಳಿಸಿಬಿಟ್ಟಿತು.


ನಮ್ಮೆಲ್ಲರ ಸ್ವಾತಂತ್ರ್ಯಕ್ಕಾಗಿ, ಶ್ರೆಯೋಭಿಲಾಷಕ್ಕಾಗಿ ಬಡಿದಾಡಿದ ನೇತಾಜಿಯ ಬಗ್ಗೆ ಯಾಕಿಷ್ಟು ತಾತ್ಸಾರ? ಅಂಥ ಮಹಾನ್ ನಾಯಕರು ಕಾಣೆಯಾದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದಿರುವಾಗ ನಮ್ಮಂಥ ಜನಸಾಮಾನ್ಯರು ಕಾಣೆಯಾದರೆ ಗತಿಯೇನು?

ಜಪಾನ್ ಹೇಳುವ ಪ್ರಕಾರ, ವಿಮಾನ ಅಪಘಾತದಲ್ಲಿ ನೇತಾಜಿ ತೀರಿ ಹೋದರು ಎಂಬ ಸುಳ್ಳನ್ನು, ಭಾರತದ ಜನಮಾನಸ ಯಾವತ್ತೂ ಒಪ್ಪುವುದಿಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾ, 'ನೇತಾಜಿಯ ಸಾಧನೆಗಳನ್ನು ನಾವು ಎಂದು ಮರೆಯುತ್ತೆವೆಯೋ ಅಂದೇ ಅವರು ಸತ್ತಂತೆ', ಎಂದು ಹೇಳುತ್ತಾ, ಮತ್ತೆ ಹುಟ್ಟಿ ಬನ್ನಿ ನೇತಾಜಿ, ಹಿಂದೂಸ್ತಾನವು ಎಂದೂ ಮರೆಯದ ಭಾರತರತ್ನವು ನೀವು, ನಿಮ್ಮನ್ನೆಂದೂ ಮರೆವೆವು ನಾವು. ನಿಮಗೂ ಏನಾದರೂ ಅನಿಸಿದರೆ, ಪ್ರತ್ಯುತ್ತರಕ್ಕಾಗಿ ಯಾವತ್ತೂ ಕಾಯುವ, ನಿಮ್ಮವ
ಅರವಿಂದರಾಜ ಬಿ ದೇಸಾಯಿ. 

Sunday, April 21, 2013

ಪಾಪಿಗಳ ಲೋಕದಲ್ಲಿ:- ಭೂಗತ ಲೋಕದ ತೆರೆ ಮರೆಯ ವಿಮರ್ಶೆ

ನಾನು ಯಾವಾಗಲೂ ಕಾದಂಬರಿಗಳನ್ನು  ಕೊಳ್ಳುವಾಗ, ಅದರ ಪೂರ್ವಾಪರಗಳನ್ನು ಅಭ್ಯಸಿಸಿ, ಕೊಂಡು ಓದಿ ಆನಂದ ಪಡುವ ಸಾಮಾನ್ಯ ಜೀವಿ. ನನಗೆ ಇತಿಹಾಸ, ದೇಶ, ಯುದ್ಧ, ರಾಜಕೀಯ, ಪ್ರೇಮ ಕಾದಂಬರಿಗಳ ಮೇಲೆ ಹೆಚ್ಚಿನ ಆಸಕ್ತಿ. ಆದರೂ ಈ ಬಾರಿ ನನಗೇ ಗೊತ್ತಿಲ್ಲದ ಹಾಗೆ ಈ ಹೊತ್ತಿಗೆಯನ್ನು ಕೊಂಡಾಗಿತ್ತು, ಇನ್ನು ಓದಿ ಮುಗಿಲಸಲೇಬೇಕಲ್ಲ, ಇಲ್ಲವೆಂದರೆ ಪೈಸಾ ವಸೂಲ್ ಹೇಗಾದಿತು?...  ಓದಲೋ? ಬೇಡವೋ? ಎನ್ನುವ ನನ್ನ ತಳಮಳಕ್ಕೂ ಕಾರಣವಿದೆ. ಇದು ಒಂದು ಭೂಗತ ಲೋಕದ ರಕ್ತಸಿಕ್ತ ದಿನಗಳ ಚುಟುಕು ಚಿತ್ರಣ  ಮೂಡಿಸುವಂಥಹ ರವೀ ಬೆಳೆಗೆರೆಯವರ ಕಾದಂಬರಿ.
ಬಿಸಿರಕ್ತದ ತರುಣ, ಎಲ್ಲಾದರೂ ಅನ್ಯವಾದಾಗ, ಅಪಚರವಾದಾಗ, ಪಾಪವಾದಾಗ, ಉರಿದು ಬೀಳುವ ಕ್ರುದ್ಧನಾಗುವ ನಾನು, ಅದೆಷ್ಟು ಸಂಯಮದಿಂದ ಈ ಪಾಪದ, ಕೊಲೆಗಡುಕರ, ತಲೆಹಿಡುಕರ, ಧರ್ಮಹೀನ ಮನುಷ್ಯರ ಕಥೆಗಳನ್ನು ಓದಿದೆನೆಂದು ಆಶ್ಚರ್ಯ ಮೂಡುತ್ತದೆ. ನನ್ನಂಥಹ ಯುವಕರ ಪಾಲಿಗೆ ಏನು ಸಂದೇಶ ಕೊಡುತ್ತದೆ ಈ ಪುಸ್ತಕ? ಏನು ಸಾಧಿಸಲೆಂದು? ಯಾರ ಸ್ಪೂರ್ತಿಗಾಗಿ, ಈ ಪುಸ್ತಕ ಹಿಡಿದೆನೆಂದು ಈ ಹೊತ್ತಿಗೂ ತಿಳಿದಿಲ್ಲ. ಬಹುಷಃ ರವಿ  ಬೆಳೆಗೆರೆಯಂಥ ಮಾಗಿದ ಕಾದಂಬರಿಕಾರರ ಇದೊಂದು ಪುಸ್ತಕ ಓದಿದರೆ ತಪ್ಪಲ್ಲ ಎಂದೆನಿಸಿ ಶುರುಮಾಡಿದೆ. 
                ಎಂಭತ್ತು ತೊಂಭತ್ತರ ದಶಕದ ರಕ್ತದೋಕುಳಿಯ, ಸಾಲು ಸಾಲು ಕೊಲೆಗಳ, ಸಾಲು ಸಾಲು ಮಾನಭಂಗಗಳ, ರೌಡಿ ಷೀಟರುಗಳ ಅಬ್ಬರ ಕೋಪತಾಪ, ಜನಸಾಮಾನ್ಯರ ಅಸಹಾಯಕತೆ, ರಾಜಕಾರಣಿಗಳ ಅವಕಾಶವಾದಿತನ, ಸತ್ಯ ಘಟನೆಗಳ ಸರಮಾಲೆಯೇ ಈ ಕಾದಂಬರಿ. ಕತ್ತಲಾದರೆ ಎಚ್ಚರಗೊಳ್ಳುವ ಈ ಭೂಗತ ಲೋಕದ ಪ್ರತೀ ರೌಡಿಗಳ ಮನಸ್ತಿತಿ, ಮನಸ್ತಾಪ, ಹೆದರಿಕೆ, ಭಂಡತನ, ಕ್ರೌರ್ಯ, ಹಿಂಸೆ, ಮೃಗತನ, ಚಾಣಾಕ್ಷತನ, ರೌಡಿಗಳೇ ಹೇಳಿದ ಕಥೆಗಳ ಸುತ್ತ ಗಿರಕಿ ಹೊಡಿಯುತ್ತದೆ 'ಪಾಪಿಗಳ ಲೋಕದಲ್ಲಿ'. 
                 ಕೊತ್ವಾಲ್ ರಾಮಚಂದ್ರನ ರೋಲ್ ಕಾಲ್, ಜಯರಾಜ್ ತಾನಿರುವ ಜೈಲಿನಿಂದಲೇ ಜಗತ್ತನ್ನು ಆಳಿದ ರೀತಿ, ಆಯಿಲ್ ಧಂದೆಯನ್ನು ಅಷ್ಟೊಂದು ಅಚ್ಚುಕಟ್ಟಾಗಿ ನಡೆಸಿದ ಆಯಿಲ್ ಕುಮಾರನ ರೀತಿ, ಮುಟ್ಟಿದರೆ ಮಾಸುವ ಮುತ್ತಪ್ಪ ರೈ ಎಂಬಾತನ ರೀತಿ, ಎಂಥ ಚಿಕ್ಕ ವಯಸ್ಸಿನ ಪುಡಿ ರೌಡಿಗಳಲ್ಲಿ ಭೂಗತ ಲೋಕದ ಭಯಾನಕ ಆಸೆಗಳ ಬಾಗಿಲು ತೆರೆದುಕೊಂಡರೆ ಆಶ್ಚರ್ಯವೇನಿಲ್ಲ. ಆದರೆ, ಅದರ ಹಿಂದಿದ್ದ (ತೆರೆಯ ಹಿಂದಿನ) ಮಸಲತ್ತುಗಳು, ಪೋಲೀಸರ ಬೆಂಡೆತ್ತು (ಏರೋಪ್ಲೇನ್ ), ಯಾವ ರೌಡಿಯ ಬಿಸಿರಕ್ತವನ್ನು ತಣ್ಣಗೆ ಮಾಡುವಷ್ಟು ಬಲಶಾಲಿಯಾಗಿದ್ದವು, ಈಗಲೂ ಇವೆ. 
                ಈ  ಕಾದಂಬರಿ ಓದುವಾಗ, ನಾನಿರುವ ಸ್ಥಳವಾದ ರಾಜಾಜಿನಗರದ  ಕೆಲವು ದೃಶ್ಯಗಳು ಬಂದರೆ, ಬಸವನಗುಡಿಯ ಬಗೆ ಕತೆಗಳಲ್ಲಿ ಪ್ರಸ್ಥಾಪವಾದರೆ, ನಾನಿರುವ ಪ್ರದೇಶದಲ್ಲಿ ಇಂಥ ಭಯನಕಗಳು ನಡೆದಿವೆಯಾ? ರಕ್ತದ ಹೊಳೆಹರೆದಿದೆಯಾ? ಎಂದು ಯೋಚನಾ ಲಹರಿಗೆ ಇಳಿದರೆ, ಒಂದು ಕ್ಷಣ ಮೈಯಲ್ಲಿ ನಡುಕ ಬಂದಿದ್ದಂತೂ ಸುಳ್ಳಲ್ಲ. ಈಗ ಆ ರಕ್ತದ ಹೊಳೆ ಬತ್ತಿ ಹೋಗಿ ಟಾರು ರೋಡು ಹಾಕಿರುವುದೂ ಅಷ್ಟೇ ಸತ್ಯ. ಆ ಕಾಲದಲ್ಲಿ ಅಷ್ಟೊಂದು ಭಾಯಾನಕಗಳು ಘಟಿಸುವುದಕ್ಕೆ ಕಾರಣವೇನಿರಬಹುದೆಂದು ನನ್ನಲ್ಲಿ ನಾನೇ ವಿಮರ್ಶೆ ಮಾಡಿಕೊಂಡಾಗ, ಬಿಟ್ಟಿ ದುಡ್ಡು ಬರುವಾಗ ಬಗ್ಗಿಸಿ ದುಡಿದು ಯಾಕೆ ತಿನ್ನಬೇಕು ಎಂಬ ಸೋಮಾರಿಗಳೇ ಆಗಿನ ರೌಡಿಗಳು! ಕುಡಿತ, ಜೂಜು, ಹೆಂಗಳೆಯರ ಸಹವಾಸ, ಒಟ್ಟಿನಲ್ಲಿ ಒಂದು ವರ್ಣರಂಜಿತ ಬದುಕು. ಇದನ್ನು ಸಾಗಿಸಲಿಕ್ಕೆ ಬೇಕಾಗಿದ್ದು ಒಂದು ಬ್ಲೇಡು, ಒಂದು ಮಚ್ಚು (ಲಾಂಗ್) ಒಂದಿಷ್ಟು ಭಂಡತನ, ಮುಗೀತು. ಭಂಡತನದ ಪರಮಾವಧಿ ಭೂಗತ ಲೋಕದೊಳಕ್ಕೆ 'ರೆಡ್ ಕಾರ್ಪೆಟ್'.. 
                  ಜಯರಾಜ್, ಕೊತ್ವಾಲ್ ರಾಮಚಂದ್ರ,  ಆಯಿಲ್ ಕುಮಾರ, ಮುತ್ತಪ್ಪ ರೈ, ಎಂ ಸಿ ಪ್ರಕಾಶ್, ಬಿಂಡ, ಸಿದ್ದ, ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಮುಚ್ಚ ರಾಜೇಂದ್ರ, ಡೆಡ್ಲಿ ಸೋಮ, ಚಂದು, ರಾಜಶೇಖರ್, ಬಸವ, ಕರಿಯ, ಸಕ್ರೆ, ಶ್ರೀರಾಂಪುರ್ ಕಿಟ್ಟಿ, ಕುಳ್ಳ ನಾರಾಯಣ, ಪಟ್ರೆ ನಾರಾಯಣ, ಕೋಟೆ ನಾಗರಾಜ, ಕೋಟೆ ರಾಜೇಂದ್ರ, ಕಾಲಾ ಪತ್ಥರ್, ಕೋಳಿ ಫ್ಹಯಾಜ್, ಬಲರಾಮ್, ಚೋಟು ಪ್ರಕಾಶ್, ಹೀಗೆ ಭೂಗತ ಲೋಕದ ಭಂಡರ ಹೆಸರುಗಳನ್ನು ಬೆರೆಯುತ್ತ ಕುಳಿತರೆ ಕಾಗದ ಸಾಕಾಗದು. ಇವರೆಲ್ಲರ ಸ್ಥೂಲ ಚಿತ್ರಣ ಕಣ್ಣು ಮುಂದೆ ಬಂದು ಹೋಗುವಂಥ ಶಕ್ತಿ ಬೆಳೆಗೆರೆಯವರ ಬರವಣಿಗೆಗಿದೆ.
                 ಹಾಯಾಗಿ ಕಾಲೇಜಿಗೆ ಹೋಗಿ ಗೆಳೆಯರ ಜೊತೆ ಗಂಟೆಗಟ್ಟಲೆ ಗೀಳು ಮಾತಾಡಿ, ಅಲ್ಲೊಂದಿಷ್ಟು ಇಲ್ಲೊಂದುಷ್ಟು ಶಿಕ್ಷಕರ, ಅಪ್ಪ, ಅವ್ವ, ಅಣ್ಣನ ಹತ್ತಿರ ಕೀಟಲೆ ಮಾಡಿಕೊಂಡು, ಚಟಕ್ಕಾಗಿ ಕೆಲವು ಕನ್ನಡ ಪುಸ್ತಕಗಳನ್ನು ಓದಿಕೊಂಡು, ಬೋರು ಹೊಡೆದಾಗ ಟ್ರಿಪ್ ಹಾಕುವ ಅದೃಷ್ಟ, ಬಹುಚಂದದ ಬದುಕನ್ನು ಬಹುಷಃ ಈ ಭೂಗತ ಲೋಕದ ಕಿರೀಟವಿಲ್ಲದ ಅನಭಿಷಕ್ತ ದೊರೆಗಳು ನೋಡಿರಲಿಕ್ಕಿಲ್ಲ, ಅನುಭವಿಸಿರಲಿಕ್ಕಿಲ್ಲ.
              ನೋಡಿದ್ದರೆ, ಅನುಭವಿಸಿದ್ದರೆ ಅಂಥ ಲೋಕಕ್ಕೆ ಕಾಲಿಡುತ್ತಿರಲಿಲ್ಲವೇನೋ! ನಮ್ಮ ಹಿರಿಯರ ಪುಣ್ಯದಿಂದಲೇ ಏನೋ? ನಮಗೆ ಇಂಥ ಬದುಕು ಸಿಕ್ಕಿದೆ, ಕಲಿಯೋಣ ಸವಿಯೋಣ .. 
               ಈ ಕೋಲ್ಡ್ ಬ್ಲಡೆಡ್ ಮರ್ಡರ್ ರೌಡಿಗಳನ್ನು, ಹಿರೋಗಳನ್ನಾಗಿ ವಿಜ್ರುಂಬಿಸಿರುವುದು ಕೊಂಚ ಮಟ್ಟಿಗೆ ಖೇದ ಉಂಟು ಮಾಡುವ ಸಂಗತಿ. ಹೊತ್ತು ಕಳೆಯಲು ಈ ಹೊತ್ತಿಗೆಯನ್ನು ಓದುವುದಾದರೆ, ಓದಿ ಆನಂದಪಡಿ. ಯಾವುದೋ ಸಂದೇಶಕ್ಕಾಗಿ, ಸ್ಪೂರ್ತಿಗಾಗಿ, ಇದನ್ನು ಓದುವುದಾದರೆ, ಖಂಡಿತ ಬೇಡ. 
                   ಪಾಪದ್ದು ಅನ್ನಿಸಿದರೆ, ಪ್ರತ್ಯುತ್ತರ ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ. 


ಎಂದೆಂದೂ ನಿಮ್ಮವ,
ಅರವಿಂದರಾಜ ಬಿ ದೇಸಾಯಿ.