A r v i n d r a j   D e s a i

Wednesday, March 4, 2015

ಪ್ರಾಥಮಿಕ ಶಿಕ್ಷಣ: ವೈಫಲ್ಯದ ಹೊಣೆ ಹೊರುವವರು ಯಾರು?

ಶಿಕ್ಷಣ, ಅದರಲ್ಲೂ ಪ್ರಾಥಮಿಕ ಶಿಕ್ಷಣ ಅನ್ನುವುದು ಬಹಳ ಗಂಭೀರ ವಿಷಯ, ಇಂಥಹ ವಿಷಯದ ಬಗ್ಗೆ ಬ್ಲಾಗ್ ಬರೆಯುವಾಗ ತುಂಬಾ ಜಾಗರೂಕತೆಯಿಂದ ಬರೆಯಬೇಕೆಂಬ ಅರಿವು ನನಗಿದೆ. ಇದು ನನ್ನ ಆಸಕ್ತಿ ವಿಷಯ ಕೂಡ ಹೌದು. ನನ್ನ ಅಪ್ಪಾಜಿಯವರು ಪ್ರಾಥಮಿಕ ಶಾಲಾ ಶಿಕ್ಷಕರು. ನಾನು ಮತ್ತೂ ನನ್ನ ಅಪ್ಪಾಜಿ ಆಪ್ತಮಿತ್ರರಿಗಿಂತ ಹೆಚ್ಚು. ನಾನು ಊರಿಗೆ ಹೋದಾಗ ಯಾವುದೇ ಮುಚ್ಚುಮರೆಯಿಲ್ಲದೇ ಎಲ್ಲ ವಿಷಯಗಳ ಬಗ್ಗೆ ವಾಕಿಂಗ್ ನೆಪದಲ್ಲಿ, ಮನೆಯಲ್ಲಿ ಕುಳಿತಾಗ, ಎಲ್ಲೆಂದರಲ್ಲಿ ಶಿಕ್ಷಣ, ಸಮಾಜ,ಧರ್ಮ, ಕ್ರಿಕೆಟ್, ರಾಜಕೀಯದ ಬಗ್ಗೆ ಹರಟುತ್ತಲೇ ಇರುತ್ತೇವೆ. ಶಿಕ್ಷಣ ಮುಕ್ತವಾಗಿ ಚರ್ಚೆಗೆ ಬರುವ ವಿಷಯ. ಇಲ್ಲಿ ಬರೆಯುವ ವಿಷಯ ಅವರಿಂದ ಸ್ಪೂರ್ತಿಗೊಂಡವು.
          ಗ್ರಾಮೀಣ ಶಾಲೆಗಳು ನಮ್ಮ ನಾಡಿನ ಸಾಂಸ್ಕೃತಿಕ ಹೃದಯಗಳು. ಪ್ರಾಥಮಿಕ ಶಾಲೆಗಳ ಬಗ್ಗೆ ನಮಗೆ ತಿಳಿದಿರುವುದಾರೂ ಏನು? ಮಧ್ಯಾನ್ಹದ ಬಿಸಿಯೂಟ, ಸಮವಸ್ತ್ರ, ಉಚಿತ ಟೆಕ್ಸ್ಟ್ ಬುಕ್ಸ್, ಸಮವಸ್ತ್ರ, ಕ್ಷೀರಭಾಗ್ಯ, ಎಲ್ಲಾ ಫ್ರೀ ಫ್ರೀ ಫ್ರೀ. ಕಲಿಕೆ ಯಾವ ಮಟ್ಟಕ್ಕಿದೆ ಎಂಬುದು ಯಾರು ಬಲ್ಲರು? ಸರ್ವ ಶಿಕ್ಷಣ ಅಭಿಯಾನ ಸೇರಿ ಹಲವಾರು ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋಟ್ಯಂತರ ಹಣ ಖರ್ಚು ಮಾಡುತ್ತವೆ. ಶೈಕ್ಷಣಿಕ ಯೋಜನೆಗಳಿಗೆ ನಮ್ಮಲ್ಲಿ ಹಣದ ಕೊರತೆ ಇಲ್ಲ. ಆದರೂ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಆಗುತ್ತಿಲ್ಲ. 5ನೇ ತರಗತಿ ವಿಧ್ಯಾರ್ಥಿಗೆ 2ನೇ ತರಗತಿಯ ಪುಸ್ತಕ ಓದಲು ಬರುವುದಿಲ್ಲ, ಐದು ಮಂದಿಯಲ್ಲಿ ಕನಿಷ್ಠ ಇಬ್ಬರಿಗೆ 11ರಿಂದ 99ರ ವರೆಗಿನ ಸಂಖೆಗಳನ್ನು ಗುರುತಿಸಲು ಬರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವು ಎಡವುತ್ತಿರುವುದಾದರೂ ಎಲ್ಲಿ? ಕಲಿಕೆ ಯಾವ ಮಟ್ಟಕ್ಕಿದೆ ಎಂಬುದು ಆ ದೇವರೇ ಹೇಳಬೇಕು. ಈ ವೈಫಲ್ಲ್ಯಕ್ಕೆ ಹೊಣೆ ಯಾರು? ಶಿಕ್ಷಕರಾ? ಶಿಕ್ಷಣ ಏಲಾಖೆನಾ? S.D.M.C? ಆಧಿಕಾರಿಗಳಾ? ಸರ್ಕಾರವಾ? ಸಮಾಜವಾ?. ವೈಫಲ್ಲ್ಯಕ್ಕೆ ಎಲ್ಲರೂ ಒಂದಿಲ್ಲ ಒಂದು ರೀತಿಯಲ್ಲಿ ಭಾಗಿದಾರರೇ. ಶಿಕ್ಷಣದಲ್ಲಿ ಎಲ್ಲರ ಪಾತ್ರಗಳ ಬಗ್ಗೆ ಸಕಾರಾತ್ಮಕ ಚರ್ಚೆಯಾಗಬೇಕು.
           ಮೊದಲಿಗೆ ಸರ್ಕಾರ ಮತ್ತು ಅದರ ಯೋಜನೆಗಳ ಬಗ್ಗೆ ಮಾತನಾಡುವುದಾದರೆ, 1986ರಲ್ಲಿ ಒಂದು ಶಾಲೆಗೆ ಪ್ರಾಥಮಿಕ ಅವಶ್ಯಕತೆಗಳಾದ ಏರಡು ಕೋಣೆ, ಇಬ್ಬರು ಶಿಕ್ಷಕರು, ಅವರಿಗೆ ಟ್ರೈನಿಂಗ್ ಮತ್ತು ಶಾಲೆಗೊಂದು ಮೈದಾನ ಇರಲೇಬೇಕೆಂಬ ಕಡ್ದಾಯದೊಂದಿಗೆ ಕಪ್ಪು ಹಲಗೆ ಕಾರ್ಯಾಚರಣೆಯನ್ನು ತಂದರು. ಈಗ ಸರ್ವ ಶಿಕ್ಷಣ ಅಭಿಯಾನ ಮತ್ತು RTE ಯೋಜನೆಗಳು ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸಿವೆ. ಆದರೂ ಏರು ಗತಿಯ ಸುಧಾರಣೆ ಏನು ಆಗಿಲ್ಲ ಅನ್ನುವುದೂ ಸತ್ಯ. ಸರ್ಕಾರದ ವಿಧ್ಯಾರ್ಥಿಗಳ ಮೇಲಿನ ಪ್ರಯೋಗಗಳೇ ನಿಧಾನ ಗತಿಗೆ ಕಾರಣ ಇರಬಹುದು. SSA ಅನುಷ್ಟಾನವಾದಾಗ ರಾಜ್ಯದ ಸುಮಾರು 26,000ಶಾಲೆಗಳ ಪೈಕಿ 5,000 ಶಾಲೆಗಳಲ್ಲಿ 8ನೇ ತರಗತಿಯನ್ನು ಪ್ರಾರಂಭಿಸಿತು. ಅಲ್ಲಿ ಸರಿಯಾದ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಲ್ಲದೆ ಮಕ್ಕಳ ಸ್ಥಿತಿ ICU ನಲ್ಲಿರುವ ರೋಗಿಯಂತಾಗಿದೆ. ಮೊದಲು ವಿಷಯಕ್ಕೊಂದು ಪುಸ್ತಕ ಇರುತ್ತಿತ್ತು, ಆಮೇಲೆ ತ್ರೈಮಾಸಿಕ, ಈಗ ಸೆಮೆಸ್ಟರ್. ಯಾಕೀ ಪ್ರಯೋಗಗಳು? ಇನ್ನು ನಲಿ-ಕಲಿ. 1ನೇ ತರಗತಿಯಲ್ಲಿ ಸುಮಾರು 967 ಕಾರ್ಡ್, 2ನೇ ತರಗತಿಯಲ್ಲಿ 985 ಕಾರ್ಡ್. ಅದರಲ್ಲಿನ ಮೆಟ್ಟಿಲು, ಸಾಧನೆ. ಏನಿವು? ಪ್ರಾಥಮಿಕ ಶಿಕ್ಷಣಕ್ಕೆ ಹೊರಗಿನವನಾದ ನನಗೆ, ಈ ಕಲಿಕೆಯ ಅಗತ್ಯತೆಯ ಬಗ್ಗೆ ಇನ್ನು ತಿಳಿದಿಲ್ಲ. ನಲಿ-ಕಲಿ ಯಲ್ಲಿ ಮಕ್ಕಳು ಮನೆಗೆ ಪುಸ್ತಕ ತೆಗೆದುಕೊಂಡು ಹೋಗುವ ಹಾಗಿಲ್ಲವಂತೆ. ಪುಸ್ತಕಗಳು ಮಗುವಿನ ಮತ್ತು ಪಾಲಕರ ನಡುವಿನ ಸೇತುವೆಯಂತೆ ಇರುತ್ತವೆ. ಇನ್ನು ನಾವು ಕಲಿತ ಅ, ಆ,ಇ,ಈ ಗೂ ಈಗಿನ ರ,ಗ,ಸ,ದ,ಅ ಗೂ ಸಂಬಂಧವೇ ಇಲ್ಲ. ಯೋಜನೆ ಬಗ್ಗೆ ಪಾಲಕರಿಗೆ ತಿಳಿಸುವ ಸೌಜನ್ಯ ಕೂಡ ಇಲಾಖೆಗೆ ಇಲ್ಲದೆ ಹೋದರೆ ಹೇಗೆ? ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು ಭಾಗಿದಾರರಾಗುವುದು ಬೇಡವಾ?
          ಈಗ ಶಿಕ್ಷಕರ ಮತ್ತು ಅವರ ಸವಾಲುಗಳ ಬಗ್ಗೆ ಹೇಳುವುದಾದರೆ. ಶಿಕ್ಷಕರು ಸಮಾಜದ ಮತ್ತು ಇಲಾಖೆಯ ನಡುವಿನ ಕೊಂಡಿಯಿದ್ದಂತೆ. ಹಳ್ಳಿಯ ಶಾಲೆಗಲ್ಲಿ ಹಾಜರಾತಿಯದೇ ದೊಡ್ಡ ಕೊರತೆ. ದಾಖಲಾತಿ ವರ್ಷಕ್ಕೊಮ್ಮೆ ಹೇಗೋ ಮಾಡಬಹುದು. ಆದರೆ ಹಾಜರಾತಿ? ಅದು ವರ್ಷಪೂರ್ತಿ. ಹಳ್ಳಿಗಳಲ್ಲಿ ಒಕ್ಕಲುತನ ಮನೆತನಗಳು, ಗುಳೇ ಹೋಗುವವರು, ಚಿಕ್ಕ ಮಕ್ಕಳನ್ನು ಎತ್ತಿಕೊಳ್ಳಲು ಮನೆಯಲ್ಲಿ ಉಳಿಯುವ ಹುಡುಗಿಯರು, ಬಾಲಕಾರ್ಮಿಕರಾಗಿ ಕೆಲಸಕ್ಕೆ ಹೋಗುವವರು, ಬಾಲ್ಯ ವಿವಾಹವಾಗಿ ಗಂಡನ ಮನೆಗೆ ಹೋಗುವ ಮಕ್ಕಳನ್ನು ಕರೆತರುವವರು ಯಾರು? ಕೊನೆಗೆ ಇವುಗಳ ಒಟ್ಟಾರೆ ಪರಿಣಾಮ ಎದುರಿಸುವವರು ಶಿಕ್ಷಕರೇ. ಮಕ್ಕಳ ಹಾಜರಾತಿಗೆ, ಬಿಸಿಯೂಟ ತಯಾರು ಮಾಡುವುದಕ್ಕೆ, ಅದರ document maintain ಮಾಡುವುದಕ್ಕೆ, ಕ್ಷೀರ ಭಾಗ್ಯದಲ್ಲಿ ಮಕ್ಕಳಿಗೆ ಹಾಲು ಕುಡಿಸುವವರು, ಕೋಳಿಗಣತಿ, ದನಗಣತಿ, ಜನಗಣತಿ, ಸರ್ಕಾರದ ಎಲ್ಲ ಕಡತಗಳಿಗೆ ಉತ್ತರ, ಹೀಗೆ ಇಲಾಖೆಯ ಎಲ್ಲ ಕಾರ್ಯಗಳಿಗೆ ಕುತ್ತಿಗೆ ನೀಡುತ್ತಿರುವವರು ಶಿಕ್ಷಕರೇ. ಒಂದು ಜಿಲ್ಲೆಯಲ್ಲಿ ಕೆಲವು ವರ್ಷಗಳ ಹಿಂದೆ ಒಬ್ಬ ತಲೆ ಕೆಟ್ಟ ಜಿಲ್ಲಾ ಪಂಚಾಯ್ತಿ ಅಧಿಕಾರಿ, ಶೌಚಾಲಯಗಳನ್ನು ಮಕ್ಕಳಿಂದ ಸ್ವಚ್ಛ ಮಾಡಿಸಿದ್ದಕ್ಕಾಗಿ ಶಿಕ್ಷಕನನ್ನು ಅಮಾನತಿನಲ್ಲಿಟ್ಟ ನೆನಪು ಈಗಲೂ ಎಲ್ಲರಿಗೂ ಇರಬಹುದು. ಅರ್ರೇ!! ತಮ್ಮ ಶಾಲೆಯನ್ನು ಮಕ್ಕಳು ಶುಚಿಯಾಗಿ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ? ಅದನ್ನು ಶಿಕ್ಷಕರೇ ಮಾಡಬೇಕಾ? ಶಿಕ್ಷಣ ನಿಂತ ನೀರಲ್ಲ. ಬದಲಾವಣೆಗಳು ಅವಶ್ಯ. ಹಾಗಂತ ಅಧಿಕಾರಿಗಳು ದಿನಕ್ಕೊಂದು ಸುತ್ತೋಲೆ ಹೊರಡಿಸಿ, ಬದಲಾವಣೆ ಆಗಿಬಿಡಬೇಕು ಎಂದರೆ ಆಗಿಬಿಡುವುದಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಬರುವ IAS ಅಧಿಕಾರಿಗಳು ತಮ್ಮದೇ ಆದ ಒಂದು ಸೆಟ್ ಕಾರ್ಯಕ್ರಮಗಳನ್ನು ಕೆಳಹಂತಕ್ಕೆ ರವಾನಿಸಿ ಬಿದುತ್ತಾರೆ. ಈಗಾಗಲೇ ಇಂಥ ಕಾರ್ಯಕ್ರಮಗಳು ಇವೆಯಾ ಅಂತ ಯೋಚನೆ ಯೋಚನೆ ಕೂಡ ಮಾದುವುದಿಲ್ಲ. ಇವೆಲ್ಲದರ ಪರಿಣಾಮ ಏಣಿಯ ಕಟ್ಟಾ ಕಡೆಯಲ್ಲಿ ಕೆಲಸ ಮಾಡುವ ಶಿಕ್ಷಕ ಒತ್ತಡಕ್ಕೆ ಸಿಕ್ಕಿ ಬಿಳುತ್ತಾನೆ. ಯಾವುದಾದರೂ ಪ್ರಾಥಮಿಕ ಶಾಲೆಗೆ ಹೋಗಿ ನೋಡಿದಾಗಷ್ಟೇ, ಕಳೆದ ಒಂದು ದಶಕದಲ್ಲಿ ಎಷ್ಟು ಕಾರ್ಯಕ್ರಮಗಳ ಬಗ್ಗೆ ದಾಖಲೆ ನಿರ್ವಹಿಸಬೇಕೆಂಬುದು ತಿಳಿಯುತ್ತದೆ. ಆದ್ದರಿಂದಲೇ ದಾಖಲೆಗಳ ನಿರ್ವಹಣೆ ಚೆನ್ನಾಗಿ ಆಗುತ್ತದೆ. ಕಲಿಕೆ? 'ಕೋಡಗನ ಕೋಳಿ ನುಂಗಿತ್ತಾ' ಎನ್ನುವಂತೆ, ದಾಖಲೆ ನಿರ್ವಹಣೆ ಕಲಿಕೆಯನ್ನು ನುಂಗಿ ಹಾಕಿದಂತಾಗಿದೆ.
          ಶಿಕ್ಷಕರ ತರಬೇತಿಗಾಗಿ ವಿವಿಧ ಕಾರ್ಯಕ್ರಮಗಳ ಹೆಸರಿನಲ್ಲಿ ಹಣ ಖರ್ಚು ಆಗುತ್ತಲೇ ಇದೆ, ಗುಣಮಟ್ಟ? ಜಿಲ್ಲಾ ಡಯಟ್ ಗಳು, DPEPಯ ಕೊಡುಗೆಯಾಗಿ ತಾಲೂಕಿನಲ್ಲಿ BRC (Block Resource Center), ಹೋಬಳಿಗಳ ಪ್ರತೀಕವಾಗಿ CRC (Cluster Resource Center) ಸಂಸ್ಥೆಗಳು ನಡೆಸುವ ತರಬೇತಿಯ ಗುಣಮಟ್ಟದ ಕೊರತೆ ಇದೆ. ತರಬೇತಿ ನೀಡುವವರು ಚೆನ್ನಾಗಿ ಹೋಂವರ್ಕ್ ಮಾಡಿರುವುದಿಲ್ಲ. ಜಿಲ್ಲಾ DDPI ಗಳು ಇದು ನಮ್ಮ ಕೆಲಸ ಅಲ್ಲ ಅಂತಲೇ ಭಾವಿಸುತ್ತಾರೆ. ಹೀಗಾಗಿ ಗುಣಮಟ್ಟದ ಹೊಣೆ ಯಾರದ್ದು? ಇಂಥ ತರಬೇತಿಗಳಲ್ಲಿ ಶಿಕ್ಷಕರಿಗೆ ಸಿಗಬೇಕಾದ  ಕನಿಷ್ಠ DA ಕೂಡ ಸಿಗುವುದಿಲ್ಲ, ಸಾಮೂಹಿಕವಾಗಿ ಊಟ ಮಾಡಿಸಿ ಕಳುಹಿಸುವ ಅಧಿಕಾರಿಗಳು ಅಲ್ಲಿದ್ದಾರೆ. ತರಬೇತಿಗೆ ಬರುವ ಶಿಕ್ಷಕರನ್ನು ಹಿಂದಿನ ದಿನ ಸಂಪರ್ಕಿಸಿ ಆಹ್ವಾನಿಸುತ್ತಾರೆ. ಅವರಿಗೆ ಅಲ್ಲಿ ನಡೆಯುವ ಸಾಹಿತ್ಯದ ಪ್ರತಿಗಳನ್ನೇ ಕೊಡುವುದಿಲ್ಲ. ಈ ತರಬೇತಿಗಳ ನಿರ್ವಹಣೆಯ ಬಗ್ಗೆ ಯಾರಾದರು ಆ ಕೇಂದ್ರಕ್ಕೆ ಭೇಟಿ ನೀಡಿದಾಗಲೇ ಅದು ಅರ್ಥವಾಗುತ್ತದೆ. ಪ್ರತಿಭಾವಂತ ಶಿಕ್ಷಕರು ರಾಜ್ಯದ ಮೂಲೆ ಮೂಲೆಯಲ್ಲಿರುತ್ತಾರೆ, ಅವರನ್ನು ಒಂದೆಡೆ ಸೇರಿಸಿ ತರಬೇತಿ ಕ್ಷೆತ್ರವೇಕೆ, ಇಡೀ ಶಿಕ್ಷಣ ಕ್ಷೇತ್ರಕ್ಕೆ ಒಂದು ಚಿಂತಕರ ಚಾವಡಿ (Think Tank) ನಿರ್ಮಾಣ ಮಾಡಬಹುದು. ಅರ್ಥಪೂರ್ಣ ತರಬೇತಿಗಳಿಂದ ಒಂದು ಸಂಪನ್ಮೂಲ ತಂಡವನ್ನು ರಾಜ್ಯಮಟ್ಟದಲ್ಲಿ ಪೋಷಿಸಬೇಕು. ಇನ್ನು ಎಲ್ಲಾ ಶಾಲೆಗಳಲ್ಲಿ 30:1  ಶಿಕ್ಷಕರ ವಿದ್ಯಾರ್ಥಿಗಳ ಅನುಪಾತ ಇದೆ. 100 ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ 7 ತರಗತಿಗಳಿಗೆ 4 ಶಿಕ್ಷಕರೆಂದರೆ ಹೇಗೆ? ತರಗತಿಗೆ ಒಬ್ಬ ಶಿಕ್ಷಕನಾದರೂ ಬೇಡವೇ? ಕೆಲವರು ತರಬೇತಿಗೆ ತೆರಳಿ, ಯಾರಾದರೂ ವೈದ್ಯಕೀಯ ರಜೆ ತೆಗೆದುಕೊಂಡರೆ ಏನು ಪರಸ್ಥಿತಿ? ಒಬ್ಬ ಶಿಕ್ಷಕ 7 ತರಗತಿಗಳನ್ನು ಹೇಗೆ ನಿಭಾಯಿಸುವುದು? ಇನ್ನು ಮುಖ್ಯ ಶಿಕ್ಷಕರು, ಅವರ ಕಲಿಕಾ ಅನುಭವವನ್ನು ಸದುಪಯೋಗ ಮಾಡಿಸಿಕೊಳ್ಳುವುದು ಬಿಟ್ಟು, ಇಲಾಖೆಯವರು ಅವರಿಗೆ ಹೊಸ ಹೊಸ ಬಿಲ್ಡಿಂಗ್ ಕಾರ್ಯಗಳು, ದಾಖಲೆ ನಿರ್ವಹಣೆಗಳು, ಸರ್ಕಾರದ ಯೋಜನೆಗಳ ನಿರ್ವಹಣೆ ನೀಡಿದರೆ ಹೇಗೆ? ಅವರ ಅನುಭವ ಹೀಗೆ ಹೊಳೆಯಲ್ಲಿ ಕೊಚ್ಚಿಕೊಂಡು ಹೋದಂತಾಗಿ ಬಿಡುತ್ತದೆ. ಎಲ್ಲಾ ಒತ್ತಡಗಳ ನಡುವೆ ಎಳೆಯ ಕಂದಮ್ಮಗಳು ನಲುಗಿ ಹೊಗುತ್ತವೆ.
           ಇನ್ನು ಶಿಕ್ಷಕರ ಕಾರ್ಯ ಕ್ಷಮತೆಯ  ಬಗ್ಗೆ ಹೇಳುವುದಾದರೆ, 'ಪ್ರಥಮ್' ಎನ್ನುವ NGO ಸರ್ವೇ ಪ್ರಕಾರ, ನಿಷ್ಠೆಯಿಂದ ಕೆಲಸ ಮಾಡುವವರು ಕೇವಲ 53% ಮಾತ್ರ, ಇನ್ನುಳಿದವರು ದಾಖಲೆಗಳನ್ನು ಶಿಸ್ತಿನಿಂದ ನಿರ್ವಹಣೆ ಮಾಡಿ, ಕಲಿಕೆಯನ್ನು ಗಾಳಿಗೆ ತೂರಿ, ಹರಟೆ ಹೊಡೆದು ಕಾಲಹರಣ ಮಾಡುವವರಿಗೆ ಏನು ಹೇಳೋಣ?
          ಪಾಲಕರು ಏನು ಮಾಡುತ್ತಾರೆ? RTEನಲ್ಲಿ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸುವುದು ಅವರ ಆದ್ಯ ಕರ್ತವ್ಯ ಎಂದಿದೆ. ಕಳುಹಿಸದಿದ್ದರೆ? ಬಡತನ, ಸಾಮಾಜಿಕ ಅಸಮನತೆಯಂಥ ಈ ಸಮಾಜದಲ್ಲಿ, ಪ್ರಜಾಪ್ರಭುತ್ವ ರಾಷ್ಟ್ರ ನಮ್ಮ ದೇಶದಲ್ಲಿ, ಪೋಷಕರು ದಂಡನೆಗೆ ಅರ್ಹರಲ್ಲ. ಆದರೂ ಮಕ್ಕಳ ಶಿಕ್ಷಣದ ನೈತಿಕತೆ ದೃಷ್ಟಿಕೋನದಿಂದ ಸರಿ ಅನಿಸದು. ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂದರೆ ಹೇಗೆ? ದೇಶದ ನಾಗರೀಕರಾಗಿ ಅವರವರ ಜವಾಬ್ದಾರಿಯ ಬಗ್ಗೆ ಅವರಿಗೆ ಅರಿವಿರದಿದ್ದರೆ ಹೇಗೆ?
          SDMC, ಜನಸಾಮಾನ್ಯರಿಗೆ ಶಾಲಾ ಶಿಕ್ಷಣದ ನಿರ್ವಹಣೆಯಲ್ಲಿ ಒಂದು ನಿರ್ಣಾಯಕ ಪಾತ್ರವಿರದಿದ್ದರೆ ಯಶಸ್ಸು ಸಿಗದು ಎಂಬ ಕಾರಣಕ್ಕಾಗಿ ಸರ್ಕಾರ ಪ್ರತಿ ಶಾಲೆಗೆ ಒಂದು SDMC ಯನ್ನು ನೇಮಿಸಿದೆ. SDMC ಗಳಿಗೆ ಶಾಲಾ ಅಭಿವೃದ್ಧಿಗಾಗಿ ಬರುವ ಅನುದಾನ ಬಿಟ್ಟು ಬೇರೇನೂ ಕಣ್ಣಿಗೆ ಕಾಣುವುದಿಲ್ಲ. ಇವರು ಶಾಲೆಯ ಮುಖ್ಯ ಭೂಮಿಕೆಯಾಗಿ ರಚನಾತ್ಮಕವಾಗಿ ಕೆಲಸ ಮಾಡಬೇಕು.
         ಇಷ್ಟೆಲ್ಲಾ ಇದ್ದರೂ, ಬೇರೆ ರಾಜ್ಯಗಳಿಗೆ ನಮ್ಮ ರಾಜ್ಯದ ಸ್ಥಿತಿ ಉತ್ತಮ. ಯಾವುದೇ ಹೊಸ ಕಾರ್ಯಕ್ರಮಗಳನ್ನು ರಚಿಸುವಾಗ ಗ್ರಾಮೀಣ ಶಾಲೆಗಳ ಶಿಕ್ಷಕರನ್ನು ಸಮಿತಿಯಲ್ಲಿಟ್ಟುಕೊಂಡು, ಅದರ ಸಾಧ್ಯತೆ ಭಾದ್ಯತೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಯೋಜನೆ ರಚಿಸಬೇಕು. ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಬೇಕು. ಮುಗ್ಧ ಮಗುವಿನ ಕಣ್ಣಿನಲ್ಲಿ ಇಣುಕಿ ನೋಡಿದಾಗ, ನಿಮಗೆ ಭಗವಂತ ಕಾಣದೇ ಹೋದರೆ, ಮತ್ತೆಲ್ಲೂ ದೇವರು ಕಾಣುವುದಿಲ್ಲ. ಮಕ್ಕಳು ದೇವರ ಸಮಾನ. ಅವರ ಭವಿಷ್ಯದ ಜೊತೆ ಆಡುವುದು ಸಲ್ಲದು. ಯಾರನ್ನು ಮರೆತರೂ, ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಮಕ್ಕಳು ಎಂದಿಗೂ ಮರೆಯುವುದಿಲ್ಲ.  ನಿಮ್ಮ ಒಳ್ಳೆಯ ಕಾರ್ಯಗಳನ್ನು ನಿಮ್ಮ ಇಲಾಖೆಯವರು ಗುರುತಿಸದೇ ಹೋದರೂ, ಮನೆಯಲ್ಲಿರುವ, ಶಾಲೆಯಲ್ಲಿರುವ ನಿಮ್ಮ ಮಕ್ಕಳು ನಿಮ್ಮನ್ನು ವಾಚ್ ಮಾಡುತ್ತಿರುತ್ತಾರೆ. ನಿಮ್ಮ ವ್ಯಕ್ತಿತ್ವ ಅವರಿಗೆ ಸ್ಪೂರ್ಥಿಯಾಗಬೇಕು. ಅವರಿಗಾಗಿ ನೀವು ಹೀರೋ ಆಗಲೇಬೇಕು. ನನ್ನ ಅಪ್ಪಾಜಿ ಹೇಳುವ "ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ", ಈ ಸಮಯಕ್ಕೆ ಅರ್ಥಗರ್ಬಿತ ಮಾತು. "ನನ್ನ ಭವಿಷ್ಯವನ್ನು ರೂಪಿಸಿದವರಲ್ಲಿ ನನ್ನ ಶಿಕ್ಷಕರ ಮಹತ್ತರ ಪಾತ್ರ ಇದೆ" ಎಂದು ಹೇಳುವ ಹಲವಾರು ಸ್ನೇಹಿತರು ನನ್ನೊಂದಿಗಿದ್ದಾರೆ. ಅಂಥವರ ಭವಿಷ್ಯ ರೂಪಿಸುವಲ್ಲಿ ಶ್ರಮ ಪಡಿ. ಶಾಲೆಯಲ್ಲಿ ಪಾಠದಲ್ಲಿರುವುದನ್ನು ಯಥಾವತ್ತಾಗಿ ಹೇಳುವುದಕ್ಕಿಂತ, ಅನುಭವದ ಆಧಾರದ ಮೇಲೆ ಕಲಿಸಬೇಕು. ಮಕ್ಕಳಿಗೆ ಮುಕ್ತವಾದ ವಾತಾವರಣ ಕಲ್ಪಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ಗುರು ಬ್ರಹ್ಮೋ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಎಂಬ ದೊಡ್ಡವರ ಮಾತುಗಳು ಎಂದೆಂದಿಗೂ ಶಾಶ್ವತ. 
         ಈ ಕ್ಷೇತ್ರದಲ್ಲಿ ನನಗೆ ಯಾವುದೇ ಅನುಭವ ಇಲ್ಲದಿದ್ದರೂ, ತಾಳ್ಮೆಯಿಂದ ನನ್ನ ಬ್ಲಾಗ್ ಓದಿ ಸಹಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಬರೆದಿರುವ ಯಾವುದೇ ಅಭಿಪ್ರಾಯ ಅತಿಶಯೋಕ್ತಿ ಅನ್ನಿಸಿದರೆ ಕ್ಷಮೆ ಇರಲಿ. ಇಷ್ಟವಾದರೆ ತಿಳಿಸಿ. ಇಷ್ಟವಾಗದಿದ್ದರೂ ತಿಳಿಸಿ.

-- ದೇಸಾಯಿ ಸರ್ ಮಗ ಅರವಿಂದ್.