A r v i n d r a j   D e s a i

Monday, November 1, 2010

ಹಿಮಾಲಯನ್ ಬ್ಲಂಡರ್ : ರಾಜಕೀಯ v/s ಸೈನ್ಯ


ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು. ಪತ್ರಿಕೋದ್ಯಮದಲ್ಲಿ ಹೊಸ ಗಾಳಿಯನ್ನು ಬೀಸಿದಂಥ ರವಿ ಬೆಳೆಗೆರೆಯವರ "ಹಿಮಾಲಯನ್ ಬ್ಲಂಡರ್" ಕೃತಿಯನ್ನು ಓದಲು ಪ್ರೇರೇಪಿಸಿದವರು ಬಹಳ ಆದರೆ ಕೃತಿಯನ್ನು ಓದಲು ಕೊಟ್ಟು ಪ್ರಾಮಾಣಿಕ ಪ್ರಯತ್ನ ಮಾಡಿದವರಲ್ಲಿ ನನ್ನ ಆತ್ಮೀಯ ಸ್ನೇಹಿತ ಶ್ರೀನಿಧಿ ಮೊದಲಿಗ. ಈ ಕೃತಿಯ ಕುರಿತು ನನ್ನ ಅನಿಸಿಕೆ ಮತ್ತು ಸಂತೋಷ ವ್ಯಕ್ತಪಡಿಸಲು ಈ ಲೇಖನ.
ಇದು ಜಾನ್ ಪಿ ದಳವಿಯವರ ಮೂಲ ಕೃತಿಯಾಗಿದ್ದು, ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು ಶ್ರೀ ರವಿ ಬೆಳೆಗೆರೆಯವರು.
ಯಾವುದೇ ಕೃತಿ ಯನ್ನು ತರ್ಜುಮೆ ಮಾಡುವಾಗ ಅಲ್ಲಿನ ನೆಲೆಗೆಟ್ಟು ಮತ್ತು ಪ್ರಾಂತ್ಯದ ಜನರ ಅಭಿರುಚಿಗೆ ತಕ್ಕಂತೆ ಮನಮುಟ್ಟುವಂತೆ ಹೇಳುವುದಾಗಲೀ ಬರೆಯುವುದಾಗಲೀ ಒಂದು ಕಲೆಯೆಂದೂ ಭಾವಿಸಿರುತ್ತೇನೆ. ಆ ಕಲೆಯು ಮತ್ತು ಕನ್ನಡಿಗರ ನಾಡಿ ಮಿಡಿತದ ಹಿಡಿತ ಕವಿಗೆ ಚೆನ್ನಾಗಿ ಗೊತ್ತಿದೆ ಎಂದೆನಿಸದೇ ಇರಲಾರದು.

ಕೃತಿಯ ಮುಂಚೆ ಕವಿಯ ಬಗ್ಗೆ ಹೇಳುವುದಾದರೆ, ನನ್ನ ತಂದೆಯವರು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಎಲ್ಲ ಕವಿಗಳ ಸೂಚ್ಯ ಪರಿಚಯ ನೀಡುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ. 10ನೇ ವಯಸ್ಸಿನಿಂದ ರವಿ ಬೆಳೆಗೆರೆಯವರ ಹೆಸರನ್ನು ಕೇಳುತ್ತಾ ಬಂದಿದ್ದರೂ ಕೂಡಾ, ಅವರ ಕೃತಿ ಓದಲು ಮತ್ತೂ 10 ವರ್ಷಗಳು ಬೇಕಾಯಿತು. ಅವರ "ಹಂತಕಿ ಐ ಲವ್ ಯೂ" ನಾನು ಓದಿದ ಮೊದಲ ಕೃತಿ ನಂತರ "ಮಾಂಡೋವಿ", "ಖಾಸ್ ಬಾತ್", "ಗಾಂಧಿ ಹತ್ಯೆ ಮತ್ತು ಗೋಡ್ಸೆ", "ಓ ಮನಸೇ", "ಹಾಯ್ ಬೆಂಗಳೂರು". ಈಗ "ಹಿಮಾಲಯನ್ ಬ್ಲಂಡರ್".

ಓದುತ್ತಾ ಓದುತ್ತಾ ಹೋದಂತೆಲ್ಲಾ ಭಾರತದ ಸೈನ್ಯದ ಬಗ್ಗೆ ಏನು ತಿಳುವಳಿಕೆ ಇಲ್ಲದ ವ್ಯಕ್ತಿಗೂ ಸಾಮಾನ್ಯ ತಿಳುವಳಿಕೆ ಬರದೇ ಇರದು. ಒಂದು ಬ್ರಿಗೇಡ್, ಒಬ್ಬ ಬ್ರಿಗೇಡಿಯರ್, ಒಂದು ಸೈನ್ಯ, ಒಬ್ಬ ಜನರಲ್, ಕ್ಯಾಪ್ಟನ್, ಲೆಫ್ಟಿನೆಂಟ್, ಕರ್ನಲ್, ಮೇಜರ್ ಮುಂತಾದ ಸೈನ್ಯದ ವಿಭಾಗಗಳು ಮತ್ತೂ ವಿಭಾಗಾಧಿಕಾರಿಗಳ ಚಿತ್ರಣ, ಅವರ ಕಾರ್ಯಗಳು, ಮನಸ್ಸಿನ ತಳಮಳಗಳು ಏನು? ಎಂಬುದರ ಪೂರ್ಣ ಪ್ರಮಾಣದ ಜ್ಞಾನ ಕೃತಿಯ ಜೀವಾಳವಾಗಿದೆ. ೧೯೭೦ರ ದಶಕದಲ್ಲಿ ಭಾರತೀಯ ರಾಜಕಾರಣಿಗಳು ಮತ್ತೂ ಸೈನ್ಯದ ಹಿರಿಯ ಅಧಿಕಾರಿಗಳು ಎಷ್ಟರ ಮಟ್ಟಿಗೆ ಭಾರತೀಯ ಸೈನ್ಯದ ಮತ್ತೂ ಸೈನಿಕರ ಬಗ್ಗೆ ಕಾಳಜಿ ವಹಿಸಿದ್ದರೆಂಬುದು ಮತ್ತೂ ಆ ಮಿಲಿಟರಿ ಇತಿಹಾಸದಿಂದ ಪ್ರಸ್ತುತ ಪೀಳಿಗೆ ಏನನ್ನು ಕಲಿಯಬೇಕೆಂಬುದನ್ನು ಸ್ಪಷ್ಟಪಡಿಸಲಾಗಿದೆ.
ಆಗಷ್ಟೇ ಸ್ವಾತಂತ್ರ್ಯ ಹೊಂದಿದ್ದ ಭಾರತ ದೇಶದ ಚುಕ್ಕಾಣಿ ಹಿಡಿದ ಭಾರತದ ಕುವರರು ಜನಸಾಮಾನ್ಯರ ಅಭಿವೃದ್ಧಿಯ ಬಗ್ಗೆ ಅನುಭವ ಇತ್ತೇ ಹೊರತು, ಮಿಲಿಟರಿ ಯುದ್ದ ತಾಂತ್ರಿಕತೆ ಮತ್ತು ಮಿತ್ರು ರಾಷ್ಟ್ರಗಳ ಕೋಮು ಮನಸ್ತಿತಿಯನ್ನುಅರ್ಥಮಾಡಿಕೊಳ್ಳಲು ವಿಫಲವಾದುದೇ ಈ ದುರಂತಕ್ಕೆ ಕಾರಣವಿರಬಹುದೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಕೂಡಾ, ನಾಲ್ಕು ಗೋಡೆಗಳ ಮಧ್ಯೆ ನಡೆದ ವಿಚಾರಗಳೇನು? ಸತ್ಯ ಸಂಗತಿಯೇನು? ಯಾರ ಪ್ರತಿಷ್ಠೆಯ ಕುತಂತ್ರವಿರಬಹುದೆಂದು ಬಹುಶ: ಬ್ರಿಗೇಡಿಯರ್ ಜಾನ್ ಪಿ ದಳವಿಯವರ ಮಿಲಿಟರಿ ಇತಿಹಾಸದ ಮಹತ್ತರ ಕೃತಿ ಎನಿಸಿಕೊಂಡಿರುವ "ಹಿಮಾಲಯನ್ ಬ್ಲಂಡರ್"ನಲ್ಲಿ ತಿಳಿಯಬಹುದಾಗಿದೆ.
ಕತೃ ರವಿ ಬೆಳೆಗೆರೆಯವರು ಈ ಕೃತಿಯ ಮುನ್ನುಡಿಯಲ್ಲಿ ಈ ಕೃತಿ ಓದಿ ಒಂದು ಹನಿ ಕಣ್ಣೀರು ಸುರಿಸಿದರೆ ಈ ಕೃತಿ ಬರೆದುದಕ್ಕೆ ಸಾರ್ಥಕ ಎಂದು ಬರೆದಿದ್ದಾರೆ. ಅಂತೆಯೇ ನಾನೂ ಕೂಡಾ ಭಹಲ ಸಲ ಈ ಕೃತಿ ಓದುವಾಗ ಕಣ್ಣೀರು ಸುರಿಸಿದ್ದೇನೆ. ನಾನೂ ಎಷ್ಟು ಸಲ ಕಣ್ಣೀರು ಸುರಿಸಿದೆ ಎಂಬುದು ಬಹುಶಃ ಲೆಕ್ಕವಿದಬಹುದೇ ವಿನಃ ಎಷ್ಟು ಕಣ್ಣೆರ ಹನಿ ಸುರಿಸಿದೆ ಎಂಬುದು ಲೆಕ್ಕವಿಡಲಾಗಲಿಲ್ಲ. ವಿಶೇಷವಾಗಿ ಪಂಜಾಬಿ ಸೈನಿಕರು ರೊಟ್ಟಿಯ ಹಂಚನ್ನು ಏಕೆ ತರಲಿಲ್ಲವೆಂದು ಬ್ರಿಗೇಡಿಯರ್ ಕೇಳಿದಾಗ, ಪ್ಲಟೂನ್ ಸೈನಿಕು ಕೊಡುವ ಉತ್ತರ. ಕನ್ನಡಕ ಇವತ್ತು ಬರಬಹುದು ನಾಳೆ ಬರಬಹುದು ಎಂದು ಕಾಯುವ ನಿರ್ಭಾಗ್ಯ ಸೈನಿಕ . ಬೂಟುಗಳಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದಿದ್ರೂ, ಕಾಡತೂಸು ಇರುವ ತನಕ ಬಡಿದಾಡಿದ ಹುತಾತ್ಮ ಸೈನಿಕರನ್ನು ನೆನಸಿಕೊಂಡಾಗಲಂತೂ ಕಣ್ಣೀರ ಕಟ್ಟೆಯನ್ನು ನನ್ನಿಂದ ತಡೆಹಿಡಿಯಲು ಸಾಧ್ಯವಾಗಲೇ ಇಲ್ಲ.
ಒಂದು ಕಡೆ ಪರ್ವತ ಹತ್ತುವಾಗ 40 ಸೈನಿಕರಿದ್ದ ತುಕಡಿ, ಸಂಖ್ಯೆ 11ಕ್ಕೆ ಇಳಿದಾಗ ಬಿದ್ದ ದುಖಃದ ಕಣ್ಣೀರು, ಕ್ರೋಧದ ಕಣ್ಣೀರು, ಕನಿಕರದ ಕಣೀರು, ಅಯ್ಯೋ ಪಾಪ ಕಣ್ಣೀರು, ನಮ್ಮ ಮನೆಯಲ್ಲೇ ಒಬ್ಬನನ್ನು ಕಳೆದುಕೊಂಡ ಮನಸ್ತಿತಿಯ ಕಣ್ಣೀರಿಗೆ ಲೆಕ್ಕವಿಲ್ಲ. ಯಾರ ಕುತಂತ್ರ ಏನೆ ಇದ್ದರೂ ಗಡಿ ಕಾಯುವ ಕೆಲಸ ತಪ್ಪದೇ ಮಾಡುವ ಸೈನಿಕರ ನೆನದು ಕನ್ನಲಿಗೆಗಳು ಮುಂದಿನ ಸಾಲು ಓದಲಿಕ್ಕಾಗದಷ್ಟು ತುಂಬುತ್ತಿದ್ದವು.
ಕೃತಿ ಬಿಡುಗಡೆಯಾದ ಮೇಲೆ ಜನರ ಮನಸ್ಸಿನ ಮೇಲೆ ಉಂಟಾಗುವ ಪರಿಣಾಮಗಳ ಅರಿವು ಲೇಖಕನಿಗೆ ಇದ್ದೆ ಇರುತ್ತದೆ. ಈ ಕೃತಿಯ ಪರಿಣಾಮ 'ಜಾಗೃತಿ'. ಇನ್ನು ಮುಂದಾದರೂ ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕೆಂಬ ಅರಿವು ಮತ್ತು ತಿಳುವಳಿಕೆ ರಾಜಕಾರಣಿಗಳಿಗಾಗಲೀ, ಸೈನ್ಯದ ಅಧಿಕಾರಿಗಳಿಗಾಗಲೀ ಮೂಡುತ್ತದೆ. ನನ್ನಂಥ ಎಷ್ಟೋ ವಿದ್ಯಾರ್ಥಿಗಳ ಜಾಗೃತಿಗೆ ಕವಿ ಕಾರಣರಾಗಿದ್ದಾರೆ.
ಈ ಕೃತಿಯನ್ನು ನಾವು ಓದಿದ್ದಕ್ಕಿಂತ ಮಿಲಿಟರಿಯಲ್ಲಿರುವವರು ಓದಿದರೆ ಹೆಚ್ಚು ಧನ್ಯರಾಗುತ್ತಾರೆ ಮತ್ತು ಪರಿಸ್ತಿತಿಯನ್ನು ಕೊಂಚ ಮಟ್ಟಿಗೆ ಸುಧಾರಣೆ ಮಾಡುತ್ತಾರೆಂದು ನಂಬಿ ಈ ಕೃತಿಯನ್ನು ಕನ್ನಡಾಭಿಮಾನಿಯಾದ ನನ್ನ ಅಣ್ಣ
ಜೆ ಸಿ ಸಂಗಮೇಶ ಮೊಳೆ,ತಿಮ್ಮಯ್ಯ ಬೆಟಾಲಿಯನ್, ಐ ಎಂ ಎ, ಡೆಹರಾಡೂನ್.
ಎಂಬಲ್ಲಿಗೆ ಕಳಿಸಿ ನನ್ನ ಜವಾಬ್ದಾರಿಯನ್ನು ಗುಲಗಂಜಿಯಷ್ಟು ಕಡಿಮೆ ಮಾಡಿಕೊಂಡಿದ್ದೇನೆ.
ಈ ಕೃತಿಯ ಜೀವಾಳ ಮತ್ತು ಹಿರೋಗಳಾದಂಥ ನಮ್ಮ ಭಾರತೀಯ ಸೇನೆಯ ಸೈನಿಕರಿಗೆ ಹೃದಯಾಂತರಾಳದಿಂದ ಸಾವಿರ ಸಾವಿರ ವಂದನೆಗಳನ್ನು ಸಮರ್ಪಿಸುತ್ತ, ಮತ್ತು ಎಂಥ ಜಾಗೃತಿ ಹಿನ್ನೆಲೆಯಿರುವ ಕೃತಿಯನ್ನು ಹೊರ ತಂದಂಥ ಬೆಳೆಗೆರೆಯವರಿಗೂ ನನ್ನದೊಂದು ಸೆಲ್ಯೂಟ್ ಹೇಳುತ್ತಾ, "ಹಿಮಾಲಯನ್ ಬ್ಲಂಡರ್" ಮೂಲ ಕೃತಿಯ ಕತೃ ಮತ್ತು 1962 ರ ಚೀನಾ ವಿರುಧ್ಧ ಯುದ್ಧದ ಪ್ರತ್ಯಕ್ಷದರ್ಶಿಯಾಗಿದ್ದಂಥ ಮಹಾನ್ ಹೋರಾಟಗಾರ ಬ್ರಿಗೇಡಿಯರ್ ಜಾನ್ ಪಿ ದಳವಿಯವರಿಗೂ ಕೂಡಾ ನನ್ನ ಸಾವಿರ ನಮನಗಳನ್ನು ಅರ್ಪಿಸುತ್ತಿದ್ದೇನೆ. 
ಶಿಕ್ಷಕನನ್ನು ಹೊರತುಪಡಿಸಿದರೆ ಬಹುಶಃ ಎಂಥ ಗುರುತರ ಜವಾಬ್ದಾರಿ ಇರುವುದು ಲೇಖಕನ ಲೇಖನಿಗೆ ಮಾತ್ರ ಇದೆ. ಇಂಥ ಜವಾಬ್ದಾರಿಯನ್ನು ಬೆಳೆಗೆರೆಯವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದನ್ನು ಈ ಕರುನಾಡು ಬೆಳೆಗೆರೆಯವರಿಂದ ಯಾವತ್ತೂ ಅಪೇಕ್ಷಿಸುತ್ತಲೇ ಇರುತ್ತದೆ.
ನನ್ನ ಈ ಲೇಖನವನ್ನು ನನ್ನ ಮಿತಿಯ ಪದಗಳಲ್ಲಿ ಅವಲೋಕಿಸಿ, ಕೃತಿಯ ಸಾರ್ಥಕತೆಯನ್ನು ಕೊಂಚ ಜಾಸ್ತಿ ಮಾಡುವ ಪುಟ್ಟ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.



ಎಂದೆಂದೂ ನಿಮ್ಮವ,
ಅರವಿಂದರಾಜ ಬಿ ದೇಸಾಯಿ.