A r v i n d r a j   D e s a i

Saturday, July 2, 2011

ಬೆಂಗಳೂರು: ಭಾವನಾತ್ಮಕ ವಿದಾಯ

               ಒಂದು ಸುಂದರ ಮುತ್ಸಂಜೆಗೆ ಈ ಬರಹ ಸಾಕ್ಷಿಯಾಗುತ್ತದೆಂದು ನಾನಂದುಕೊಂಡಿರಲಿಲ್ಲ. ಇಸ್ರೋ ಲೇಔಟಿನ ಎರಡನೇ ಮಹಡಿಯ ಮೇಲ್ಛಾವಣಿಯ ಮೇಲೆ ಕುರ್ಚಿ ಹಾಕ್ಕೊಂಡು ಕುಳಿತಿದ್ದೆ. ಕಪ್ಪು ಮೋಡದ ನರ್ತನ, ಮಿಂಚು ಗುಡುಗುಗಳ ಆರ್ಭಟ, ಧೂಳು ಮತ್ತು ಹಿಮತುಕದಿಯ ಆಕ್ಸಿಡೆಂಟ್, ಮುಂಗಾರು ಮಳೆಯಾಗಿ ಪರಿವರ್ತನೆಗೊಂಡು ಭೂಮಿಯ ಮಡಿಲು ಸೇರಿತು. ಅದೇನೋ "ಪ್ರೀತಿ ಮಧುರ, ತ್ಯಾಗ ಅಮರ" ಮುಂಗಾರು ಮಳೆಯ ಮಾತು ನೆನಪಾಗಿ, ಮಳೆಯಲ್ಲಿಯೇ ನೆನೆಯುತ್ತಾ ಕುಳಿತುಬಿಟ್ಟೆ. ಮನಸ್ಸಿನಲ್ಲಿ ಏನೋ ದುಗುಡ ದುಮ್ಮಾನ. ಯಾರನ್ನೋ ಕಳೆದುಕೊಂಡ ಭಾವನೆ. ಚಿತ್ರ ವಿಚಿತ್ರ ನೆನಪುಗಳ ಲಹರಿ. ಅಣ್ಣಾವ್ರ ಹಾಡುಗಳ ಮೆಲಕು, ಆ ಚಳಿಗೆ ಮಳೆಗೆ ಟೀ ಹೀರೋಣವೆನ್ನಿಸಿತು, ಅಷ್ಟರಲ್ಲೇ ನನ್ನ ಆತ್ಮೀಯ ಗೆಳೆಯ ವಿಜಯ ಟೀಯೊಂದಿಗೆ ಪ್ರತ್ಯಕ್ಷ. ಕಳೆದುಕೊಂಡಿದ್ದೆಲ್ಲಾ ಸಿಕ್ಕಂತಾದ ಭಾವನೆ. 
ನೆನಪಿನಂಗಳದಲ್ಲಿ ರಂಗೋಲಿಯನ್ನು ಹಾಕತೊಡಗಿದೆನು. ಮಳೆಯ ನೀರಿನಲ್ಲಿ ಕಾಗದದ ದೋಣಿ ಬಿಟ್ಟಾಗಿನಿಂದ ಹಿಡಿದು ಎಲ್ಲಿಯತನಕ:-


"ಸವಿ ಸವಿ ನೆನಪು, ಸಾವಿರ ನೆನಪು, ಸಾವಿರ ಕಾಲಕು ಸವೆಯದ ನೆನಪು". 

ನಾನು ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗ ಅದು ಪರವೂರು. ಈಗದು ತವರೂರಿಂತಾಗಿಬಿಟ್ಟಿದೆ. ಬೆಂಗಳೂರು ಬದುಕು ಕಲಿಸಿದೆ. ಸ್ಟೈಲ್, ಸ್ಮೈಲ್ ಕಲಿಸಿದೆ. ಆತ್ಮೀಯ ಗೆಳೆಯ, ಗೆಳತಿಯರನ್ನು ಪರಿಚಯ ಮಾಡಿಸಿದೆ. ಸೋಲು, ಗೆಲುವು ಸಹಿತ. ಮತ್ತೊಂದು ಸಾರಿ ಬೆಂಗಳೂರಿಗೆ ಬಂದಾಗ ಈ ಊರು ನನ್ನನ್ನು ತನ್ನ ಮೊಮ್ಮಗನೆಂಬುದನ್ನೇ ಮರೆತು ಬೇರೆಯವರಂತೆ ನಡೆಸಿಕೊಂಡುಬಿಡುತ್ತದೇನೋ ಎಂಬ ಭಯ.

ನಾನು ಎಲ್ಲಿಗೆ ಬಂದು ಏನು ಸಾಧಿಸಿದೆ? ಅಂಕಗಳು ನನ್ನ ಸಾಧನಾ ಮಾಪನವಾ? ಎಂಥ ನೂರೆಂಟು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹೊರಳಾಡಿದ್ದು ಸತ್ಯ. ಜ್ಞಾನದ ಹಸಿವು ಇನ್ನೂ ಆರಿಲ್ಲ. ಆದರೂ ಪದವೀಧರ.

ನಾನು ನನ್ನ ಹುಟ್ಟಿದೂರಿಗೆ ಬರುವಾಗ ಕೊನೆಯ ಬಾರಿ ಮತ್ತೆ ಸಿಗೋಣವೆಂದು ಹೇಳಲು ಸರದಾರ ಪಟೇಲ್ ಹಾಸ್ಟೆಲಿಗೆ ಹೋದಾಗ ಎಲ್ಲ ಜೂನಿಯರ್ಸ್ ವಿದಾಯ ಹೇಳಿದ್ದು ಮರೆಯಲಾಗದ ಕ್ಷಣ. ಮತ್ತೊಂದು ಸಂಗತಿ, ನನ್ನನ್ನು ಬಸ್ ನಿಲ್ದಾಣಕ್ಕೆ ಬಿಡಲೆಂದು ಬಂದ ನನ್ನ ಸ್ನೇಹಿತರಿಗೆ ಯಾವ ರೀತಿ ಚಿರರುಣಿಯಾಗಿರಲಿ. ಬಸ್ ನಿಲ್ದಾಣಕ್ಕೆ ತಲುಪಲು ಮುಂಚೆ ಬಹಳ ರೋಚಕ ಕ್ಷಣಗಳನ್ನು ಬೈಕಿನಲ್ಲ ಕಳೆದು ತಲುಪಿದಾಗ, ಕೊನೆಯ ಬಾರಿಗೆ ಆ ದಿನದ ಟೀ ಕರುಳಿನ  ಆಳಕ್ಕೆ ಇಳಿದು ನಿರಾಳ ಎನಿಸಿತು. ಬಸ್ ಹೊರಟು ನಿಂತಾಗ, ಯಾವುದೋ ಭಾರ ಮನಸ್ಸಿನ ಮೇಲೆ ಬಿದ್ದಂತಾಯಿತು. ಮತ್ತೆ ಮತ್ತೆ ಭೇಟಿಯಾಗಲೇಬೇಕೆಂಬ ಆಣೆ ಪ್ರಮಾಣದೊಂದಿಗೆ ನನ್ನನ್ನು ಅಲ್ಲಿಂದ ಬೀಳ್ಕೊಡಲಾಯಿತು. ಭಾವನಾಜೀವಿಯಾದ ನಾನು, ನಿಮ್ಮ ಸ್ನೇಹದ ಮೇಲೆ ಎಲ್ಲಿಲ್ಲದ ಪ್ರೀತಿ ಗೌರವ.
ಈ ಎಲ್ಲಾ ಭಾವನಾತ್ಮಕ ವಿದಾಯವನ್ನು ಬೆಂಗಳೂರಿಗೆ ಅರ್ಪಿಸುವಾಗ ಕಣ್ ಹನಿಯು ಭೂಮಡಿಲು ಸೇರಿತು.

"ಯುಗ ಯುಗಗಳೇ ಸಾಗಲಿ, ನಮ್ಮ ಸ್ನೇಹ ಶಾಶ್ವತ" ಎಂದು ಮನ ಹೇಳಿತು.

ಯಾರು ಯಾರಿಗೂ ಶಾಶ್ವತ ಅಲ್ಲ, ಮುಂದೊಂದು ದಿನ ನನ್ನ ಕಣ್ಣೀರ ಕಟ್ಟೆಯೊಡೆದಾಗ ನಿಲ್ಲಿಸಲು, ಮತ್ತು ಸಾಧನೆ ಮಾಡಿದಾಗ ಖುಷಿ ಪಡಲು ನನ್ನ ಆತ್ಮೀಯ ಸ್ನೇಹಿತರು ಯಾವತ್ತೂ ನನ್ನೊಂದಿಗಿರುತ್ತಾರೆಂಬ ನಂಬಿಕೆಯಿಂದ,
"ಇಲ್ಲಿಗೆ ಮುಗಿದಿಲ್ಲ ಜೀವನ, ಮುಂದಿದೆ ಮಹಾಯುದ್ಧ",
ನಿಮ್ಮ ಹಾರೈಕೆ ನನ್ನನ್ನು ಆ ಮಹಾಯುದ್ಧದಲ್ಲಿ ಗೆಲ್ಲಿಸುತ್ತದೆಂಬ ಆತ್ಮವಿಶ್ವಾಸ ನನ್ನಲ್ಲಿದೆ.

ನಿಮ್ಮ ಪ್ರೀತಿಯ ಸ್ನೇಹಿತ,
ಅರವಿಂದರಾಜ ಬಿ ದೇಸಾಯಿ. 

Tuesday, March 1, 2011

ನಿತ್ಯೋತ್ಸವ ನಗರಿಯಲ್ಲಿ ಕನ್ನಡದ ತೇರು

   ಬೆಂಗಳೂರಿನಲ್ಲಿ ಫೆಬ್ರುವರಿ 4,5,6 ರಂದು ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಾಧಕ ಭಾದಕಗಳ 
ದೂರದೃಷ್ಟಿಯ ಅವಲೋಕನಾ ಲೇಖನ ಇದು. ಪಬ್ಬು, ಬಾರ್ ಗಳ ಭರಾಟೆಯಂಥ ನಿತ್ಯ ಉತ್ಸವಗಳ ನಗರಿಯಲ್ಲಿ ಅಕ್ಷರ ಜಾತ್ರೆ ಯಶಸ್ವಿಯಾದದ್ದು ಕನ್ನಡದ ಮಟ್ಟಿಗೆ ಆರೋಗ್ಯಕರ ಬೆಳವಣಿಗೆ. ಆದರೆ ಯಶಸ್ವೀ ಎಂಬುದು ಯಾವ ಅರ್ಥದಲ್ಲಿ ಅವಲೋಕಿಸಬಹುದು? 70,000 ದಿಂದ 1,00,000 ಜನ ಇದಕ್ಕೆ ಸಾಕ್ಷಿಯಾದರೆಂದು ಪೇಪರಿನಲ್ಲಿ ಓದುವಾಗ ನಗು ಬಂತು, ಯಾಕೆಂದರೆ, ಇಂದಿನ ಯಾಂತ್ರಿಕ ಜೀವನದಲ್ಲಿ ಜನರನ್ನು ಸೇರಿಸುವುದು ರಾಜಕೀಯ ಗಿಮಿಕ್. ಇರಲಿ, ಸಾಹಿತ್ಯ ಸಮ್ಮೇಳನಗಳ ಇತಿಹಾಸ ಏನಿರಬಹುದು? ಇವುಗಳ ಕೊಡುಗೆ ಕನ್ನಡ ಸಾಹಿತ್ಯಕ್ಕೆ, ಕನ್ನಡ ನಾಡು ನುಡಿಗೆ ಕೊಡುಗೆ ಯಾವ ರೀತಿಯದ್ದು, ಎಂಬುದಕ್ಕೆ ಉತ್ತರ ಹುಡುಕಲು ಇಂಟರ್ನೆಟ್ ನಲ್ಲಿ ಹುಡುಕಿದ್ದು, ತಡಕಾದಿದ್ದು ನಿಮ್ಮ ಮುಂದಿಡುತ್ತಿದ್ದೇನೆ. 
   
     1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉದಯ. ಆಗ ಮೇರು ಬರಹಗಾರರಿದ್ದರು, ಕನ್ನಡವನ್ನು ತಮ್ಮ ಉಸಿರಾಗಿಸಿಕೊಂಡವರಿದ್ದರು. 1932ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಿ.ವಿ.ಜಿ.ಯವರು ಮಂಡಿಸಿದ ವಿಷಯಗಳು, ಕರ್ನಾಟಕದ ಏಕೀಕರಣ ಚಳುವಳಿಯ ಸ್ವರೂಪವನ್ನೇ ಬದಲಾಯಿಸಿದವು. 1948ರಲ್ಲಿ ಬೇಂದ್ರೆ, "ಹಕ್ಕಿ ಹಾರುತಿದೆ ನೋಡಿದಿರಾ", ಎಂದಾಗ ವೇದಿಕೆ ಮುಂದಿದ್ದ ಮೂವತ್ತು ಸಾವಿರ ಜನ ತಲೆಯೆತ್ತಿ ನೋಡಿದ್ದರು. 1958ರಲ್ಲಿ ವಿ.ಕೃ.ಗೋಕಾಕ ಬಳ್ಳಾರಿಯಲ್ಲಿ ಮಂಡಿಸಿದ ಹೊಸ ವಿಚಾರಗಳು ನವ್ಯ ಸಾಹಿತ್ಯ ಎಂಬ ಹೊಸ ಚಳುವಳಿಗೆ ಕಾರಣವಾದವು. 1960ರಲ್ಲಿ ಅ.ನ.ಕೃ ಮಣಿಪಾಲದಲ್ಲಿ, ಬೆಂಗಳೂರಿನಲ್ಲಿನ ಕನ್ನಡದ ಸ್ಥಿತಿಗತಿಗಳು, ಚಿತ್ರರಂಗದ ಪರಿಭಾಷಾ ಒಲವಿನ ಬಗ್ಗೆ ಚರ್ಚೆ ನಡೆದಾಗ, ಡಬ್ಬಿಂಗ್ ವಿರೋಧಿ ಚಳುವಳಿಗಳು ನಡೆದವು. ಇನ್ನೂ ಕೆಲವು ಮೇರು ಕವಿಗಳು ತಮ್ಮ ನಿಲುವಿಗೆ ಬದ್ಧರಾಗಿದ್ದರು. ಕರ್ನಾಟಕ ಏಕೀಕರಣವಾಗುವ ತನಕ ಕುವೆಂಪು ಅಧ್ಯಕ್ಷತೆವಹಿಸುವುದಿಲ್ಲವೆಂದಾಗ, ಅವರ ಪ್ರಕಾರ, ಕರ್ನಾಟಕ ಏಕೀಕರಣವಾದ ಮೇಲೆ ಅಂದರೆ 1957ರಲ್ಲಿ ಅಧ್ಯಕ್ಷತೆ ವಹಿಸಿದರು. ಕನ್ನಡದ ಕೆಲಸಗಳಿಗೆ ಅಡ್ಡಿಯಾಗುವುದೆಂಬ ಕಾರಣಕ್ಕೆ, ಕೊನೆಯವರೆಗೂ ತಿ.ನಂ.ಶ್ರೀ. ಅಧ್ಯಕ್ಷತೆ ವಹಿಸದೇ ಇದ್ದರು.


      ಇನ್ನು ಈ ಸಮ್ಮೇಳನದ ವಿಷಯಕ್ಕೆ ಬರೋಣ. ನಾನೂ 70,000 ಜನರಲ್ಲಿ ಒಬ್ಬನಾಗಿ ಸಮ್ಮೇಳನದ ಎಲ್ಲಾ ಚರ್ಚೆಗಳಲ್ಲಿ ಜವಾಬ್ದಾರಿಯುತ ಪ್ರೇಕ್ಷಕನಾಗಿ ಭಾಗವಹಿಸಿದ್ದೇನೆ, ಖುಷಿ ಪಟ್ಟಿದ್ದೇನೆ. ನನ್ನ ಖುಷಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಈ ಲೇಖನ. 
ಅಧ್ಯಕ್ಷರು-ಪ್ರೊ.ಜಿ.ವೆಂಕಟಸುಬ್ಬಯ್ಯನವರು ಈ ಬಾರಿಯ ಕನ್ನಡದ ತೇರು ಎಳೆದ ಸಾಹಸದ ಸಾರ್ಥಕ ರೂವಾರಿ. ಪ್ರಭಂದ, ವ್ಯಕ್ತಿಚಿತ್ರ, ಸಂಪಾದನೆಯಲ್ಲಿ ಇವರ ಕೊಡುಗೆ ಅನನ್ಯ. ಬಿ.ಎಂ.ಶ್ರೀ. ವೆಂಕಣ್ಣಯ್ಯನವರಂಥ ಕನ್ನಡದ ಸಾಹಿತ್ಯದ ಕಲಿಗಳ ಶಿಷ್ಯರಿವರು. 98ರ ಇಳಿ ವಯಸ್ಸಿನ ಇವರು, ತನು ಮನ ಧನಗಳಿಂದ ಕನ್ನಡ ಕಟ್ಟುವ ಕೆಲಸ ಮಾಡಿದರು. ಜೀ.ವಿ ಎಂದೇ ಪ್ರಖ್ಯಾತರಾದ ಇವರು ಮುಪ್ಪಾಗಿರಬಹುದು ಆದರೆ ಇವರು ಮಾಡಿದ ಕನ್ನಡದ ಕೆಲಸಕ್ಕೆ ಎಂದಿಗೂ ಮುಪ್ಪಿಲ್ಲ.

ಈ ಬಾರಿ ಕೆಲವು ನಿರ್ಣಯಗಳೂ ಮಂಡನೆಯಾದವು , ಕೆಲವು ಸವಕಲು ವಿಷಯಗಳು ಚರ್ಚೆಯಾದವು. 
ಆಗಿನ ಈಗಿನ ಹಳ್ಳಿ ಜೀವನ, ಒಂದು ಅನುಪಯುಕ್ತ ಚರ್ಚೆ ನಡೆಯುತ್ತಿತ್ತು,
ಒಬ್ಬ ಮಹಾನುಭಾವ ಆಗಿನ ಹಳ್ಳಿ ಜೀವನವೇ ಚನ್ನಾಗಿತ್ತು, ಈಗೆಲ್ಲ ಯಾಂತ್ರಿಕವಾಗಿದೆ ಎಂದ. ಅರ್ರೇ, ಬದಲಾವಣೆ ಜಗದ ನಿಯಮವಲ್ಲವೇ?, ಕಾಲಕ್ಕೆ ತಕ್ಕಂತೆ ಜನ ಬದಲಾಗುತ್ತಾರೆ, ತಪ್ಪೇನಿಲ್ಲ. ಹಾಗೆ, ಮತ್ತೊಂದು ವಿಷಯ ಚರ್ಚೆ ಕೂಡಾ ಆಯಿತು, 20 ರಿಂದ 30 ವರ್ಷದ ಯುವಕರು ಪೇಟೆಗಳತ್ತ ಮುಖ ಮಾಡುತ್ತಿದ್ದಾರೆ. ಅವರೆಲ್ಲ ತಿರುಗಿ ಹಳ್ಳಿಗಳತ್ತ ಹೊರಡಬೇಕು ಎಂದು ಆಜ್ಞೆಯನ್ನೂ ಮಾಡಿದರು. ಆದರೆ ದಿನಗೂಲಿ 200 ರೂಪಾಯಿ ಕೂಡ ಸಿಗದ ಹಳ್ಳಿಯಲ್ಲಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು ಕಷ್ಟವಾಗಿರುವಾಗ ಪೇಟೆಗಳತ್ತ ಮುಖ ಮಾಡುವುದರಲ್ಲಿ ತಪ್ಪೇನಿದೆ. ಇಂಥ ವಿಷಯಗಳನ್ನು ಚರ್ಚಿಸುವಾಗ ವಾಸ್ತವಿಕತೆ, ವ್ಯೆಜ್ಞಾನಿಕತೆಯನ್ನು ಮನಗಂಡು ವಿಷಯಗಳನ್ನು ಆಯ್ಕೆ ಮಾಡಬೇಕೆಂಬುದು  ನನ್ನ ಅನಿಸಿಕೆ.

ಮುಖ್ಯವಾದ ಸಂಗತಿ ನಿರ್ಣಯಗಳದ್ದು, ಸಮ್ಮೇಳನದ ಫಲವಾಗಿ ಇಂಥ ನಿರ್ಣಯ ಜನಾಭಿಪ್ರಾಯವಾಗಿ ರೂಪುಗೊಂಡು, ಕಾರ್ಯ ರೂಪಕ್ಕೆ ಬಂದಿತು ಎಂದು ಹೇಳಬಲ್ಲ ಉದಾಹರಣೆ ಇದುವರೆಗೂ ಸಿಕ್ಕಿಲ್ಲ.   ಸಮ್ಮೇಳನಾಧ್ಯಕ್ಷರು  ೩ ದಿನಗಳ ವೈಭವಕ್ಕೆ ಸೀಮಿತವಾಗಿಬಿಟ್ಟಿದ್ದಾರೆ. ಅವರ ಭಾಷಣ ಔಪಚಾರಿಕ ವಿಧಿಯಾಗಿಬಿಟ್ಟಿದೆ, ೩ ದಿನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ನಿರ್ಣಯಗಳ ವಿವರಗಳೂ ಬರುತ್ತವೆ, ನಂತರ ಎಲ್ಲವೂ ತಣ್ಣಗಾಗುತ್ತವೆ. ಕನಿಷ್ಠ ಚರ್ಚೆ ಕೂಡ ನಡೆಯುವದಿಲ್ಲ.
ನಿರ್ಣಯ ಎಂದರೆ ಕಾವೇರಿ ಚಳುವಳಿ, ಬೆಳಗಾವಿ ಕರ್ನಾಟಕದ್ದೇ, ಗೋಕಾಕ್ ಚಳುವಳಿ ಇತ್ಯಾದಿ.
ನಿರ್ಣಯಗಳು ಮೊದಲು ಜನಾಭಿಪ್ರಾಯವಾಗಿ ರೂಪುಗೊಳ್ಳಬೇಕು, ನಂತರ ಚರ್ಚೆಯಾಗಿ ಅದನ್ನು ಕಾರ್ಯಗತಗೊಳಿಸಬೇಕು. ಪ್ರತಿ ಸಮ್ಮೇಳನಾಧ್ಯಕ್ಷರನ್ನು ಒಂದು ವರ್ಷದ ಅವಧಿಯವರೆಗೆ ಸಾಕ್ಷಿ ಪ್ರಜೆಯಾಗಿ ನಿಯಮಿಸಬೇಕೆಂಬುದು ಪರಿಷತ್ತಿನ ಆಗ್ರಹ, ಆದರೆ ಯಾವ ರಾಜಕೀಯ ಪಕ್ಷಗಳೂ ಒಂದು ಖುರ್ಚಿಯನ್ನು ಬಿಡುವುದಿಲ್ಲ ಎಂಬುದು ಅಷ್ಟೇ ಕಟುಸತ್ಯ. 
ಬೇರೆ ರಾಜ್ಯಗಳಿಂದ ಬಂದವರು ಕನ್ನದಲ್ಲಿ ಕಲಿತು ಬಳಸಬೇಕೆಂಬುದು ಈ ಬಾರಿಯ 10 ನಿರ್ಣಯಗಳಲ್ಲಿ ಒಂದಾಗಿತ್ತು. ಆದರೆ ಕನ್ನಡಿಗರೇ ಕನ್ನಡವನ್ನು ಬಳಸುವಲ್ಲಿ ಅನಾಸ್ಥೆ  ತೋರುವಾಗ, ಬೇರೆಯವರು ಹೇಗೆ ಕಲಿತಾರು?

'ಕನ್ನಡ ಪದ ಎಂಬುದು ಕಬ್ಬಿಣದ ಕಡಲೆಯಲ್ಲ, ಹಿರಿದಿದೆ ಕನ್ನಡದ ಅರ್ಥ' ಎಲ್ಲೋ ಓದಿದ ನೆನಪು. ಅರ್ಥ ತಿಳುದುಕೊಂಡವನೇ ಸಾರ್ಥಕ ಜೀವಿ, ಕನ್ನಡದ ಮುದ್ದಣರಿಂದ ಹಿಡಿದು ಈಗಿನ ಮುಂಗಾರು ಮಳೆಯ ತನಕ ಸಾಹಿತ್ಯ ಕೃಷಿಯಾಗಿದೆ, ಇನ್ನು ಮುಂದಿನ ಪೀಳಿಗೆಯ ಕನ್ನಡದ ಉಳಿವು-ಅಳಿವು ನಮ್ಮ ಯುವ ಜನಾಂಗದ ಕೈಯಲ್ಲಿದೆ. ಮಾಯಾನಗರಿಗಳ ಮಲ್ಟಿಪ್ಲೆಕ್ಸ್ ಬೆಂಗಳೂರಿನಲ್ಲಿ ಅಕ್ಷರ ಜಾತ್ರೆಗೆ ಜನಗಳ ಸಾಥ್ ಸಿಕ್ಕಿರುವುದು, ಕನ್ನಡದ ಕೆಲಸಗಳಿಗೆ ಪ್ರೋತ್ಸಾಹವಿದ್ದಂತೆ.
ತಮ್ಮ ಮನಸ್ಸಿಗೆ ತಟ್ಟಿದರೆ ಮರುತ್ತರ ಬರೆಯಿರಿ, ತಟ್ಟದಿದ್ದರೂ ಬರೆಯಿರಿ. 

ಜವಾಬ್ದಾರಿಯುತ ಕನ್ನಡಿಗ,
ಅರವಿಂದರಾಜ ಬಿ ದೇಸಾಯಿ. 

Sunday, February 20, 2011

ಮತದಾನ : ಎಸ್ ಎಲ್ ಭೈರಪ್ಪ

ಎಲ್ಲರಿಗೂ ನಮಸ್ಕಾರ, ತುಂಬಾ ದಿನವಾಯಿತು, ಏನಾದರು ಬರೆಯಲೇಬೇಕೆಂಬ ದೃಡ ನಿರ್ಧಾರದೊಂದಿಗೆ,  ಒಂದು ಕೈಯಲ್ಲಿ ಟೀ ಇನ್ನೊಂದು ಕೈಯಲ್ಲಿ ಪೆನ್ ಹಿಡಿದು ಕುಳಿತುಕೊಂಡಿದ್ದೇನೆ. ಯುದ್ಧದಲ್ಲಿ ಕತ್ತಿ, ಡಾಲ್ ಹಿಡಿದ ಯುವುದೋ ಯುವರಾಜ ನೆನಪಾಗುತ್ತಿದ್ದ. ಇರಲಿ, ಇನ್ನು ಕಾದಂಬರಿ ವಿಷಯಕ್ಕೆ ಬಂದರೆ,
ಸಮಕಾಲೀನ ಸಾರ್ವಜನಿಕ ಜೀವನವನ್ನು ವಸ್ತುವನ್ನಾಗಿರಿಸಿದ ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ಮತದಾನ ಕೃತಿಯ ವಿಮರ್ಶೆ ಇದು.


ಕೃತಿಯನ್ನು ಕೊಂಡದ್ದು ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಈ ಬಾರಿಯ ಸಾಹಿತ್ಯ  ಸಮ್ಮೇಳನದಲ್ಲಿ ೮ ಕೋಟಿ ರೂಪಾಯಿಗಳ ಕನ್ನಡ ಕೃತಿಗಳು ಬಿಕರಿಯಾದುದು ದಾಖಲೆ. ಅದರಲ್ಲಿ ನನ್ನದೊಂದು ಪಾಲಿದೆ ಎಂಬುದು ಹೆಮ್ಮೆಯ ವಿಚಾರ. ಕೆಲವು ಕೃತಿಗಳು ಮಾತ್ರ ೫೦% ರಿಯಾಯಿತಿಯಲ್ಲಿ ದೊರಕುತ್ತಿದ್ದುದು ಸಂತಸದ ವಿಷಯ, ಆದರೆ ಎಸ್ ಎಲ್ ಭೈರಪ್ಪ , ಕುವೆಂಪು, ತ.ರಾ.ಸು, ಮೊದಲಾದ ಖ್ಯಾತನಾಮರ ಕೃತಿಗಳ ಕೇವಲ ೧೦% ರಲ್ಲಿ ಮಾರಾಟವಾಗುತ್ತಿದ್ದವು. ೫೦% ರಲ್ಲಿ ಕೊಟ್ಟಿದ್ದರೆ ಚನ್ನಾಗಿತ್ತು ಎಂದೆನ್ನಿಸಿದರೂ ಕೂಡಾ, ಓದುವ ನನ್ನ ಚಟ ನನ್ನನ್ನು ಕಟ್ಟಿಹಾಕಿ, ಕಾದಂಬರಿ ಕೊಂಡುಕೊಳ್ಳಲು ಪ್ರೇರೇಪಿಸಿತು.


ಕೃತಿಯು ಹಳ್ಳಿಯ ಸೊಗಡು, ಜನರ ಹಿತವನ್ನು ಬಯಸುವ ಡಾ:ಶಿವಪ್ಪ, ಅಧಿಕಾರದ ಅಭಿಲಾಷೆಯ ಸಾದರವಳ್ಳಿ, ಕಾಂಗ್ರೆಸ್ಸಿನ ಮಂತ್ರಿ, ಕಿರು ಕಂಟ್ರಾಕ್ಟರ್ ರಾಮಲಿಂಗೇಗೌಡರ ಸುತ್ತ ಗಿರಕಿ ಹೊಡೆಯುತ್ತಾ, ಮತದಾನದ ಪ್ರಧಾನ ಅಂಶವಿರುವ ಕೃತಿಯಿದು.


ಜನರ ಹತ್ತಿರ ಹಣ ತೆಗೆದುಕೊಳ್ಳದೇ, ಔಷಧಿ ಕೊಟ್ಟು, ಜನಸೇವೆಯೇ ಜನಾರ್ಧನ ಸೇವೆ ಮಂತ್ರವೆಂದುಕೊಂಡಿದ್ದ ಡಾ:ಶಿವಪ್ಪನ ಜೀವನ ಯಾವ ಬಡವನ ಜೀವನಕ್ಕಿಂತ ಮಿಗಿಲಾದುದಲ್ಲ. ಅವನ ಈ ಹುಚ್ಚು ಜನಸೇವೆ ಅರಿಲಾರದ ತಾಯಿ, ಅಕ್ಕ ಮತ್ತು ಅವರ ಡಾಕ್ಟ್ರ ಬಗೆಗಿನ ಕಾಳಜಿ ಮತ್ತು ತಳಮಳಗಳು, ಕೃತಿಯ ಒಂದು ಗೋಡೆಯ ಆಧಾರ ಸ್ಥಂಬವಿದ್ದಂತೆ.


ಇಂಥ ಆದರ್ಶ ಜೀವಿಯನ್ನು ತನ್ನ ಮನೆ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬ ಉಮೇದುವಾರರಲ್ಲಿ ಮೊದಲಿಗರು, ರಾಜಕೀಯ ಧುರೀಣ ಸಾದರವಳ್ಳಿ, ಕಿರು ಕಂಟ್ರಾಕ್ಟರ್ ರಾಮಲಿಂಗೇಗೌಡ. ಮದುವೆಯಾದರೆ ತನ್ನ ಆದರ್ಶ ಜೀವನಕ್ಕೆಲ್ಲಿ ಕೊಡಲಿ ಪೆಟ್ಟು ಬೀಳುವುದೆಂದು ಎಚ್ಚರ ವಹಿಸುವ ಡಾ:ಶಿವಪ್ಪ.


ಈ ಡಾ:ಶಿವಪ್ಪರ ಜನಸೇವೆಯು ಇಲ್ಲಿಗೆ ನಿಯಮಿತವಾಗಬಾರದು, ರಾಜ್ಯ ರಾಷ್ಟ್ರಕ್ಕೆ ತಮ್ಮಂಥ ತರುಣ ಆದರ್ಶ ಜೀವಿಗಳ ಅವಶ್ಯಕತೆಯಿದೆಯಂದೂ, ರಾಜಕೀಯದಲ್ಲಿದ್ದರೆ, ಇಂಥ ಸಾವಿರಾರು ಹಳ್ಳಿಗಳ ಉದ್ಧಾರವಾಗುವುದೆಂದು, ತಮ್ಮ ತಮ್ಮ ಹಿತವನ್ನು ಬಯಸಿ, ರಾಜಕೀಯ ಪಕ್ಷಗಳು ಡಾ:ಶಿವಪ್ಪನಿಗೆ ಮಂಕುಬೂದಿ ಎರಚಿ ಮತಧಾನಕ್ಕೆ ಸಿದ್ದ ಪಡಿಸುವುದು ಕೃತಿಯ ತಳಪಾಯ ಆಗಿದೆ, ಅಲ್ಲಿಂದ ಶುರು ಕಳ್ಳ ಪೋಲಿಸ್ ಆಟ.


ಮತದಾನದಲ್ಲಿ ಬಕರಾ ಆಗುವ ಡಾ:ಶಿವಪ್ಪ, ಅದೇ ಸಮಯದಲ್ಲಿ ಒಬ್ಬ ರೋಗಿಯ ಸಾವು, ತಾಯಿಯ ಸಾವು, ಕೆಟ್ಟ ಅನುಭವಗಳು ದೊಡ್ಡ ಪಾಠವನ್ನೇ ಕಲಿಸುತ್ತವೆ. ಕಿರು ಕಂಟ್ರಾಕ್ಟರ್ ಸಾಲ ಬಾಧೆ ತಾಳಲಾರದೆ ಖಿನ್ನತೆಯಿಂದ ಅತ್ಮಹತ್ಯೆ ಮಾಡಿಕೊಳ್ಳುವುದು, ಮದುವೆಯಾದ ಮಗಳು ರಂಗಲಕ್ಷ್ಮಿ ಮತ್ತು ಮದುವೆಯಾಗದ ಡಾ. ಶಿವಪ್ಪ ಅವರ ಜೀವನವು ನವ ವಸಂತವಾಗಿ ಬದಲಾಗುವುದರೊಂದಿಗೆ ಕೃತಿಯ ಉಪಸಂಹಾರ ಸುಖಾಂತ್ಯ ಕಾಣುತ್ತದೆ.


೧೯೬೫ ರಲ್ಲಿ ಪ್ರಕಟವಾದ ಈ ಕೃತಿ ಕರ್ನಾಟಕದ ಏಕೀಕರಣ ಮತ್ತು ಜಾತಿವಾದ ವಿಷಯವನ್ನು ಒಂದು ಭಾಗವನ್ನಾಗಿರಿಸಿದೆ.


ಸೂಳೇಮಕ್ಳು, ಹುಚ್ಚರಂಡಿ , ಮುಂಡೆ, ನಿಮ್ಮೌನ ಎಂಬ ಜವಾರಿ ಹಳ್ಳಿಯ ಬೈಗುಳ ಪದಗಳನ್ನು ಕೃತಿಯ ಒತ್ತಾಸೆಯಾಗಿ, ಹಳ್ಳಿಯ ಸೊಗಡನ್ನು, ನಿಜ ಸ್ವರೂಪವನ್ನು ಚಿತ್ರಿಸಲು, ಭಾಷೆಯ ಅಡ್ಜೆಕ್ಟಿವ್ ಆಗಿ ಬಳಸಿರುತ್ತಾರೆ.

"ಜನಸೇವೆಯು ಬರೀ ರಾಜಕಾರಣದಿಂದಲ್ಲ, ಆದರ್ಶವಿದ್ದರೆ ಅವಕಾಶ ಕಲ್ಪಿಸಿಕೊಂಡು ಮಾಡುವ ಕೆಲಸದಲ್ಲೇ ಜನಸೇವೆ ಮಾಡಿ ಕೈಲಾಸ ಕಾಣಬಹುದು ಎಂಬುದು ಕೃತಿಯ ಒಟ್ಟಾರೆ ಸಾರಾಂಶ".

ಕಾದಂಬರಿಯ ಕರ್ತೃ ಎಸ್ ಎಲ್ ಭೈರಪ್ಪ ಈ ಕೆಲ ದಿನಗಳ ಹಿಂದೆ ಕನ್ನಡಿಗರು "ತುಂಟರು" ಎಂದು ಹೇಳಿ ವಿವಾದದಲ್ಲಿ ಸಿಕ್ಕಿಕೊಂಡಿರುವುದು ನೆನಪಿಗೆ ಬರುತ್ತದೆ. ಅದರ ಹಿನ್ನೆಲೆ ಏನೇ ಇರಲಿ, ಅವರ ಮಾತಿಗೆ ನನ್ನ ಧಿಕ್ಕಾರವಿದ್ದೇ ಇದೆ. ಅವರ ಮೇಲಿನ ಗೌರವ ಕೊಂಚ ಕಡಿಮೆಯಾದರೂ ಕೂಡಾ, ಅವರ ಈ ಕೃತಿಗಳು, ಅವರು ಮಾಡುತ್ತಿರುವ ಕನ್ನಡಾಂಬೆಯ ಸೇವೆಯ ಮುಂದೆ ನಮ್ಮ ಧಿಕ್ಕಾರ ಯಾವ ಲೆಕ್ಕಕ್ಕೂ ಇಲ್ಲ. 
77 ನೇ ಕನ್ನಡ ಸಾಹಿತ್ಯ  ಸಮ್ಮೇಳನದ ಲೇಖನ ಕೂಡಾ ಬರೆದಾಗಿದೆ. ಚಿಕ್ಕ, ಪುಟ್ಟ, ಸಂಕಲನ, ವ್ಯವಕಲನಗಳಿವೆ, 2 ದಿನ ಹಿಡಿಯಬಹುದು.

ಎಂದೆಂದೂ ನಿಮ್ಮವ
ಅರವಿಂದರಾಜ ಬಿ ದೇಸಾಯಿ....,