A r v i n d r a j   D e s a i

Friday, April 24, 2015

ಮೊಗ್ಗಿನ ಮನಸ್ಸುಗಳ ಮೇಲೆ ದೊಡ್ಡವರ ದರ್ಬಾರ್

ಇತ್ತೀಚಿನ ಕೆಲವೊಂದು ಮಕ್ಕಳ ಮಲಿನ ಸಂಗತಿಗಳು, ನನ್ನನ್ನು ಖಿನ್ನನನ್ನಾಗಿಸಿ ಈ ಲೇಖನ ಬರೆಯುವುದಕ್ಕೆ ದಾರಿಮಾಡಿಕೊಟ್ಟಿವೆ. ನನ್ನಲ್ಲಿರುವ ಕೋಪ ಹೊರಹಾಕುವ ಪ್ರಯತ್ನವೂ ಇರಬಹುದು. 
ಮಕ್ಕಳು ಏನು ಮಾಡಿದರೂ ಚಂದ, ಪುಟ್ಟ ಮಕ್ಕಳ ಮನಸ್ಸು ತಿಳಿ ನೀರು ಇದ್ದ ಹಾಗೆ. ನಾನು ಎಷ್ಟೋ ಸಲ ಮಕ್ಕಳೊಂದಿಗೆ ಮಾತನಾಡುತ್ತಾ, ಅವು ಏನೂ ತಿಳಿಯದೆ ಕೊಡುವ ಚಿಕ್ಕ ಚಿಕ್ಕ ಉತ್ತರಗಳು, ನನ್ನನ್ನು ಮಗುವಾಗಿಸಿ, ತಮ್ಮ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಂಡು ಬಿಡುತ್ತವೆ. ನಮ್ಮಲ್ಲಿ ಮದ, ಮತ್ಸರ, ಕೋಪ, ದ್ವೇಷ, ಕ್ರೋಧ, ಆಸೆ ಹೊತ್ತಿ ಉರಿಯುತ್ತಿರುವಾಗ ಮಕ್ಕಳೊಂದಿಗೆ ಒಂದು ಬೈಠಕ್ ಹಾಕಿ ನೋಡಿ, ನೀವು ಕೂಡಾ ಮಗುವಿನೊಂದಿಗೆ ಮಗುವಾಗುತ್ತೀರಾ. ಇಂಥ ನಿಶ್ಚಲ ನಿರ್ಮಲ ಮನಸ್ಸುಗಳ ಬಿಳಿ ಹಾಳೆಯ ನಾಳೆಗಳು ನಾವು ನೀಡುವ ನೋಟ್ಸ್ ಇದ್ದಂತೆ, ನಾವೇನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ ಎಂಬ ಅರಿವು ನಮಗಿರಬೇಕು. 
ಇತ್ತೀಚಿಗೆ ನಡೆದಂಥ ಪೇಷಾವರ ಶಾಲೆಯ ದುರಂತ ಕೂಡಾ ಇದಕ್ಕೊಂದು ತಾಜಾ ಉದಾಹರಣೆ. ಇದಕ್ಕೆ ದರ್ಮಾಂದತೆ ಕಾರಣ. ಇಂಥ ಕ್ರೌರ್ಯದಲ್ಲಿ ಬದುಕುಳಿದ ಮಕ್ಕಳೇ ನಾಳೆ ಇಂಥದೇ ಕ್ರೌರ್ಯದಲ್ಲಿ ತೊಡಗಿದರೂ ಅಚ್ಚರಿಯಿಲ್ಲ. ನಮ್ಮ ಮಕ್ಕಳಿಗೆ ನಾವೇನು ಕಲಿಸುತ್ತಿದ್ದೇವೆ ಎಂದು ಆ ಮತಾಂಧರ ಪೋಷಕರು ಒಂದು ಬಾರಿ ಕೇಳಿಕೊಂಡಿದ್ದರೆ, ಈ ದುರ್ಗತಿಯನ್ನು ನಾವು ಕಣ್ಣಾರೆ ನೋಡುವ ಪರಸ್ಥಿತಿ  ಬಂದೊದಗುತ್ತಿರಲಿಲ್ಲ. ಎಲ್ಲೋ ಮತಾಂಧರು ಏನೋ ಮಾಡುತ್ತಿದ್ದಾರೆ ನಮಗ್ಯಾಕೆ ಬೇಕು ಅಂತಿರಾ ? ನಮ್ಮಲ್ಲಿಯದೇ ಇನ್ನೊಂದು ಸಂಗತಿ ಹೇಳುತ್ತೇನೆ ಕೇಳಿ. 
ಕೆಲವು ದಿನಗಳ ಹಿಂದೆ ದಿನಪತ್ರಿಕೆ ಓದುವಾಗ, ಮೈಸೂರು ಜಿಲ್ಲೆಯ ಕುಪ್ಪೇಗಾಲ ಗ್ರಾಮದಲ್ಲಿ, ದಲಿತ ಮಹಿಳೆಯರು ಮಾಡಿ  ಬಡಿಸಿದ ಬಿಸಿಯೂಟ ಮಾಡಬಾರದೆಂದು ಮನೆಯ ದೊಡ್ಡವರು ಮಕ್ಕಳಿಗೆ ಹೇಳಿ ಶಾಲೆಗೆ ಕಳುಹಿಸಿದ್ದರು ಅಂತ. ಸಾವಿರಾರು ವರ್ಷಗಳ ಹಿಂದಿನಿಂದ ಪಾಲಿಸಿಕೊಂಡು ಬಂದ ಅಸ್ಪೃಶ್ಯತೆಯನ್ನು ನೂರಾರು ವರ್ಷ ವಯಸ್ಸಿನ ಚಳುವಳಿಗಳು ಬೇರು ಸಮೇತ ಕಿತ್ತೊಗೆಯಲು ಸಾದ್ಯವೇ?... ಸಾದ್ಯ ಇದೆ. ನಮ್ಮ ನಿಮ್ಮೆಲ್ಲರ ವಿವೇಕತನದಿಂದ, ಮೌಡ್ಯದಿಂದ ಹೊರಬಂದು, ಮಕ್ಕಳಲ್ಲಿ ನಾವೆಲ್ಲಾ ಒಂದು ಎಂಬ ಭಾವವನ್ನು ಮೂಡಿಸುವುದರಿಂದ. 
 ಅದೇ ದಿನ ವಾರ್ತೆಯನ್ನು ನೋಡುತ್ತಿದ್ದಾಗ, ದೊಡ್ಡವರ ಮಕ್ಕಳು ಮನೆಯಲ್ಲಿ ಮಾಡಿದ ಟಿಫನ್ ಬಾಕ್ಸ್ ಗಳನ್ನು ಕ್ಯಾಮೆರಾ ಮುಂದೆ ಅಲ್ಲಾಡಿಸುತ್ತಿದ್ದಾಗ, ಭಾರತದ ಭವಿಷ್ಯದ ಬುಡವನ್ನೇ ಅಳುಗಾದಡಿಸಿದಂತೆ ಅನಿಸಿತು. ಅರ್ರೆ, ಊರಲ್ಲಿ ಮನೆಯಲ್ಲಿ ಮನಸ್ಸಿನಲ್ಲಿರುವ ಜಾತ್ಯಾಂದತೆಯ ಕಸವನ್ನು ಶಾಲೆಯ ಅಂಗಳಕ್ಕೆ ತಂದು ಸುರಿದರೆ, ಅದೇ ಶಾಲೆಯಲ್ಲಿ ಓದುವ ನಮ್ಮ ಮಕ್ಕಳು 'ಜಾತಿ'ಯ ದುರ್ನಾತದ ನಡುವೆ ನಲುಗುತ್ತಾರೆ ಎಂಬ ಸಣ್ಣ ಅರಿವೂ ನಮಗೆ ಇಲ್ಲದೇ ಹೋದರೆ ಹೇಗೆ? "ಅಸ್ಪ್ರುಶ್ಯತೆ ಎಂಬುದು ಸಾವಿರ ಹೆಡೆಗಳ ಸರ್ಪವಿದ್ದಂತೆ" ಎಂದು ಗಾಂಧಿಜಿಯವರು ಹೇಳಿದ್ದು ನೂರಕ್ಕೆ ನೂರು ಸತ್ಯ. 
ಇದನ್ನು ಸರಿಪಡಿಸುವವರು ಯಾರು? 
ಸರ್ಕಾರ,  ಕಾರ್ಯಾಂಗ, ನ್ಯಾಯಾಂಗ, ಜಾರಿ ನಿರ್ದೇಶನಾಲಯ, ಆಯೋಗಗಳು ತಮ್ಮ ತಮ್ಮಲ್ಲೇ ಹೊಂದಾಣಿಕೆ ಇದ್ದಂತಿಲ್ಲ. ಅದಕ್ಕಾಗಿ ನಾವೇ ಇದರಲ್ಲಿ ಭಾಗಿದಾರರಾಗಬೇಕು. 
ನಮ್ಮ ಮಕ್ಕಳಿಗೆ ನೈತಿಕತೆಯನ್ನು ಹೇಳಿಕೊಡಬೇಕು. ಸಾದ್ಯವಾದರೆ ಜೀವಿಸಿ ತೋರಿಸಬೇಕು. "ದಯವೇ ಧರ್ಮದ ಮೂಲವಯ್ಯಾ, ದಯವಿಲ್ಲದ ದರ್ಮ ಯಾವುದಯ್ಯಾ?" ಎಂಬ ಪಾಠವನ್ನು ಮುಸ್ಲಿಂ ಧರ್ಮ ಸೇರಿದಂತೆ ಎಲ್ಲ ಧರ್ಮಗಳೂ ಹೇಳಿಕೊಡಬೇಕು. 
ಇನ್ನು ಭಾರತದ ಭಯೋತ್ಪಾದನೆ ಯಾದಂಥ 'ಜ್ಯಾತ್ಯಂಧತೆ'ಯನ್ನು ಮಟ್ಟ ಹಾಕಬೇಕಾದರೆ, ದಲಿತ ಸಮಾರಂಭಗಳಿಗೆ ಮೇಲ್ವರ್ಗದವರು ಹೋಗಬೇಕು, ಗೃಹಪ್ರವೇಶ ಆಗಬೇಕು, ದೇವಸ್ಥಾನಗಳಲ್ಲಿ ದಲಿತರನ್ನು ಪೂಜಿಸಲು ಬಿಡಬೇಕು, ಅಂತರ್ ಜಾತಿ ವಿವಾಹಗಳು ಆಗಬೇಕು. ಈ ಎಲ್ಲಾ ವಿಷಯಗಳು ಇಂದಿನ ಮಕ್ಕಳ, ನಾಳೆಯ ನಾಗರೀಕರ ಸರಿ ದಾರಿಯಲ್ಲಿ ನಡೆಯಲು ಉಪಯೋಗವಾಗುವ ದಾರಿದೀಪಗಳು. 
ಮುದ್ದು ಮಕ್ಕಳ ಮನಸ್ಸುಗಳೊಂದಿಗೆ ಮಾತನಾಡುತ್ತಾ ಮಗುವಾಗುತ್ತಾ ಮುಗ್ಧತೆಯನ್ನು ಕಲಿತು ಉಳಿಸಿ ಬೆಳೆಸಿ ಎಂದು ಹೇಳುತ್ತಾ, ಮನಸ್ಸಿಗೆ ಹಿಡಿಸಿದರೆ ಮಕ್ಕಳಿಗೆ ಕಲಿಸಿ, ಹಿಡಿಸದಿದ್ದರೆ ನನಗೆ ತಿಳಿಸಿ. ಜೈ ಭಾರತ್ ಮಾತೆ 
-- ಅರವಿಂದರಾಜ್ ಬಿ ದೇಸಾಯಿ   

Monday, April 20, 2015

ಪೇಷಾವರ ದುರಂತ : ಖಂಡಿಸಲು ಪದಗಳೇ ಸಾಲದು

(Dec 16 ರಂದು ಈ ಲೇಖನ ಬರೆದದ್ದು)
ಈ ದಿನ ನಡೆದ ದುರಂತವನ್ನು, ಯಾವ ರೀತಿ ವಿವರಿಸಲಿ.? ಬಹುಶ ನನ್ನ ಎಲ್ಲಾ ಲೇಖನಗಳನ್ನು ಬರೆಯುವುವಾಗ ಇಷ್ಟೊಂದು ಕೈ ಯಾವತ್ತೂ ನಡುಗಿರಲಿಕ್ಕಿಲ್ಲ. ಇಷ್ಟೊಂದು ಸಿಟ್ಟು, ದ್ವೇಷ, ಕ್ರೋಧ ಮಡುಗತ್ತಿರಲಿಕ್ಕಿಲ್ಲ. ಮನಸ್ಸು ಅಳುತ್ತಾ ಇದೆ. ಕಣ್ಣೀರಿನ ಕಟ್ಟೆ ಒಡೆಯುವುದೊಂದೇ ಬಾಕಿ. ತಾಲಿಬಾನ್ ಉಗ್ರ ಸಂಘಟನೆಯೊಂದು ಪೇಷಾವರದಲ್ಲಿನ ಮುದ್ದು ಮಕ್ಕಳು ಜ್ಞಾನ ಪಡೆಯುವಂಥ ಜ್ಞಾನ ಮಂದಿರಕ್ಕೆ ನುಗ್ಗಿ, ಮುಗ್ಧ ಮನಸ್ಸುಗಳನ್ನು ಎಲ್ಲಂದರಲ್ಲಿ ಛಿಧ್ರಗೊಳಿಸಿ, ಅವರ ಶಿಕ್ಷಕಿಯರನ್ನು ಬಾಂಬಿನಿಂದ ಧ್ವಂಸಗೊಳಿಸಿ, ಜಿಹಾದ್ ಹೆಸರಿನಲ್ಲಿ ಮಾರಣಹೋಮ ನಡೆಸಿದ ಉಗ್ರರನ್ನು ಬಯ್ಯಲು ಪದಗಳು ಸಾಲುತ್ತಿಲ್ಲ. ಉಗ್ರರು ಇಂದು ಮಾನವಿಯತೆಯ ಎಲ್ಲೆ ಮೀರಿ ವರ್ತಿಸಿದ್ದಾರೆ.
ನಾನು ಈ ದಿನ ಯಾವ ಕಾರಣ ಕೇಳಲು ತಯಾರಿಲ್ಲ. ಉಗ್ರರ ಸಬೂಬುಗಳನ್ನು ಕೇಳಲು ಮನಸ್ಸಿಲ್ಲ. ಪ್ರತಿಯೊಂದು ಕ್ರೌರ್ಯಕ್ಕೆ ನೂರೆಂಟು ಕಾರಣಗಳಿರಬಹುದು. ಅವೆಲ್ಲವನ್ನು ತೀರಿಸಿಕೊಳ್ಳಲು ಮುಗ್ಧ ಮಕ್ಕಳ ಮೇಲೆ ಯುದ್ಧ ಮಾಡುವ ಅವಶ್ಯಕತೆಯೇನಿತ್ತು. ಮಕ್ಕಳನ್ನು ಕಳೆದುಕೊಂಡ ತಂದೆ ತಾಯಂದಿರೊಂದಿಗೆ ನನ್ನ ಪ್ರಾರ್ಥನೆ ಇದೆ. ಮನಸ್ಸಿನಲ್ಲಿ ದೇಶದ್ರೋಹಿಗಳ ಮೇಲೆ ಹೇಳಿಕೊಳ್ಳಲಾರದಷ್ಟು ಕೋಪ ಇದೆ. ಒಂದಲ್ಲ ಎರಡಲ್ಲಾ ಸುಮಾರು 140 ಮಕ್ಕಳ ಮಾರಣಹೋಮ. ಇದರಲ್ಲಿ ಮಕ್ಕಳ ತಪ್ಪೇನಿತ್ತು. ಪ್ರತಿಕಾರ ತಿರಿಸಿಕೊಳ್ಳಲು ಮಕ್ಕಳೇ ಆಗಬೇಕಿತ್ತಾ.? ಜಗತ್ತಿನ ನೀಚ ಕೆಲಸಗಳಲ್ಲಿ ಇದಕ್ಕಿಂತ ಇನ್ನೊಂದು ಉದಾಹರಣೆಯನ್ನು ನಾನೆಂದು ಕೇಳಿಲ್ಲ, ನೋಡಿಲ್ಲ. ದೇವರು ಅಂತ ಯಾರಾದರೊಬ್ಬರು ಇದ್ದರೆ, ನನ್ನ ಪ್ರಾರ್ಥನೆ ಇಷ್ಟೇ!, ನಾವು ಬದುಕಿರುವ ತನಕ ಇಂಥ ಘಟನೆ ಮರುಕಳಿಸದಿರಲಿ. ಒಂಭತ್ತು ರಾಕ್ಷಸರು ಶಾಲೆಯ ಒಳಹೊಕ್ಕು, ಪಾಯಿಂಟ್ ಬ್ಲಾಂಕ್ ನಲ್ಲಿ ಮಕ್ಕಳ ತಲೆಗೆ ಗುರಿಯಿಟ್ಟು ಬಂದೂಕುಗಳ ಮಳೆ ಸುರಿಸಿದಾಗ, ಪ್ರತಿಯೊಂದು ತರಗತಿಯಲ್ಲಿ ಕುಳಿತ ಮಕ್ಕಳ ಮೇಲೆ ಗುಂಡಿನ ನರ್ತನವಾದಾಗ, ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಬೆಂಚಿನ ಕೆಳಗೆ ಕುಳಿತ ಮಕ್ಕಳನ್ನು ಹೊರಗೆ ಎಳೆದು ಕೊಂದಾಗ, ಕೆಲವರ ತಲೆಗೆ ಕಣ್ಣಿಗೆ ನಿಶಾನೆಯನ್ನು ಫಿಕ್ಸ್ ಮಾಡಿ ಮೂರು ಘಂಟೆಯೊಳಗೆ ರುದ್ರತಾಂಡವ ಮಾಡಿ ಮಂದಿರವನ್ನು ಸ್ಮಶಾನ ಮಾಡಿದರು ಉಗ್ರರು.
ಕೆಲ ಶಿಕ್ಷಕರು ಮಡಿದರು, ಕೆಲವರ ಮಕ್ಕಳು ಶವವಾಗಿ ಹಿಂತಿರುಗಿದರು, ಕೆಲವರ ದೇಹಗಳು ಆಸ್ಪತ್ರೆಯಲ್ಲಿ ಸಿಕ್ಕವು. ಕೆಲವರ ಮಕ್ಕಳು ಶಾಲೆಗೆ ಹೋಗದೇ ಪ್ರಾಣ ಉಳಿಸಿಕೊಂಡ ತಂದೆ ತಾಯಂದಿರು ಉಳಿದ ಮಕ್ಕಳ ಕ್ಷೇಮಕ್ಕಾಗಿ ಈ ದಿನ ಮತ್ತೆಂದೂ ಬರದಿರಲೆಂದು ಅಲ್ಲಾನಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.
ಬೆಳಿಗ್ಗೆ ಬೆಳಿಗ್ಗೆ ಎದ್ದು, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗಲೂ ಇಂಥದೊಂದು ದುರಂತ ನಡೆಯಬಹುದೆಂದು ಊಹಿಸಿರಲಿಕ್ಕಿಲ್ಲ. ಅಪ್ಪಾ ಅಮ್ಮಾ, ನಾನು ಶಾಲೆಗೆ ಹೋಗಿ ಬರ್ತೀನಿ ಎಂದು ಮಗು ಹೇಳಿದಾಗ, ಇದೇ ಆ ಮಗುವಿನ ಕೊನೆಯ ಮಾತುಗಳೆಂದು ಯಾರೂ ಊಹಿಸಿರಲಿಕ್ಕಿಲ್ಲ.
ನಾನು TV ನೋಡುತ್ತಿದ್ದಾಗ, ಪಾಪ TV anchor ಗಳೂ, ಸುದ್ದಿ ಓದುತ್ತಿರಬೇಕಾದರೆ ಕನ್ನೀರಿಟ್ಟುಬಿಟ್ಟರು. ಒಳಗಿದ್ದ ಉಗ್ರರಿಗೆ, ಸಂದೇಶ ನೀಡುತ್ತಿದ್ದ ಅವರ ಮುಖ್ಯಸ್ಥನ ಮಾತುಗಳನ್ನು ನೀವೊಮ್ಮೆ ಕೇಳಿಸಿಕೊಂಡರೆ, ಅಸಹಾಯಕರಾಗಿ ಅತ್ತು ಬಿಡುತ್ತಿರೆನೋ? ಯಾವ ತಂದೆ ತಾಯಂದಿರು ಎಂಥ ದೊಡ್ಡ ಪಾಪ ಮಾಡಿದರೆ ಇಂಥ ಉಗ್ರರು ಅವರ ಹೊಟ್ಟೆಯಲ್ಲಿ ಹುಟ್ಟುತ್ತಾರೆನೋ ತಿಳಿಯದು. ನಾವು ಮನೆಯಲ್ಲಿರುವಾಗ ಕೊಲೆ, ಸುಲಿಗೆಯಂಥ ಪ್ರೋಗ್ರಾಮ್ ಗಳು TV ಯಲ್ಲಿ ಬಂದಾಗ ಮಕ್ಕಳನ್ನು ಅದರಿಂದ ದೂರ ಇಡುತ್ತೇವೆ. ಅಂಥದರಲ್ಲಿ ಈ ದಿನ ಮಕ್ಕಳೇ ಕೊಲೆ, ಮಾರಣಹೋಮ ಹೇಗಾಯಿತೆಂದು ವಿವರಿಸುತ್ತಿರುವಾಗ ಕರುಳು ಕಿತ್ತು ಬರುತ್ತಿತ್ತು. ಈ ಆತಂಕವಾದಿಗಳನ್ನು ಯಾವ ಪದಗಳಿಂದ ನಿಂದಿಸಬೇಕೋ ಅರ್ಥವಾಗುತ್ತಿಲ್ಲ.
ಒಂದು ಚಾನೆಲ್ ನಲ್ಲಿ, ಸಾವಿನ ಬಾಯಿಂದ ಬದುಕುಳಿದು ಬಂದ ಒಂದು ಮುಗ್ಧ ಮಗು ಧೈರ್ಯದಿಂದ "ದೊಡ್ಡವನಾದ ಮೇಲೆ, ಆ ದೇಶದ್ರೋಹಿಗಳನ್ನು ಹುಡುಕಿ ಹುಡುಕಿ ಹೊಡೆಯುತ್ತೇನೆ" ಎಂದು ಹೇಳುವಾಗ ಅವನ ಧೈರ್ಯ ನೋಡಬೇಕಿತ್ತು ನೀವು. He was great. ಮಕ್ಕಳ ಮೇಲೆ ಇಂಥಹ ದೌರ್ಜನ್ಯ ನಡೆಯುವಾಗ ನೋಡುತ್ತಾ ಕುಳಿತಾಗ ನಾವೆಂಥಾ ಗಂಡಸರು.? ನಮ್ಮ ಮಕ್ಕಳನ್ನು ಸುರಕ್ಷತೆಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಅಲ್ಲವಾ? ನಮ್ಮ ಪ್ರಾಣವನ್ನು ಜಿದ್ದಿಗೆ ಇಟ್ಟರೂ ಚಿಂತೆಯಿಲ್ಲ. ಅವರ ಪ್ರಾಣಕ್ಕೆ ಕಿಂಚಿತ್ತೂ ಹಾನಿಯಾಗಬಾರದು. ಈ ದಿನ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಇಡೀ ವಿಶ್ವವೇ ಕೊರಗುತ್ತಿದೆ. ಇವತ್ತಿನ ಈ ದಿನ ಮುಗ್ಧ ಮಕ್ಕಳ ಮೇಲಿನ ದೌರ್ಜನ್ಯದ ಕರಾಳ ದಿನವಾಗದೇ, ಉಗ್ರರ ಮೇಲಿನ ಹೋರಾಟಕ್ಕೆ ಸ್ಪೂರ್ಥಿಯಾಗಬೇಕು. ಈ ದಿನ ಮಕ್ಕಳನ್ನು ಕಳೆದುಕೊಂಡವರ ತಂದೆ ತಾಯಂದಿರ ಧೈರ್ಯ ತುಂಬುವ ದಿನವಾಗಬೇಕು. ಉಗ್ರರು ನಾಗರಿಕತೆಯನ್ನು ಮರೆತು ದಾಳಿ ಮಾಡಿದ್ದರ ಪ್ರತೀಕಾರದ, ಛಲದ ದಿನವಾಗಬೇಕು, ಉಗ್ರರನ್ನು ಮಟ್ಟ ಹಾಕುವ ದಿಟ್ಟ ನಡೆಯ ದಿನವಾಗಬೇಕು. ಜಗತ್ತಿನ ದೇಶಗಳೆಲ್ಲ, ತಮ್ಮ ತಮ್ಮ ಮಕ್ಕಳನ್ನು ಕಳೆದುಕೊಂಡಂತೆ ಎಂದು ಭಾವಿಸಿ, ಭಯೋತ್ಪಾದನೆಯನ್ನು ಸಾಮಾಜಿಕ ಪಿಡುಗಾಗಿ ಭಾವಿಸಿ, ಹೋರಾಟ ಮಾಡಬೇಕು. ಬಂದೂಕುಗಳಿಗೆ ಬಂದೂಕುಗಳಿಂದಲೇ ಉತ್ತರ ನೀಡಬೇಕು. ಅದೇ ನಾವು ಆ ಮಕ್ಕಳಿಗೆ ಕೊಡುವ ನಿಜವಾದ ಶ್ರದ್ಧಾಂಜಲಿ.
ತುಂಬಾ ಭಾರವಾದ ಮನಸ್ಸಿನಿಂದ, ಯಾರ ಜೀವನದಲ್ಲೂ ಇಂಥಾ ಕರಾಳ ದಿನ ಬರದಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ - ಅರವಿಂದರಾಜ ಬಿ ದೇಸಾಯಿ.