A r v i n d r a j   D e s a i

Wednesday, July 20, 2016

ನನ್ನ ನೆನಪಿದೆಯಾ ನಿನಗೆ...

"ನನ್ನ ನೆನಪಿದೆಯಾ ನಿನಗೆ... ನಿನ್ನ ಜನ್ಮಕ್ಕೆ ಇಷ್ಟು ಬೆಂಕಿ ಹಾಕಾ!! ನಿನ್ನದು ಅಂತ ಒಂದು ಬ್ಲಾಗು ಮಾಡ್ಕಂಡಿದಿಯಾ, ಅದರಲ್ಲಿ ಬರೆದು ವರ್ಷವೇ ಕಳೆದು ಹೋಯಿತು" ಅಂತ ನನ್ನ ಬ್ಲಾಗು ನನ್ನ ಕಿವಿಯಲ್ಲಿ ಪಿಸುಗುಟ್ಟಿದಾಗ ನೆನಪಾಗಿದ್ದು ಅದರ ಅಸ್ತಿತ್ವ. ಸರಿ ಬರೆದರಾಯಿತು ಏನಾದರೊಂದು. ಆದರೆ ಏನು  ಬರೆಯುವುದು? ಹೇಗೆ ಶುರು ಮಾಡುವುದು ಅನ್ನುವುದೇ ಮರೆತು ಹೋದಂತಾಗಿತ್ತು. ನಾವು ಮರೆತರೂ ತಾಯಿ ಕನ್ನಡಾಂಬೆ ನಮ್ಮನ್ನು ಮರೆಯುವುದಿಲ್ಲಾ, ಏನಾದರೊಂದು ದಾರಿ ತೊರಿಸುತ್ತಾಳೆಂದು ನಂಬಿ, ಕಾಗದದ ಮೇಲೆ ಪೆನ್ನು ಇಟ್ಟರೆ ಆಗಲೇ ಐದು ಸಾಲು.. ಬ್ಲಾಗು ಬರೆಯುವುದೆಂದರೆ ನನಗೂ ಇಷ್ಟವೇ! ಅದೊಂಥರಾ ಹುಚ್ಚು. ಆದರೆ ಏನು ಮಡ್ಕೊಂಡಿದಿಯಾ ಅಂತ ಯಾರಾದರೂ ಕೇಳಿದಾಗ, ಬ್ಲಾಗು ಬರೀತಿನಿ ಅಂತ ಹೇಳಿದರೆ ಕೂಳಿಗೆ ಏನಾದರೂ ದಾರಿ ಮಾಡಿಕೋ ಅಂತ ಮುಖಕ್ಕೆ ಹೂಡದಂಗೆ ಹೇಳುತ್ತಾರೆ. ನಮಗೂ ನಾಚಿಕೆ ಇಲ್ಲ! ಅವರ ಪುಂಗಿ ಅವರು ಊದಲಿ, ನಮ್ಮ ತಮಟೆ ನಾವು ಬಾರಿಸೋಣ. ಇಂಜಿನಿಯರಿಂಗ್ ನಲ್ಲಿದ್ದಾಗ ಅದೇನೋ ಗೊತ್ತಿಲ್ಲ ತುಂಬಾ ಸಮಯ ಇರ್ತಾ ಇತ್ತು. ತುಂಬಾ ಓದ್ತಾ ಇದ್ದೆ, ತುಂಬಾ ಬರಿತಾ ಇದ್ದೆ, ಕೆಲವೊಂದನ್ನು ಬ್ಲಾಗಲ್ಲಿ ಹಾಕ್ತಾ ಇದ್ದೆ, ಇನ್ನು ಕೆಲವು ಕೆಳೆದು ಹೋದವು. ಬ್ಲಾಗಿಗೆ ಮೊದಮೊದಲು ತುಂಬಾ ಪ್ರಶಂಸೆಗಳು ಬರ್ತಾ ಇದ್ದವು. ಆಮೇಲೆ ಹಾಡಿದ್ದು ಹಾಡೋ ಕಿಸಬಾಯಿ ದಾಸ ಇವನು ಅಂತ ಸ್ನೆಹಿತರೆಲ್ಲ ಓದುವುದು ಕಡಿಮೆ ಮಾಡಿಬಿಟ್ಟರು. ಏನೋ ಪಾಪ ಸ್ನೇಹಿತ ಬೇಜಾರು ಆಗ್ತಾನೆ ಅಂತ ಲೈಕ್ ಬಟನ್ ಒತ್ತಿ ಬಿಡ್ತಾರೆ ಅಷ್ಟೇ. ಪಕ್ಕದ ಮನೆಗೆ ಬಂದ ನೆಂಟರು ನಮ್ಮ ಮನೆಗೆ ಬರಲಿಲ್ಲ ಅನ್ನೋ ಹಾಗೆ ದಿನವೆಲ್ಲಾ ಫೆಸ್ಬುಕ್ ವಾಟ್ಸಾಪ್ಪ್ ಅವರಿವರ ಪ್ರೊಫೈಲ್ ಚೆಕ್ ಮಾಡೋದು ಬಿಟ್ಟು ಒಂದ್ ನಿಮಿಷ ಬ್ಲಾಗು ಓದಿದರೆ ಎನೋಗುತ್ತೆ ಇವರ ಅಜ್ಜಿ ಗಂಟು. ಮತ್ತೆ ಬುರುಡೆ ಬಿಡೊಕ್ಕೆ ಶುರು ಮಾಡಿದ ಅನ್ಕೊಂಡ್ರು ತಪ್ಪೇನಿಲ್ಲ. ನೆನಪುಗಳ ಬುತ್ತಿ ಬಿಚ್ಚಿ ಇಡುವುದೇ ಇವತ್ತು, ನಿಮ್ಮ ಕರ್ಮ ಓದಿ ಮುಂದೆ. ಇಸ್ರೋ ಲೇಔಟ್ ನಲ್ಲಿದ್ದಾಗ ನೀಲಿ ಶರ್ಟು, ಬಿಳಿಯ ಅಡಿದಾಸ್ ಚಡ್ಡಿ ಹಾಕ್ಕೊಂಡು ಕಿವಿಯಲ್ಲಿ ಹೆಡ್ ಫೋನ್ ಸಿಕ್ಕಿಸಿಕೊಂಡು ಹಂಸಲೇಖ ಸಂಗೀತ ಕೇಳುತ್ತಾ ಬೆಳ್ಳಂಬೆಳಿಗ್ಗೆ 6 ಘಂಟೆಗೆ ನಿರ್ಜನವಾದ ರೋಡುಗಳಲ್ಲಿ ನಡೆಯುತ್ತಾ ಹೊರಟರೆ ಆ ಚುಮು ಚುಮ್ಮು ಚಳಿಯ ತಂಗಾಳಿ, ಒಂದು ಬಿಸಿ ಬಿಸಿ ಕಪ್ ಕಾಫಿ, ಅಬ್ಬಾ! ಅದೇನೋ ಖುಷಿ. ಆವಾಗ ಅನ್ನಿಸ್ತಾ ಇರ್ತಿತ್ತು ಏನಾದರೂ ಬರೀಬೇಕು ಅಂತ. ಅಲ್ಲೇ ಹತ್ತಿರವಿದ್ದ ದೇವಸ್ಥಾನದ ಗಂಟೆ ನಾದ, ಆ ದೇವಸ್ಥಾನಕ್ಕೆ ಬರುತ್ತಿದ್ದ ಸುಂದರ ವದನ ಸಂಪ್ರದಾಯ ವಸ್ತ್ರ ತೊಟ್ಟ ಸಖಿಯರು ಬರುತ್ತಿದ್ದುದನ್ನು ನೋಡುತ್ತಿರುವಾಗಲೇ, ಜಗದ ಚೆಲುವೆಲ್ಲಾ ನಿನ್ನ ಕಣ್ಣಲ್ಲೇ ಅಂತ ಬರೆಯಬೇಕು ಅನಿಸುತ್ತಿತ್ತು. ಹಂಗೆ ಒಂದ್ ಸಲ ಇಲೆಯರಾಜ ಸಂಗೀತ ಹೃದಯದಲ್ಲಿ ರಿಂಗಣಿಸುತ್ತಿತ್ತು. ಅಷ್ಟು ಖಾಲಿ ಇದ್ವಿ ನಾವು ಅವಾಗ. ಅವತ್ತು ಯಾವುದಾದರೊಂದು ಲೇಖನ ಬರಿಲಿಲ್ಲ ಅಂದ್ರೆ ಸಮಾಧಾನ ಇರ್ತಾ ಇರ್ಲಿಲ್ಲ, ಒಳಗಡೆ ಯಾರೋ ಕುಳಿತ ಹಾಗೆ. ಅದನ್ನ ಬರೆದು ತಿದ್ದಿ ತೀಡಿ, ನಾನೊಂದು ಹತ್ತು ಸಲ ಓದಿ ಆಮೇಲೆ ಬ್ಲಾಗಿಗೆ ಬರುತ್ತಾ ಇತ್ತು. ಇವಾಗೆಲ್ಲಾ ಅಷ್ಟು ಸಮಯ ಇಲ್ಲ. ಆದರೂ ಸಮಯ ಬಿಡುವು ಮಾಡಿಕೊಂಡು ಬರೆಯೋಣ ಅಂತ ನಿರ್ಧಾರ ಮಾಡಿದೀನಿ. ಏನಪ್ಪಾ ನಿಂದು? ಕೊನೆಯದಾಗಿ ಏನಾದರೊಂದು ಹೇಳಿ ಸಾಯಿ ಮಾರಾಯ! ಅಂದ್ರಾ!! ಸರಿ ಏನಿಲ್ಲ! ಯಾರ ಖುಷಿಗೆ ನಾನು ಬರೆಯುವುದಿಲ್ಲ. ಕನ್ನಡದ ಹಿರಿಯ ಕವಿ ಹೇಳಿದ ಹಾಗೆ "ನನ್ನ ತಲೆಯ ಕೊನೆಯ ಕೂದಲು ಉದುರುವವರೆಗೂ ಬರೆಯುತ್ತೇನೆ,  ನಿಮಗೆ ಇಷ್ಟವಿದ್ದರೂ ಇಷ್ಟವಿರದಿದ್ದರೂ, ನನಗೆ ತೋಚಿದ್ದನ್ನು ನಾನು ಬರೆಯುತ್ತೇನೆ. ಓದುವುದು ಬಿಡುವುದು ನಿಮ್ಮ ಕರ್ಮ. ಓದುತ್ತಾ ಸಹಿಸಿಕೊಂಡಿದ್ದಕ್ಕೆ ಧನ್ಯವಾದಗಳು.