A r v i n d r a j   D e s a i

Sunday, February 20, 2011

ಮತದಾನ : ಎಸ್ ಎಲ್ ಭೈರಪ್ಪ

ಎಲ್ಲರಿಗೂ ನಮಸ್ಕಾರ, ತುಂಬಾ ದಿನವಾಯಿತು, ಏನಾದರು ಬರೆಯಲೇಬೇಕೆಂಬ ದೃಡ ನಿರ್ಧಾರದೊಂದಿಗೆ,  ಒಂದು ಕೈಯಲ್ಲಿ ಟೀ ಇನ್ನೊಂದು ಕೈಯಲ್ಲಿ ಪೆನ್ ಹಿಡಿದು ಕುಳಿತುಕೊಂಡಿದ್ದೇನೆ. ಯುದ್ಧದಲ್ಲಿ ಕತ್ತಿ, ಡಾಲ್ ಹಿಡಿದ ಯುವುದೋ ಯುವರಾಜ ನೆನಪಾಗುತ್ತಿದ್ದ. ಇರಲಿ, ಇನ್ನು ಕಾದಂಬರಿ ವಿಷಯಕ್ಕೆ ಬಂದರೆ,
ಸಮಕಾಲೀನ ಸಾರ್ವಜನಿಕ ಜೀವನವನ್ನು ವಸ್ತುವನ್ನಾಗಿರಿಸಿದ ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ಮತದಾನ ಕೃತಿಯ ವಿಮರ್ಶೆ ಇದು.


ಕೃತಿಯನ್ನು ಕೊಂಡದ್ದು ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಈ ಬಾರಿಯ ಸಾಹಿತ್ಯ  ಸಮ್ಮೇಳನದಲ್ಲಿ ೮ ಕೋಟಿ ರೂಪಾಯಿಗಳ ಕನ್ನಡ ಕೃತಿಗಳು ಬಿಕರಿಯಾದುದು ದಾಖಲೆ. ಅದರಲ್ಲಿ ನನ್ನದೊಂದು ಪಾಲಿದೆ ಎಂಬುದು ಹೆಮ್ಮೆಯ ವಿಚಾರ. ಕೆಲವು ಕೃತಿಗಳು ಮಾತ್ರ ೫೦% ರಿಯಾಯಿತಿಯಲ್ಲಿ ದೊರಕುತ್ತಿದ್ದುದು ಸಂತಸದ ವಿಷಯ, ಆದರೆ ಎಸ್ ಎಲ್ ಭೈರಪ್ಪ , ಕುವೆಂಪು, ತ.ರಾ.ಸು, ಮೊದಲಾದ ಖ್ಯಾತನಾಮರ ಕೃತಿಗಳ ಕೇವಲ ೧೦% ರಲ್ಲಿ ಮಾರಾಟವಾಗುತ್ತಿದ್ದವು. ೫೦% ರಲ್ಲಿ ಕೊಟ್ಟಿದ್ದರೆ ಚನ್ನಾಗಿತ್ತು ಎಂದೆನ್ನಿಸಿದರೂ ಕೂಡಾ, ಓದುವ ನನ್ನ ಚಟ ನನ್ನನ್ನು ಕಟ್ಟಿಹಾಕಿ, ಕಾದಂಬರಿ ಕೊಂಡುಕೊಳ್ಳಲು ಪ್ರೇರೇಪಿಸಿತು.


ಕೃತಿಯು ಹಳ್ಳಿಯ ಸೊಗಡು, ಜನರ ಹಿತವನ್ನು ಬಯಸುವ ಡಾ:ಶಿವಪ್ಪ, ಅಧಿಕಾರದ ಅಭಿಲಾಷೆಯ ಸಾದರವಳ್ಳಿ, ಕಾಂಗ್ರೆಸ್ಸಿನ ಮಂತ್ರಿ, ಕಿರು ಕಂಟ್ರಾಕ್ಟರ್ ರಾಮಲಿಂಗೇಗೌಡರ ಸುತ್ತ ಗಿರಕಿ ಹೊಡೆಯುತ್ತಾ, ಮತದಾನದ ಪ್ರಧಾನ ಅಂಶವಿರುವ ಕೃತಿಯಿದು.


ಜನರ ಹತ್ತಿರ ಹಣ ತೆಗೆದುಕೊಳ್ಳದೇ, ಔಷಧಿ ಕೊಟ್ಟು, ಜನಸೇವೆಯೇ ಜನಾರ್ಧನ ಸೇವೆ ಮಂತ್ರವೆಂದುಕೊಂಡಿದ್ದ ಡಾ:ಶಿವಪ್ಪನ ಜೀವನ ಯಾವ ಬಡವನ ಜೀವನಕ್ಕಿಂತ ಮಿಗಿಲಾದುದಲ್ಲ. ಅವನ ಈ ಹುಚ್ಚು ಜನಸೇವೆ ಅರಿಲಾರದ ತಾಯಿ, ಅಕ್ಕ ಮತ್ತು ಅವರ ಡಾಕ್ಟ್ರ ಬಗೆಗಿನ ಕಾಳಜಿ ಮತ್ತು ತಳಮಳಗಳು, ಕೃತಿಯ ಒಂದು ಗೋಡೆಯ ಆಧಾರ ಸ್ಥಂಬವಿದ್ದಂತೆ.


ಇಂಥ ಆದರ್ಶ ಜೀವಿಯನ್ನು ತನ್ನ ಮನೆ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬ ಉಮೇದುವಾರರಲ್ಲಿ ಮೊದಲಿಗರು, ರಾಜಕೀಯ ಧುರೀಣ ಸಾದರವಳ್ಳಿ, ಕಿರು ಕಂಟ್ರಾಕ್ಟರ್ ರಾಮಲಿಂಗೇಗೌಡ. ಮದುವೆಯಾದರೆ ತನ್ನ ಆದರ್ಶ ಜೀವನಕ್ಕೆಲ್ಲಿ ಕೊಡಲಿ ಪೆಟ್ಟು ಬೀಳುವುದೆಂದು ಎಚ್ಚರ ವಹಿಸುವ ಡಾ:ಶಿವಪ್ಪ.


ಈ ಡಾ:ಶಿವಪ್ಪರ ಜನಸೇವೆಯು ಇಲ್ಲಿಗೆ ನಿಯಮಿತವಾಗಬಾರದು, ರಾಜ್ಯ ರಾಷ್ಟ್ರಕ್ಕೆ ತಮ್ಮಂಥ ತರುಣ ಆದರ್ಶ ಜೀವಿಗಳ ಅವಶ್ಯಕತೆಯಿದೆಯಂದೂ, ರಾಜಕೀಯದಲ್ಲಿದ್ದರೆ, ಇಂಥ ಸಾವಿರಾರು ಹಳ್ಳಿಗಳ ಉದ್ಧಾರವಾಗುವುದೆಂದು, ತಮ್ಮ ತಮ್ಮ ಹಿತವನ್ನು ಬಯಸಿ, ರಾಜಕೀಯ ಪಕ್ಷಗಳು ಡಾ:ಶಿವಪ್ಪನಿಗೆ ಮಂಕುಬೂದಿ ಎರಚಿ ಮತಧಾನಕ್ಕೆ ಸಿದ್ದ ಪಡಿಸುವುದು ಕೃತಿಯ ತಳಪಾಯ ಆಗಿದೆ, ಅಲ್ಲಿಂದ ಶುರು ಕಳ್ಳ ಪೋಲಿಸ್ ಆಟ.


ಮತದಾನದಲ್ಲಿ ಬಕರಾ ಆಗುವ ಡಾ:ಶಿವಪ್ಪ, ಅದೇ ಸಮಯದಲ್ಲಿ ಒಬ್ಬ ರೋಗಿಯ ಸಾವು, ತಾಯಿಯ ಸಾವು, ಕೆಟ್ಟ ಅನುಭವಗಳು ದೊಡ್ಡ ಪಾಠವನ್ನೇ ಕಲಿಸುತ್ತವೆ. ಕಿರು ಕಂಟ್ರಾಕ್ಟರ್ ಸಾಲ ಬಾಧೆ ತಾಳಲಾರದೆ ಖಿನ್ನತೆಯಿಂದ ಅತ್ಮಹತ್ಯೆ ಮಾಡಿಕೊಳ್ಳುವುದು, ಮದುವೆಯಾದ ಮಗಳು ರಂಗಲಕ್ಷ್ಮಿ ಮತ್ತು ಮದುವೆಯಾಗದ ಡಾ. ಶಿವಪ್ಪ ಅವರ ಜೀವನವು ನವ ವಸಂತವಾಗಿ ಬದಲಾಗುವುದರೊಂದಿಗೆ ಕೃತಿಯ ಉಪಸಂಹಾರ ಸುಖಾಂತ್ಯ ಕಾಣುತ್ತದೆ.


೧೯೬೫ ರಲ್ಲಿ ಪ್ರಕಟವಾದ ಈ ಕೃತಿ ಕರ್ನಾಟಕದ ಏಕೀಕರಣ ಮತ್ತು ಜಾತಿವಾದ ವಿಷಯವನ್ನು ಒಂದು ಭಾಗವನ್ನಾಗಿರಿಸಿದೆ.


ಸೂಳೇಮಕ್ಳು, ಹುಚ್ಚರಂಡಿ , ಮುಂಡೆ, ನಿಮ್ಮೌನ ಎಂಬ ಜವಾರಿ ಹಳ್ಳಿಯ ಬೈಗುಳ ಪದಗಳನ್ನು ಕೃತಿಯ ಒತ್ತಾಸೆಯಾಗಿ, ಹಳ್ಳಿಯ ಸೊಗಡನ್ನು, ನಿಜ ಸ್ವರೂಪವನ್ನು ಚಿತ್ರಿಸಲು, ಭಾಷೆಯ ಅಡ್ಜೆಕ್ಟಿವ್ ಆಗಿ ಬಳಸಿರುತ್ತಾರೆ.

"ಜನಸೇವೆಯು ಬರೀ ರಾಜಕಾರಣದಿಂದಲ್ಲ, ಆದರ್ಶವಿದ್ದರೆ ಅವಕಾಶ ಕಲ್ಪಿಸಿಕೊಂಡು ಮಾಡುವ ಕೆಲಸದಲ್ಲೇ ಜನಸೇವೆ ಮಾಡಿ ಕೈಲಾಸ ಕಾಣಬಹುದು ಎಂಬುದು ಕೃತಿಯ ಒಟ್ಟಾರೆ ಸಾರಾಂಶ".

ಕಾದಂಬರಿಯ ಕರ್ತೃ ಎಸ್ ಎಲ್ ಭೈರಪ್ಪ ಈ ಕೆಲ ದಿನಗಳ ಹಿಂದೆ ಕನ್ನಡಿಗರು "ತುಂಟರು" ಎಂದು ಹೇಳಿ ವಿವಾದದಲ್ಲಿ ಸಿಕ್ಕಿಕೊಂಡಿರುವುದು ನೆನಪಿಗೆ ಬರುತ್ತದೆ. ಅದರ ಹಿನ್ನೆಲೆ ಏನೇ ಇರಲಿ, ಅವರ ಮಾತಿಗೆ ನನ್ನ ಧಿಕ್ಕಾರವಿದ್ದೇ ಇದೆ. ಅವರ ಮೇಲಿನ ಗೌರವ ಕೊಂಚ ಕಡಿಮೆಯಾದರೂ ಕೂಡಾ, ಅವರ ಈ ಕೃತಿಗಳು, ಅವರು ಮಾಡುತ್ತಿರುವ ಕನ್ನಡಾಂಬೆಯ ಸೇವೆಯ ಮುಂದೆ ನಮ್ಮ ಧಿಕ್ಕಾರ ಯಾವ ಲೆಕ್ಕಕ್ಕೂ ಇಲ್ಲ. 
77 ನೇ ಕನ್ನಡ ಸಾಹಿತ್ಯ  ಸಮ್ಮೇಳನದ ಲೇಖನ ಕೂಡಾ ಬರೆದಾಗಿದೆ. ಚಿಕ್ಕ, ಪುಟ್ಟ, ಸಂಕಲನ, ವ್ಯವಕಲನಗಳಿವೆ, 2 ದಿನ ಹಿಡಿಯಬಹುದು.

ಎಂದೆಂದೂ ನಿಮ್ಮವ
ಅರವಿಂದರಾಜ ಬಿ ದೇಸಾಯಿ....,