A r v i n d r a j   D e s a i

Wednesday, March 4, 2015

ಪ್ರಾಥಮಿಕ ಶಿಕ್ಷಣ: ವೈಫಲ್ಯದ ಹೊಣೆ ಹೊರುವವರು ಯಾರು?

ಶಿಕ್ಷಣ, ಅದರಲ್ಲೂ ಪ್ರಾಥಮಿಕ ಶಿಕ್ಷಣ ಅನ್ನುವುದು ಬಹಳ ಗಂಭೀರ ವಿಷಯ, ಇಂಥಹ ವಿಷಯದ ಬಗ್ಗೆ ಬ್ಲಾಗ್ ಬರೆಯುವಾಗ ತುಂಬಾ ಜಾಗರೂಕತೆಯಿಂದ ಬರೆಯಬೇಕೆಂಬ ಅರಿವು ನನಗಿದೆ. ಇದು ನನ್ನ ಆಸಕ್ತಿ ವಿಷಯ ಕೂಡ ಹೌದು. ನನ್ನ ಅಪ್ಪಾಜಿಯವರು ಪ್ರಾಥಮಿಕ ಶಾಲಾ ಶಿಕ್ಷಕರು. ನಾನು ಮತ್ತೂ ನನ್ನ ಅಪ್ಪಾಜಿ ಆಪ್ತಮಿತ್ರರಿಗಿಂತ ಹೆಚ್ಚು. ನಾನು ಊರಿಗೆ ಹೋದಾಗ ಯಾವುದೇ ಮುಚ್ಚುಮರೆಯಿಲ್ಲದೇ ಎಲ್ಲ ವಿಷಯಗಳ ಬಗ್ಗೆ ವಾಕಿಂಗ್ ನೆಪದಲ್ಲಿ, ಮನೆಯಲ್ಲಿ ಕುಳಿತಾಗ, ಎಲ್ಲೆಂದರಲ್ಲಿ ಶಿಕ್ಷಣ, ಸಮಾಜ,ಧರ್ಮ, ಕ್ರಿಕೆಟ್, ರಾಜಕೀಯದ ಬಗ್ಗೆ ಹರಟುತ್ತಲೇ ಇರುತ್ತೇವೆ. ಶಿಕ್ಷಣ ಮುಕ್ತವಾಗಿ ಚರ್ಚೆಗೆ ಬರುವ ವಿಷಯ. ಇಲ್ಲಿ ಬರೆಯುವ ವಿಷಯ ಅವರಿಂದ ಸ್ಪೂರ್ತಿಗೊಂಡವು.
          ಗ್ರಾಮೀಣ ಶಾಲೆಗಳು ನಮ್ಮ ನಾಡಿನ ಸಾಂಸ್ಕೃತಿಕ ಹೃದಯಗಳು. ಪ್ರಾಥಮಿಕ ಶಾಲೆಗಳ ಬಗ್ಗೆ ನಮಗೆ ತಿಳಿದಿರುವುದಾರೂ ಏನು? ಮಧ್ಯಾನ್ಹದ ಬಿಸಿಯೂಟ, ಸಮವಸ್ತ್ರ, ಉಚಿತ ಟೆಕ್ಸ್ಟ್ ಬುಕ್ಸ್, ಸಮವಸ್ತ್ರ, ಕ್ಷೀರಭಾಗ್ಯ, ಎಲ್ಲಾ ಫ್ರೀ ಫ್ರೀ ಫ್ರೀ. ಕಲಿಕೆ ಯಾವ ಮಟ್ಟಕ್ಕಿದೆ ಎಂಬುದು ಯಾರು ಬಲ್ಲರು? ಸರ್ವ ಶಿಕ್ಷಣ ಅಭಿಯಾನ ಸೇರಿ ಹಲವಾರು ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋಟ್ಯಂತರ ಹಣ ಖರ್ಚು ಮಾಡುತ್ತವೆ. ಶೈಕ್ಷಣಿಕ ಯೋಜನೆಗಳಿಗೆ ನಮ್ಮಲ್ಲಿ ಹಣದ ಕೊರತೆ ಇಲ್ಲ. ಆದರೂ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಆಗುತ್ತಿಲ್ಲ. 5ನೇ ತರಗತಿ ವಿಧ್ಯಾರ್ಥಿಗೆ 2ನೇ ತರಗತಿಯ ಪುಸ್ತಕ ಓದಲು ಬರುವುದಿಲ್ಲ, ಐದು ಮಂದಿಯಲ್ಲಿ ಕನಿಷ್ಠ ಇಬ್ಬರಿಗೆ 11ರಿಂದ 99ರ ವರೆಗಿನ ಸಂಖೆಗಳನ್ನು ಗುರುತಿಸಲು ಬರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವು ಎಡವುತ್ತಿರುವುದಾದರೂ ಎಲ್ಲಿ? ಕಲಿಕೆ ಯಾವ ಮಟ್ಟಕ್ಕಿದೆ ಎಂಬುದು ಆ ದೇವರೇ ಹೇಳಬೇಕು. ಈ ವೈಫಲ್ಲ್ಯಕ್ಕೆ ಹೊಣೆ ಯಾರು? ಶಿಕ್ಷಕರಾ? ಶಿಕ್ಷಣ ಏಲಾಖೆನಾ? S.D.M.C? ಆಧಿಕಾರಿಗಳಾ? ಸರ್ಕಾರವಾ? ಸಮಾಜವಾ?. ವೈಫಲ್ಲ್ಯಕ್ಕೆ ಎಲ್ಲರೂ ಒಂದಿಲ್ಲ ಒಂದು ರೀತಿಯಲ್ಲಿ ಭಾಗಿದಾರರೇ. ಶಿಕ್ಷಣದಲ್ಲಿ ಎಲ್ಲರ ಪಾತ್ರಗಳ ಬಗ್ಗೆ ಸಕಾರಾತ್ಮಕ ಚರ್ಚೆಯಾಗಬೇಕು.
           ಮೊದಲಿಗೆ ಸರ್ಕಾರ ಮತ್ತು ಅದರ ಯೋಜನೆಗಳ ಬಗ್ಗೆ ಮಾತನಾಡುವುದಾದರೆ, 1986ರಲ್ಲಿ ಒಂದು ಶಾಲೆಗೆ ಪ್ರಾಥಮಿಕ ಅವಶ್ಯಕತೆಗಳಾದ ಏರಡು ಕೋಣೆ, ಇಬ್ಬರು ಶಿಕ್ಷಕರು, ಅವರಿಗೆ ಟ್ರೈನಿಂಗ್ ಮತ್ತು ಶಾಲೆಗೊಂದು ಮೈದಾನ ಇರಲೇಬೇಕೆಂಬ ಕಡ್ದಾಯದೊಂದಿಗೆ ಕಪ್ಪು ಹಲಗೆ ಕಾರ್ಯಾಚರಣೆಯನ್ನು ತಂದರು. ಈಗ ಸರ್ವ ಶಿಕ್ಷಣ ಅಭಿಯಾನ ಮತ್ತು RTE ಯೋಜನೆಗಳು ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸಿವೆ. ಆದರೂ ಏರು ಗತಿಯ ಸುಧಾರಣೆ ಏನು ಆಗಿಲ್ಲ ಅನ್ನುವುದೂ ಸತ್ಯ. ಸರ್ಕಾರದ ವಿಧ್ಯಾರ್ಥಿಗಳ ಮೇಲಿನ ಪ್ರಯೋಗಗಳೇ ನಿಧಾನ ಗತಿಗೆ ಕಾರಣ ಇರಬಹುದು. SSA ಅನುಷ್ಟಾನವಾದಾಗ ರಾಜ್ಯದ ಸುಮಾರು 26,000ಶಾಲೆಗಳ ಪೈಕಿ 5,000 ಶಾಲೆಗಳಲ್ಲಿ 8ನೇ ತರಗತಿಯನ್ನು ಪ್ರಾರಂಭಿಸಿತು. ಅಲ್ಲಿ ಸರಿಯಾದ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಲ್ಲದೆ ಮಕ್ಕಳ ಸ್ಥಿತಿ ICU ನಲ್ಲಿರುವ ರೋಗಿಯಂತಾಗಿದೆ. ಮೊದಲು ವಿಷಯಕ್ಕೊಂದು ಪುಸ್ತಕ ಇರುತ್ತಿತ್ತು, ಆಮೇಲೆ ತ್ರೈಮಾಸಿಕ, ಈಗ ಸೆಮೆಸ್ಟರ್. ಯಾಕೀ ಪ್ರಯೋಗಗಳು? ಇನ್ನು ನಲಿ-ಕಲಿ. 1ನೇ ತರಗತಿಯಲ್ಲಿ ಸುಮಾರು 967 ಕಾರ್ಡ್, 2ನೇ ತರಗತಿಯಲ್ಲಿ 985 ಕಾರ್ಡ್. ಅದರಲ್ಲಿನ ಮೆಟ್ಟಿಲು, ಸಾಧನೆ. ಏನಿವು? ಪ್ರಾಥಮಿಕ ಶಿಕ್ಷಣಕ್ಕೆ ಹೊರಗಿನವನಾದ ನನಗೆ, ಈ ಕಲಿಕೆಯ ಅಗತ್ಯತೆಯ ಬಗ್ಗೆ ಇನ್ನು ತಿಳಿದಿಲ್ಲ. ನಲಿ-ಕಲಿ ಯಲ್ಲಿ ಮಕ್ಕಳು ಮನೆಗೆ ಪುಸ್ತಕ ತೆಗೆದುಕೊಂಡು ಹೋಗುವ ಹಾಗಿಲ್ಲವಂತೆ. ಪುಸ್ತಕಗಳು ಮಗುವಿನ ಮತ್ತು ಪಾಲಕರ ನಡುವಿನ ಸೇತುವೆಯಂತೆ ಇರುತ್ತವೆ. ಇನ್ನು ನಾವು ಕಲಿತ ಅ, ಆ,ಇ,ಈ ಗೂ ಈಗಿನ ರ,ಗ,ಸ,ದ,ಅ ಗೂ ಸಂಬಂಧವೇ ಇಲ್ಲ. ಯೋಜನೆ ಬಗ್ಗೆ ಪಾಲಕರಿಗೆ ತಿಳಿಸುವ ಸೌಜನ್ಯ ಕೂಡ ಇಲಾಖೆಗೆ ಇಲ್ಲದೆ ಹೋದರೆ ಹೇಗೆ? ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು ಭಾಗಿದಾರರಾಗುವುದು ಬೇಡವಾ?
          ಈಗ ಶಿಕ್ಷಕರ ಮತ್ತು ಅವರ ಸವಾಲುಗಳ ಬಗ್ಗೆ ಹೇಳುವುದಾದರೆ. ಶಿಕ್ಷಕರು ಸಮಾಜದ ಮತ್ತು ಇಲಾಖೆಯ ನಡುವಿನ ಕೊಂಡಿಯಿದ್ದಂತೆ. ಹಳ್ಳಿಯ ಶಾಲೆಗಲ್ಲಿ ಹಾಜರಾತಿಯದೇ ದೊಡ್ಡ ಕೊರತೆ. ದಾಖಲಾತಿ ವರ್ಷಕ್ಕೊಮ್ಮೆ ಹೇಗೋ ಮಾಡಬಹುದು. ಆದರೆ ಹಾಜರಾತಿ? ಅದು ವರ್ಷಪೂರ್ತಿ. ಹಳ್ಳಿಗಳಲ್ಲಿ ಒಕ್ಕಲುತನ ಮನೆತನಗಳು, ಗುಳೇ ಹೋಗುವವರು, ಚಿಕ್ಕ ಮಕ್ಕಳನ್ನು ಎತ್ತಿಕೊಳ್ಳಲು ಮನೆಯಲ್ಲಿ ಉಳಿಯುವ ಹುಡುಗಿಯರು, ಬಾಲಕಾರ್ಮಿಕರಾಗಿ ಕೆಲಸಕ್ಕೆ ಹೋಗುವವರು, ಬಾಲ್ಯ ವಿವಾಹವಾಗಿ ಗಂಡನ ಮನೆಗೆ ಹೋಗುವ ಮಕ್ಕಳನ್ನು ಕರೆತರುವವರು ಯಾರು? ಕೊನೆಗೆ ಇವುಗಳ ಒಟ್ಟಾರೆ ಪರಿಣಾಮ ಎದುರಿಸುವವರು ಶಿಕ್ಷಕರೇ. ಮಕ್ಕಳ ಹಾಜರಾತಿಗೆ, ಬಿಸಿಯೂಟ ತಯಾರು ಮಾಡುವುದಕ್ಕೆ, ಅದರ document maintain ಮಾಡುವುದಕ್ಕೆ, ಕ್ಷೀರ ಭಾಗ್ಯದಲ್ಲಿ ಮಕ್ಕಳಿಗೆ ಹಾಲು ಕುಡಿಸುವವರು, ಕೋಳಿಗಣತಿ, ದನಗಣತಿ, ಜನಗಣತಿ, ಸರ್ಕಾರದ ಎಲ್ಲ ಕಡತಗಳಿಗೆ ಉತ್ತರ, ಹೀಗೆ ಇಲಾಖೆಯ ಎಲ್ಲ ಕಾರ್ಯಗಳಿಗೆ ಕುತ್ತಿಗೆ ನೀಡುತ್ತಿರುವವರು ಶಿಕ್ಷಕರೇ. ಒಂದು ಜಿಲ್ಲೆಯಲ್ಲಿ ಕೆಲವು ವರ್ಷಗಳ ಹಿಂದೆ ಒಬ್ಬ ತಲೆ ಕೆಟ್ಟ ಜಿಲ್ಲಾ ಪಂಚಾಯ್ತಿ ಅಧಿಕಾರಿ, ಶೌಚಾಲಯಗಳನ್ನು ಮಕ್ಕಳಿಂದ ಸ್ವಚ್ಛ ಮಾಡಿಸಿದ್ದಕ್ಕಾಗಿ ಶಿಕ್ಷಕನನ್ನು ಅಮಾನತಿನಲ್ಲಿಟ್ಟ ನೆನಪು ಈಗಲೂ ಎಲ್ಲರಿಗೂ ಇರಬಹುದು. ಅರ್ರೇ!! ತಮ್ಮ ಶಾಲೆಯನ್ನು ಮಕ್ಕಳು ಶುಚಿಯಾಗಿ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ? ಅದನ್ನು ಶಿಕ್ಷಕರೇ ಮಾಡಬೇಕಾ? ಶಿಕ್ಷಣ ನಿಂತ ನೀರಲ್ಲ. ಬದಲಾವಣೆಗಳು ಅವಶ್ಯ. ಹಾಗಂತ ಅಧಿಕಾರಿಗಳು ದಿನಕ್ಕೊಂದು ಸುತ್ತೋಲೆ ಹೊರಡಿಸಿ, ಬದಲಾವಣೆ ಆಗಿಬಿಡಬೇಕು ಎಂದರೆ ಆಗಿಬಿಡುವುದಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಬರುವ IAS ಅಧಿಕಾರಿಗಳು ತಮ್ಮದೇ ಆದ ಒಂದು ಸೆಟ್ ಕಾರ್ಯಕ್ರಮಗಳನ್ನು ಕೆಳಹಂತಕ್ಕೆ ರವಾನಿಸಿ ಬಿದುತ್ತಾರೆ. ಈಗಾಗಲೇ ಇಂಥ ಕಾರ್ಯಕ್ರಮಗಳು ಇವೆಯಾ ಅಂತ ಯೋಚನೆ ಯೋಚನೆ ಕೂಡ ಮಾದುವುದಿಲ್ಲ. ಇವೆಲ್ಲದರ ಪರಿಣಾಮ ಏಣಿಯ ಕಟ್ಟಾ ಕಡೆಯಲ್ಲಿ ಕೆಲಸ ಮಾಡುವ ಶಿಕ್ಷಕ ಒತ್ತಡಕ್ಕೆ ಸಿಕ್ಕಿ ಬಿಳುತ್ತಾನೆ. ಯಾವುದಾದರೂ ಪ್ರಾಥಮಿಕ ಶಾಲೆಗೆ ಹೋಗಿ ನೋಡಿದಾಗಷ್ಟೇ, ಕಳೆದ ಒಂದು ದಶಕದಲ್ಲಿ ಎಷ್ಟು ಕಾರ್ಯಕ್ರಮಗಳ ಬಗ್ಗೆ ದಾಖಲೆ ನಿರ್ವಹಿಸಬೇಕೆಂಬುದು ತಿಳಿಯುತ್ತದೆ. ಆದ್ದರಿಂದಲೇ ದಾಖಲೆಗಳ ನಿರ್ವಹಣೆ ಚೆನ್ನಾಗಿ ಆಗುತ್ತದೆ. ಕಲಿಕೆ? 'ಕೋಡಗನ ಕೋಳಿ ನುಂಗಿತ್ತಾ' ಎನ್ನುವಂತೆ, ದಾಖಲೆ ನಿರ್ವಹಣೆ ಕಲಿಕೆಯನ್ನು ನುಂಗಿ ಹಾಕಿದಂತಾಗಿದೆ.
          ಶಿಕ್ಷಕರ ತರಬೇತಿಗಾಗಿ ವಿವಿಧ ಕಾರ್ಯಕ್ರಮಗಳ ಹೆಸರಿನಲ್ಲಿ ಹಣ ಖರ್ಚು ಆಗುತ್ತಲೇ ಇದೆ, ಗುಣಮಟ್ಟ? ಜಿಲ್ಲಾ ಡಯಟ್ ಗಳು, DPEPಯ ಕೊಡುಗೆಯಾಗಿ ತಾಲೂಕಿನಲ್ಲಿ BRC (Block Resource Center), ಹೋಬಳಿಗಳ ಪ್ರತೀಕವಾಗಿ CRC (Cluster Resource Center) ಸಂಸ್ಥೆಗಳು ನಡೆಸುವ ತರಬೇತಿಯ ಗುಣಮಟ್ಟದ ಕೊರತೆ ಇದೆ. ತರಬೇತಿ ನೀಡುವವರು ಚೆನ್ನಾಗಿ ಹೋಂವರ್ಕ್ ಮಾಡಿರುವುದಿಲ್ಲ. ಜಿಲ್ಲಾ DDPI ಗಳು ಇದು ನಮ್ಮ ಕೆಲಸ ಅಲ್ಲ ಅಂತಲೇ ಭಾವಿಸುತ್ತಾರೆ. ಹೀಗಾಗಿ ಗುಣಮಟ್ಟದ ಹೊಣೆ ಯಾರದ್ದು? ಇಂಥ ತರಬೇತಿಗಳಲ್ಲಿ ಶಿಕ್ಷಕರಿಗೆ ಸಿಗಬೇಕಾದ  ಕನಿಷ್ಠ DA ಕೂಡ ಸಿಗುವುದಿಲ್ಲ, ಸಾಮೂಹಿಕವಾಗಿ ಊಟ ಮಾಡಿಸಿ ಕಳುಹಿಸುವ ಅಧಿಕಾರಿಗಳು ಅಲ್ಲಿದ್ದಾರೆ. ತರಬೇತಿಗೆ ಬರುವ ಶಿಕ್ಷಕರನ್ನು ಹಿಂದಿನ ದಿನ ಸಂಪರ್ಕಿಸಿ ಆಹ್ವಾನಿಸುತ್ತಾರೆ. ಅವರಿಗೆ ಅಲ್ಲಿ ನಡೆಯುವ ಸಾಹಿತ್ಯದ ಪ್ರತಿಗಳನ್ನೇ ಕೊಡುವುದಿಲ್ಲ. ಈ ತರಬೇತಿಗಳ ನಿರ್ವಹಣೆಯ ಬಗ್ಗೆ ಯಾರಾದರು ಆ ಕೇಂದ್ರಕ್ಕೆ ಭೇಟಿ ನೀಡಿದಾಗಲೇ ಅದು ಅರ್ಥವಾಗುತ್ತದೆ. ಪ್ರತಿಭಾವಂತ ಶಿಕ್ಷಕರು ರಾಜ್ಯದ ಮೂಲೆ ಮೂಲೆಯಲ್ಲಿರುತ್ತಾರೆ, ಅವರನ್ನು ಒಂದೆಡೆ ಸೇರಿಸಿ ತರಬೇತಿ ಕ್ಷೆತ್ರವೇಕೆ, ಇಡೀ ಶಿಕ್ಷಣ ಕ್ಷೇತ್ರಕ್ಕೆ ಒಂದು ಚಿಂತಕರ ಚಾವಡಿ (Think Tank) ನಿರ್ಮಾಣ ಮಾಡಬಹುದು. ಅರ್ಥಪೂರ್ಣ ತರಬೇತಿಗಳಿಂದ ಒಂದು ಸಂಪನ್ಮೂಲ ತಂಡವನ್ನು ರಾಜ್ಯಮಟ್ಟದಲ್ಲಿ ಪೋಷಿಸಬೇಕು. ಇನ್ನು ಎಲ್ಲಾ ಶಾಲೆಗಳಲ್ಲಿ 30:1  ಶಿಕ್ಷಕರ ವಿದ್ಯಾರ್ಥಿಗಳ ಅನುಪಾತ ಇದೆ. 100 ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ 7 ತರಗತಿಗಳಿಗೆ 4 ಶಿಕ್ಷಕರೆಂದರೆ ಹೇಗೆ? ತರಗತಿಗೆ ಒಬ್ಬ ಶಿಕ್ಷಕನಾದರೂ ಬೇಡವೇ? ಕೆಲವರು ತರಬೇತಿಗೆ ತೆರಳಿ, ಯಾರಾದರೂ ವೈದ್ಯಕೀಯ ರಜೆ ತೆಗೆದುಕೊಂಡರೆ ಏನು ಪರಸ್ಥಿತಿ? ಒಬ್ಬ ಶಿಕ್ಷಕ 7 ತರಗತಿಗಳನ್ನು ಹೇಗೆ ನಿಭಾಯಿಸುವುದು? ಇನ್ನು ಮುಖ್ಯ ಶಿಕ್ಷಕರು, ಅವರ ಕಲಿಕಾ ಅನುಭವವನ್ನು ಸದುಪಯೋಗ ಮಾಡಿಸಿಕೊಳ್ಳುವುದು ಬಿಟ್ಟು, ಇಲಾಖೆಯವರು ಅವರಿಗೆ ಹೊಸ ಹೊಸ ಬಿಲ್ಡಿಂಗ್ ಕಾರ್ಯಗಳು, ದಾಖಲೆ ನಿರ್ವಹಣೆಗಳು, ಸರ್ಕಾರದ ಯೋಜನೆಗಳ ನಿರ್ವಹಣೆ ನೀಡಿದರೆ ಹೇಗೆ? ಅವರ ಅನುಭವ ಹೀಗೆ ಹೊಳೆಯಲ್ಲಿ ಕೊಚ್ಚಿಕೊಂಡು ಹೋದಂತಾಗಿ ಬಿಡುತ್ತದೆ. ಎಲ್ಲಾ ಒತ್ತಡಗಳ ನಡುವೆ ಎಳೆಯ ಕಂದಮ್ಮಗಳು ನಲುಗಿ ಹೊಗುತ್ತವೆ.
           ಇನ್ನು ಶಿಕ್ಷಕರ ಕಾರ್ಯ ಕ್ಷಮತೆಯ  ಬಗ್ಗೆ ಹೇಳುವುದಾದರೆ, 'ಪ್ರಥಮ್' ಎನ್ನುವ NGO ಸರ್ವೇ ಪ್ರಕಾರ, ನಿಷ್ಠೆಯಿಂದ ಕೆಲಸ ಮಾಡುವವರು ಕೇವಲ 53% ಮಾತ್ರ, ಇನ್ನುಳಿದವರು ದಾಖಲೆಗಳನ್ನು ಶಿಸ್ತಿನಿಂದ ನಿರ್ವಹಣೆ ಮಾಡಿ, ಕಲಿಕೆಯನ್ನು ಗಾಳಿಗೆ ತೂರಿ, ಹರಟೆ ಹೊಡೆದು ಕಾಲಹರಣ ಮಾಡುವವರಿಗೆ ಏನು ಹೇಳೋಣ?
          ಪಾಲಕರು ಏನು ಮಾಡುತ್ತಾರೆ? RTEನಲ್ಲಿ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸುವುದು ಅವರ ಆದ್ಯ ಕರ್ತವ್ಯ ಎಂದಿದೆ. ಕಳುಹಿಸದಿದ್ದರೆ? ಬಡತನ, ಸಾಮಾಜಿಕ ಅಸಮನತೆಯಂಥ ಈ ಸಮಾಜದಲ್ಲಿ, ಪ್ರಜಾಪ್ರಭುತ್ವ ರಾಷ್ಟ್ರ ನಮ್ಮ ದೇಶದಲ್ಲಿ, ಪೋಷಕರು ದಂಡನೆಗೆ ಅರ್ಹರಲ್ಲ. ಆದರೂ ಮಕ್ಕಳ ಶಿಕ್ಷಣದ ನೈತಿಕತೆ ದೃಷ್ಟಿಕೋನದಿಂದ ಸರಿ ಅನಿಸದು. ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂದರೆ ಹೇಗೆ? ದೇಶದ ನಾಗರೀಕರಾಗಿ ಅವರವರ ಜವಾಬ್ದಾರಿಯ ಬಗ್ಗೆ ಅವರಿಗೆ ಅರಿವಿರದಿದ್ದರೆ ಹೇಗೆ?
          SDMC, ಜನಸಾಮಾನ್ಯರಿಗೆ ಶಾಲಾ ಶಿಕ್ಷಣದ ನಿರ್ವಹಣೆಯಲ್ಲಿ ಒಂದು ನಿರ್ಣಾಯಕ ಪಾತ್ರವಿರದಿದ್ದರೆ ಯಶಸ್ಸು ಸಿಗದು ಎಂಬ ಕಾರಣಕ್ಕಾಗಿ ಸರ್ಕಾರ ಪ್ರತಿ ಶಾಲೆಗೆ ಒಂದು SDMC ಯನ್ನು ನೇಮಿಸಿದೆ. SDMC ಗಳಿಗೆ ಶಾಲಾ ಅಭಿವೃದ್ಧಿಗಾಗಿ ಬರುವ ಅನುದಾನ ಬಿಟ್ಟು ಬೇರೇನೂ ಕಣ್ಣಿಗೆ ಕಾಣುವುದಿಲ್ಲ. ಇವರು ಶಾಲೆಯ ಮುಖ್ಯ ಭೂಮಿಕೆಯಾಗಿ ರಚನಾತ್ಮಕವಾಗಿ ಕೆಲಸ ಮಾಡಬೇಕು.
         ಇಷ್ಟೆಲ್ಲಾ ಇದ್ದರೂ, ಬೇರೆ ರಾಜ್ಯಗಳಿಗೆ ನಮ್ಮ ರಾಜ್ಯದ ಸ್ಥಿತಿ ಉತ್ತಮ. ಯಾವುದೇ ಹೊಸ ಕಾರ್ಯಕ್ರಮಗಳನ್ನು ರಚಿಸುವಾಗ ಗ್ರಾಮೀಣ ಶಾಲೆಗಳ ಶಿಕ್ಷಕರನ್ನು ಸಮಿತಿಯಲ್ಲಿಟ್ಟುಕೊಂಡು, ಅದರ ಸಾಧ್ಯತೆ ಭಾದ್ಯತೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಯೋಜನೆ ರಚಿಸಬೇಕು. ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಬೇಕು. ಮುಗ್ಧ ಮಗುವಿನ ಕಣ್ಣಿನಲ್ಲಿ ಇಣುಕಿ ನೋಡಿದಾಗ, ನಿಮಗೆ ಭಗವಂತ ಕಾಣದೇ ಹೋದರೆ, ಮತ್ತೆಲ್ಲೂ ದೇವರು ಕಾಣುವುದಿಲ್ಲ. ಮಕ್ಕಳು ದೇವರ ಸಮಾನ. ಅವರ ಭವಿಷ್ಯದ ಜೊತೆ ಆಡುವುದು ಸಲ್ಲದು. ಯಾರನ್ನು ಮರೆತರೂ, ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಮಕ್ಕಳು ಎಂದಿಗೂ ಮರೆಯುವುದಿಲ್ಲ.  ನಿಮ್ಮ ಒಳ್ಳೆಯ ಕಾರ್ಯಗಳನ್ನು ನಿಮ್ಮ ಇಲಾಖೆಯವರು ಗುರುತಿಸದೇ ಹೋದರೂ, ಮನೆಯಲ್ಲಿರುವ, ಶಾಲೆಯಲ್ಲಿರುವ ನಿಮ್ಮ ಮಕ್ಕಳು ನಿಮ್ಮನ್ನು ವಾಚ್ ಮಾಡುತ್ತಿರುತ್ತಾರೆ. ನಿಮ್ಮ ವ್ಯಕ್ತಿತ್ವ ಅವರಿಗೆ ಸ್ಪೂರ್ಥಿಯಾಗಬೇಕು. ಅವರಿಗಾಗಿ ನೀವು ಹೀರೋ ಆಗಲೇಬೇಕು. ನನ್ನ ಅಪ್ಪಾಜಿ ಹೇಳುವ "ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ", ಈ ಸಮಯಕ್ಕೆ ಅರ್ಥಗರ್ಬಿತ ಮಾತು. "ನನ್ನ ಭವಿಷ್ಯವನ್ನು ರೂಪಿಸಿದವರಲ್ಲಿ ನನ್ನ ಶಿಕ್ಷಕರ ಮಹತ್ತರ ಪಾತ್ರ ಇದೆ" ಎಂದು ಹೇಳುವ ಹಲವಾರು ಸ್ನೇಹಿತರು ನನ್ನೊಂದಿಗಿದ್ದಾರೆ. ಅಂಥವರ ಭವಿಷ್ಯ ರೂಪಿಸುವಲ್ಲಿ ಶ್ರಮ ಪಡಿ. ಶಾಲೆಯಲ್ಲಿ ಪಾಠದಲ್ಲಿರುವುದನ್ನು ಯಥಾವತ್ತಾಗಿ ಹೇಳುವುದಕ್ಕಿಂತ, ಅನುಭವದ ಆಧಾರದ ಮೇಲೆ ಕಲಿಸಬೇಕು. ಮಕ್ಕಳಿಗೆ ಮುಕ್ತವಾದ ವಾತಾವರಣ ಕಲ್ಪಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ಗುರು ಬ್ರಹ್ಮೋ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಎಂಬ ದೊಡ್ಡವರ ಮಾತುಗಳು ಎಂದೆಂದಿಗೂ ಶಾಶ್ವತ. 
         ಈ ಕ್ಷೇತ್ರದಲ್ಲಿ ನನಗೆ ಯಾವುದೇ ಅನುಭವ ಇಲ್ಲದಿದ್ದರೂ, ತಾಳ್ಮೆಯಿಂದ ನನ್ನ ಬ್ಲಾಗ್ ಓದಿ ಸಹಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಬರೆದಿರುವ ಯಾವುದೇ ಅಭಿಪ್ರಾಯ ಅತಿಶಯೋಕ್ತಿ ಅನ್ನಿಸಿದರೆ ಕ್ಷಮೆ ಇರಲಿ. ಇಷ್ಟವಾದರೆ ತಿಳಿಸಿ. ಇಷ್ಟವಾಗದಿದ್ದರೂ ತಿಳಿಸಿ.

-- ದೇಸಾಯಿ ಸರ್ ಮಗ ಅರವಿಂದ್. 

Monday, January 12, 2015

ಸಂಕ್ರಾಂತಿ ಬಂತು : ಎಳ್ಳು ತಿಂದು ಒಳ್ಳೊಳ್ಳೆ ಮಾತಾಡಿ

ನನ್ನ ಬಾಲ್ಯದ ನೆನಪುಗಳನ್ನೆಲ್ಲಾ ಟೇಬಲ್ ಮೇಲೆ ಹರವಿಕೊಂಡು, ಪೆನ್ನು ಹಿಡಿದು ಬ್ಲಾಗ್ ಬರೆಯಲು ಶುರು ಮಾಡಿದ್ದೇನೆ. ನಾನು ಚಿಕ್ಕವನಿದ್ದಾಗಿನ ನೆನಪು. ಸಂಕ್ರಾಂತಿ ಬಂತೆಂದರೆ, ಎಳ್ಳು ಸಕ್ಕರೆ ಅಥವಾ ಬೆಲ್ಲದ ಚೂರುಗಳನ್ನು ಒಂದು ಸ್ಟೀಲ್ ಡಬ್ಬದಲ್ಲಿ ಹಾಕಿಕೊಂಡು, ನನ್ನ ಅಪ್ಪಾಜಿ ಹೇಳಿಕೊಟ್ಟ ವಾಕ್ಯ "ಎಳ್ಳು ತಿಂದು ಒಳ್ಳೊಳ್ಳೆ ಮಾತಾಡಿ" ಎಂದು ಸರಿಸುಮಾರು ಎಲ್ಲರಿಗೂ ಶುಭಾಶಯ ಕೋರುತ್ತಾ ಊರೆಲ್ಲ ತಿರುಗಿ ಬಿಡುತ್ತಿದ್ದೆ. ಚಿಕ್ಕವರಾಗಿದ್ದಾಗ ಮುಗ್ಧತೆಯಿಂದ ಎಲ್ಲ ಮನೆಯನ್ನು ಭೇಟಿಯಾಗಿ ಎಳ್ಳು ಕೊಡುವುದು ಒಂದು ಸಂಭ್ರಮ.
       ಹಬ್ಬಗಳು ಬಂತೆಂದರೆ ನನಗಂತೂ ಫುಲ್ ಖುಷಿ. ಹಬ್ಬದ ದಿನದಂದು ಮದುವೆ ಮನೆಯ ವಾತಾವರಣ. ನನ್ನ ಅವ್ವನಿಗಂತೂ ಭರಪೂರ ಕೆಲಸ. ಪೂಜೆ ಆಗುವವರೆಗೂ ತಿನ್ನಲು ಏನೂ ಕೊಡುವುದಿಲ್ಲ ಎಂದು ನನ್ನವ್ವ ಹೇಳಿದಾಗ, ಹೊಟ್ಟೆ ಚುರುಗುಟ್ಟುತ್ತಾ ಹುಸಿ ಕೋಪದಿಂದ ಕಾಯುತ್ತಿದ್ದುದೇ ಸಂಭ್ರಮ. ಚಳಿಗಾಲದಲ್ಲಿ ಮೈಯಲ್ಲಾ ಬಿರುಕು ಬಿಟ್ಟು, ನಂತರ ಸಂಕ್ರಮಣ ಬಂದಾಗ, ಎಳ್ಳು ಎಣ್ಣೆಯ ಅಂಶವನ್ನು ಮೈಯಲ್ಲಿ ಬೆರೆಸುತ್ತದೆ ಎಂದು ವೈಜ್ಞಾನಿಕ ಟಿಪ್ಪಣೆ ಕೊಟ್ಟು, ಅಪ್ಪ ಸ್ವತಃ ತಾನೇ ನನ್ನನ್ನು ಸ್ನಾನ ಮಾಡಿಸುತ್ತಿದ್ದರು, ಅದೇ ಸಂಭ್ರಮ.
          ನನ್ನವ್ವ ಎಳ್ಳನ್ನು ಹಸನು ಮಾಡಿ, ಬಿಸಿಲಿಗೆ ಕಾಯಿಸಿ, ಅದರಲ್ಲಿ ಬೆಲ್ಲ ಬೆರೆಸಿ ಎಳ್ಳು ಹೋಳಿಗೆ ಮಾಡಿ, ತಿನ್ನಲು ಕೊಟ್ಟಾಗ ಅದಕ್ಕಿಂತ ಸಂಭ್ರಮ ಇನ್ನೊಂದಿಲ್ಲ. ನನ್ನ ಅಣ್ಣ ಸೈನಿಕ ಶಾಲೆಯಲ್ಲಿ ಓದುತ್ತಿದ್ದಾಗ ಸಂಕ್ರಮಣದ ಮೆರವಣಿಗೆಗೆ ನಾನೇ ರಾಜ. ಅಣ್ಣನಿಲ್ಲದೇ ಕಳೆದ ಎಲ್ಲಾ ಸಂಕ್ರಾಂತಿಗಳಲ್ಲೂ ಆತನ ಕೊರತೆ ಕಾಡುತ್ತಿರುತ್ತಿತ್ತು. ಆದರೆ ನನ್ನ ಅಪ್ಪಾಜಿ, ಅಪ್ಪನಾಗಿ ಅಗತ್ಯ ಬಿದ್ದಾಗ ಅಣ್ಣನಾಗಿ, ಸ್ನೇಹಿತನಾಗಿ ಕೊರತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು.


     ನಾನು ಚಿಕ್ಕವನಾಗಿದ್ದಾಗಿನಿಂದ ಹಿಡಿದು, ಇಲ್ಲಿಯವರೆಗೆ ಹಲವಾರು ಬದಲಾವಣೆಗಳನ್ನು ನೋಡುತ್ತಾ ಬಂದಿದ್ದೇನೆ. ನನ್ನ ಅವ್ವ ಮನೆಯಂಗಳದಲ್ಲಿ ಒಂದು ದೊಡ್ಡ ಹಂಡೆ ಹಿಡಿಯುವಷ್ಟು ಜಾಗದಲ್ಲಿ ರಂಗೋಲಿ ಹಾಕುತ್ತಾಳೆ. ಬೆಂಗಳೂರಿನ ಹೆಣ್ಣುಮಕ್ಕಳು ಅಪಾರ್ಟಮೆಂಟ್ ನಲ್ಲಿ ರಂಗೋಲಿ ಹಾಕಲು ಜಾಗ ಹುಡುಕುತ್ತಿರುತ್ತಾರೆ. ನನ್ನವ್ವ ಎಳ್ಳು ಬೆಲ್ಲ ಸೇರಿಸಿ ಉಂಡೆ ಮಾಡಿ ಕೊಡುತ್ತಿದ್ದರೆ, ನನ್ನ ಅಕ್ಕ ಸುಜಾತಾ ಮನೆಯಿಂದಲೇ ಎಳ್ಳುಂಡೆ ಮಾಡಿಸಿ ಮಕ್ಕಳಿಗೆ ಕೊಡುತ್ತಾಳೆ, ಇದೂ ಒಂಥರಾ ಔಟ್ ಸೋರ್ಸಿಂಗ್. ಆಗ ಊರ ತುಂಬೆಲ್ಲಾ ಎಳ್ಳು ಹಂಚುತ್ತಿದ್ದೆವು, ಈಗ ಪಕ್ಕದ ಮನೆಯವರಿಗೂ ಕೊಡುವ ಪದ್ಧತಿ ಇಲ್ಲ. ಆಗ 'ಚರಿಗೆ ಚಲ್ಲು' ವಂಥಾ ಕಾರ್ಯಕ್ರಮಗಳನ್ನೂ ಆಚರಿಸಿದ್ದಿದೆ., ಈಗ ಯಾರ ಮನೆ, ಹೊಲಗಳಲ್ಲೂ ಇದು ಕಾಣ ಸಿಗುವುದಿಲ್ಲ. ಎಳ್ಳು ಬೆಲ್ಲವನ್ನು ಸಂಭಂಧಿಕರಿಗೆ ಸ್ಟೀಲ್ ಡಬ್ಬಿಯಲ್ಲಿ ಹಾಕಿ ಕೊಟ್ಟು ಬರುವ ಪದ್ಧತಿಯುತ್ತು, ಈಗೆಲ್ಲ ಎಳ್ಳು ಬೆಲ್ಲ ಚಿತ್ರ ಬಿಡಿಸಿ ಮೊಬೈಲಿನಲ್ಲಿ ಕಳುಹಿಸುವ ಸಮಯ ಬಂದೊದಗಿದೆ. ಹಬ್ಬದ ದಿನದಂದು ಮೆಸೇಜಿಗೆ ಒಂದು ರೂಪಾಯಿ ಮಾಡಿದಾಗಿನಿಂದ ಮೆಸೇಜೂ ಕಡಿಮೆಯಾಗಿಬಿಟ್ಟಿದೆ. ಈಗೇನಿದ್ದರೂ ಫೆಸ್ ಬುಕ್ , ವಾಟ್ಸ್ ಆಪ್.
     ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ಆಚರಣೆಗಳೂ ಬದಲಾಗಬೇಕು. ಹಾಗಂತ ಹೋಳಿಗೆ ಬದಲಾಗಿ ಫಿಜ್ಜಾ ಆಗಲಿ, ಪಾಯಸದ ಬದಲಾಗಿ ಕೂಲ್ ಡ್ರಿಂಕ್ಸ್ ಬರಬಾರದು. ಹಬ್ಬದ ಆಚರಣೆಯಲ್ಲಿ ಬದಲಾವಣೆ ಮಾಡಿದರೂ ಸಂಭ್ರಮಕ್ಕೆ ಚ್ಯುತಿ ಬರಬಾರದು. ಅಜ್ಜಿಯರು ಮೊಮ್ಮಕ್ಕಳಿಗೊಸ್ಕರ ವಾದರೂ ಆಚರಣೆಗಳನ್ನು ಆಚರಿಸಿ, ಅದರ ಮಹತ್ವ ಕಾಪಾಡಬೇಕು. ಬಹುಷಃ ಪೀಳಿಗೆಯಿಂದ ಪೀಳಿಗೆಗೆ ನಾವು ಕೊಡುವ ಕೊಡುಗೆ ಇದೇ . ಹಿರಿಯರು ಈ ಹಬ್ಬಗಳನ್ನು ಯಾವುದೇ ಕಾರಣವಿಲ್ಲದೆ ಆಚರಣೆ ಮಾಡುವಂಥ ದಡ್ಡರಲ್ಲ. ಅವರು ಹಾಕಿಕೊಟ್ಟ ದಾರಿಯಲ್ಲಿ ಕೆಟ್ಟದಂತೂ ಇಲ್ಲ,.
        ಹಬ್ಬಗಳು ಬರೀ ರುಚಿಯಾದ ತಿಂಡಿ ತಿನ್ನುವ ನಾಲಿಗೆಗೆ ಸಂಭಂದಿಸಿದ ವಿಷಯ ಅಲ್ಲ, ಇದು ಮನಸ್ಸಿಗೆ ಸಂಭಂದಿಸಿದ ವಿಷಯವೂ ಹೌದು. ಮನಸ್ಸಿನ ಬದಲಾವಣೆಗಳಿಗೆ, ಪ್ರತಿಜ್ಞೆಗಳಿಗೆ ಒಳ್ಳೆ ದಿನ. ಸಂಕ್ರಾಂತಿಯಂತೂ ಹೇಳಿ ಮಾಡಿಸಿದ ದಿನ. ಈ ಸಂಕ್ರಾಂತಿಗೆ ಒಂದು ಪ್ರತಿಜ್ಞೆ ಮಾಡೋಣ. ಬೆಳಿಗ್ಗೆ ಎದ್ದು ಉಸಿರು ಒಳಗೆ ಎಳೆದುಕೊಳ್ಳುತ್ತಾ ನಾನು ಆರೋಗ್ಯದಿಂದ ಇದ್ದೇನೆ ಎಂದುಕೊಳ್ಳೋಣ. ಉಸಿರು ಹೊರಗೆ ಬಿಡುತ್ತಾ ಅನಾರೋಗ್ಯವೆಲ್ಲಾ ಹೊರಹಾಕುತ್ತಿದ್ದೇವೆ ಎಂದು ಕೊಳ್ಳೋಣ. ಎಳ್ಳು ಬೆಲ್ಲ ತಿಂದು ಇನ್ನೆಲ್ಲ ನಮಗೆ ಒಳ್ಳೆ ದಿನಗಳೇ, ಎಂದು ಕೊಳ್ಳೋಣ. ವ್ಯತಿಗತ ಮನಸ್ತಾಪಗಳಿಗೆ ಪೂರ್ಣ ವಿರಾಮ ಹೊಕೋಣ. ಭೂಲೋಕದಾಚೆಯ ಸ್ವರ್ಗದ ಬಾಗಿಲು ತೆರೆಯಲಿ ಬಿಡಲಿ, ನಮ್ಮೊಳಗೊಂದು ಅರಿವಿನ ಸ್ವರ್ಗದ ಬಾಗಿಲು ಇರುತ್ತದಲ್ಲ, ಅದರ ಬಾಗಿಲು ನಾವೇ ಖುದ್ದಾಗಿ ತೆರೆಯೋಣ. ಮಕರ ಜ್ಯೋತಿಯ ಹಂಗು ತೊರೆದು, ಮನದೊಳಗಿನ ಮನೆಯ ಬಾಗಿಲಲ್ಲಿ ಮಮತೆಯ ದೀಪ ಹಚ್ಚಿಡೋಣ. ಅದು ಬೆಳಗುವ ಪ್ರೀತಿಯ ಬೆಳಕಲ್ಲಿ ಕಾಣುವ ಜಗದಲ್ಲಿ ಸಣ್ಣತನಗಳಿಗೆ ಜಾಗವಿರದಿರಲಿ.
        ಮಕ್ಕಳೆಲ್ಲಾ ಊರಿಗೆ ಹೋದಾಗ, ಅಪ್ಪ ಅವ್ವಂದಿರು ಮಾಡಿ ಬಡಿಸುವ ಪ್ರೀತಿಯ ಊಟದಂತೆ, ಅಣ್ಣಂದಿರು ಪ್ರೀತಿಯಿಂದ ಮೊಟಕುವಂತೆ, ಮನಸ್ಸಿನಿಂದ ಮನಸ್ಸು ಬೆಸೆಯುವ, ಎದೆಯಿಂದ ಎದೆಗೆ ಹರಿಯುವ ಚೈತನ್ಯದ ಮಹಾಪೂರವಾಗಲಿ ಈ ಹಬ್ಬ ಸಂಕ್ರಾಂತಿ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಇಷ್ಟವಾದರೆ ತಿಳಿಸಿ, ಇಷ್ಟವಾಗದಿದ್ದರೂ ತಿಳಿಸಿ. ಅರವಿಂದರಾಜ್ ಬಿ ದೇಸಾಯಿ

Sunday, February 9, 2014

ಕುಮಾರ ಪರ್ವತ ಮತ್ತು ಬೆಟ್ಟದ ಮೇಲಿನ ಭಟ್ಟರ ಮನೆಗೆ ಒಂದು ಭೇಟಿ

ಪ್ರವಾಸ ಕಥನವೊಂದು ನನ್ನ ಬ್ಲಾಗಿನ ಕೈಚೀಲದೊಳಗೆ ಸೇರುತ್ತಿರುವುದು ಇದೇ ಮೊದಲು. ನನ್ನ ಆಪ್ತಸ್ನೇಹಿತ ಬಿಂದು ಒಂದೊಮ್ಮೆ ಕುಮಾರ ಪರ್ವತಕ್ಕೆ ಹೋಗೋಣವೆಂದು ಕಿಚ್ಚು ಹೊತ್ತಿಸಿದ್ದ. ಕೊಡಚಾದ್ರಿ ಬೆಟ್ಟ, ಕಳಾವರಿ ಬೆಟ್ಟ (ಸ್ಕಂದಗಿರಿ ಅಂತಲೂ ಕರೆಯುತ್ತಾರೆ), ನಂದಿ ಬೆಟ್ಟ (ಬೈಕಿನಲ್ಲಿ) ಟ್ರೆಕ್ಕಿಂಗ್ ಹೋಗಿ ಅನುಭವಿದ್ದ ನನಗೆ, ಇದೇನು ಮಹಾ ಹೋಗಿ ಬಂದರಾಯಿತೆಂದು ಕೊಂಡು ಹೋಗಿ ಬರಲು ಸಿದ್ದನಾದೆ. ಆದರೆ ಹೋಗಿ ಬಂದ ಮೇಲೆಯೇ ತಿಳಿಯಿತು, ಕುಮಾರ ಪರ್ವತವು ದಕ್ಷಿಣ ಭಾರತದಲ್ಲಿ ಅತ್ಯಂತ ಕ್ಲಿಷ್ಟಕರವಾದ, ಕಷ್ಟಕರವಾದ ಟ್ರೆಕ್ಕಿಂಗ್ ಜಾಡು ಇದೆಯೆಂದು. 
               ನಮ್ಮದು 14 ಜನರ ತಂಡ, ಇದರಲ್ಲಿ ಹದ್ದುಗಳಂತೆ ತುಂಬಾ ವೇಗವಾಗಿ ಚಾರಣ (ಟ್ರೆಕ್ಕಿಂಗ್ ಗೆ ಕನ್ನಡದಲ್ಲಿ ಹೀಗೆನ್ನುತ್ತಾರೆ) ಮಾಡುವವರಿದ್ದರು, ಪಾರಿವಾಳಗಳಂತೆ ವೇಗವಾಗಿ ಹೋಗುವವರಿದ್ದರು, ನಿಧಾನವಾಗಿ ನಡೆದರೂ ಗುರಿ ಮುಟ್ಟಲೇಬೇಕೆಂಬ ಛಲಗಾರರಿದ್ದರು, ಆಮೆಗತಿಯಲ್ಲಿ ನಡೆದು ನಮಗೂ ಗುರಿಗೂ ಸಂಬಂಧವಿಲ್ಲದಂತಿದ್ದವರು ಕೂಡ ಕೆಲವರು.  ಅಂತು ಎಲ್ಲರೂ ಸೇರಿ ಲೆಕ್ಕಾಚಾರವೆಲ್ಲ ಬಿಟ್ಟು ಹೊಸ ವಿಚಾರ ಅರಸುತ್ತ, ಹೊಸ ಅನುಭವಕ್ಕೊಸ್ಕರ, TT ಎಂಬ ಹುಚ್ಚು ಕುದುರೆಯನ್ನೇರಿ ಹೊರೆಟೆವು ಕುಕ್ಕೆ ಸುಬ್ರಮಣ್ಯನ ಸನ್ನಿಧಾನಕ್ಕೆ. 
         ಬೆಳಿಗ್ಗೆ 6 ಘಂಟೆಗೆ ಕುಕ್ಕೆ ಸುಬ್ರಮಣ್ಯನಿಂದ ಬೆಟ್ಟ ಹತ್ತಲು ಶಕ್ತಿಯ ಬೇಡಿಕೆಯನ್ನಿಟ್ಟು ಪುಷ್ಪಗಿರಿ(KP ಗೆ ಇರುವ ಇನ್ನೊಂದು ಹೆಸರು) ಯನ್ನು ಹತ್ತಲು ಸನ್ನದ್ಧರಾದೆವು ಅಲೆಮಾರಿಗಳಂತೆ, ಎರಡು ದಿನ ನಮಗೂ ಹೊರ ಜಗತ್ತಿಗೂ ಸಂಬಂದ ಇಲ್ಲದಂತೆ. 13 km ಕ್ರಮಿಸಬೇಕಾದದ್ದು ನಮ್ಮ ಮುಂದಿದ್ದ ಚಾಲೆಂಜ್(ಒಟ್ಟಾರೆ 26km). 6km ನಡೆದರೆ ಬರುವುದೇ ಭಟ್ಟರ ಮನೆ, ಅಲ್ಲಿಂದ 4km ಕಲ್ಲು ಮಂಟಪ, ಮುಂದೆ 3km ನಡೆದರೆ ಬರುವುದೇ ಕೆಪಿ ಯ ತುತ್ತ ತುದಿ. 
            ನಮ್ಮ ಚಾರಣ ಶುರು. ಕೆಳತುದಿಯಿಂದ ಮಂದ ಬೆಳಕಿನಲ್ಲಿ ತುಂಬಾ ಹುಮ್ಮಸ್ಸಿನಿಂದ   ದಟ್ಟವಾದ ಅರಣ್ಯ ಪ್ರದೇಶದಲ್ಲಿ ದಾರಿಗಳನ್ನು ತಡಕಾಡುತ್ತಾ, ನಡೆದಿದ್ದೇ ಹಾದಿ ಎಂಬಂತೆ ನಿಸರ್ಗದ ಮಗುವಾಗುತ್ತಾ 1km ದಾರಿ ಸವೆಯುವುದಕ್ಕೆ ತೆಗೆದುಕೊಂಡಿದ್ದು 1 ಘಂಟೆ. ಕೊಂಚ ಚಳಿಯಾಗುತ್ತಿದ್ದ ಕಾರಣ ಸೂರ್ಯನ ಆಗಮನವನ್ನು ನಿರೀಕ್ಷಿಸುತ್ತಿದ್ದ ನಮಗೆ  8ರ ಹೊತ್ತಿಗೆ ಬಂದ. ಸೂರ್ಯನ ಕಿರಣಗಳು ದಟ್ಟವಾದ ಅರಣ್ಯದ ಮರಗಳ ಎಲೆಗಳಿಂದ ಯಾರನ್ನೋ ತಪ್ಪಿಸಿಕೊಂಡು ಬಂದು ನಮ್ಮನ್ನು  ಚುಂಬಿಸುತ್ತಿದ್ದವು.  ತುಂಬು ಬಿಸಿಲು ಅನುಭವಿಸಬೇಕೆನ್ನುವವರ ಕರೆಗೆ ತಥಾಸ್ತು  ಎಂದಿದ್ದ ದೇವರು, ಅಮೇಲೆ ನಾವು ಅನುಭವಿಸುತ್ತಿದ್ದುದೆಲ್ಲ ತುಂಬು ಬಿಸಿಲು, ಒಣ ಪರಿಸರ, ಕಡಿದಾದ ದುರ್ಗಮವಾದ ಹಾದಿ, 45 ರಿಂದ 60 ಡಿಗ್ರಿ ಏರುದಾರಿಗಳು, "ಏನೇ ಆಗಲಿ ಮುಂದೆ ಸಾಗು ನೀ" ಎಂಬ ಸುದೀಪ್ ಚಿತ್ರದ ಹಾಡು ನಮ್ಮಲ್ಲಿರುವ ಹುಮ್ಮಸ್ಸನ್ನು ಜಾಗೃತಗೊಳಿಸಿ ಮುನ್ನಡೆಸುತ್ತಲೇ ಇತ್ತು. 
           ಅಲ್ಲಿ ಇಲ್ಲಿ ವಿಶ್ರಾಂತಿ ಪಡೆದು ಸವೆಸಿದ್ದಾಯಿತು ಅರ್ಧ ದಾರಿ. ಭಟ್ಟರ ಮನೆಯ ನೆನಪಾಗಿದ್ದು ಆಗಲೇ. ಇನ್ನೂ ಎಷ್ಟು ದೂರ ಇದೆ ಭಟ್ಟರ ಮನೆ? ಎಂಬ ನಮ್ಮ ಪ್ರಶ್ನೆಗೆ, ಇತರೆ ಟ್ರೆಕ್ಕರ್ ಗಳಿಂದ ಇನ್ನು ಸ್ವಲ್ಪ ದೂರಾನೇ ಎಂಬ ಉತ್ತರ ಮುದ ನೀಡುತ್ತಿತ್ತು. ನಡೆದು ನಡೆದೂ ಭಟ್ಟರ ಮನೆ ಬಾರದಿದ್ದಾಗ ಉತ್ತರ ನೀಡಿದ ಚಾರಣಿಗರನ್ನು ಬೈದು ಪಡುವ ವಿಕೃತ ಸಂತೋಷಕ್ಕೆ, ದಣಿವಾರಿಸುವ ಶಕ್ತಿಯೂ ಇದೆ ಅಂತ ನನಗೆ ಆವತ್ತೇ ಗೊತ್ತಾಗಿದ್ದು. ಅಂತೂ ಇಂತೂ ಬಂತು ಭಟ್ಟರ ಮನೆ. ಕುಮಾರಪರ್ವತಕ್ಕೆ ಪುಷ್ಪಗಿರಿಯೆಂಬ ಇನ್ನೊಂದು ಹೆಸರಿದೆಯೆಂದು ಕೆಲವರಿಗೆ ಗೊತ್ತಿಲ್ಲದಿದ್ದರೂ ಭಟ್ಟರ ಮನೆಯ ಬಗ್ಗೆ ಮಾತ್ರ ಗೊತ್ತಿರುತ್ತದೆ. 
           ಯಾರೀ ಭಟ್ಟರು? KP ಗೆ  ಹೋಗುವ ಚಾರಣಿಗರಿಗೆ ಆಪದ್ಬಾಂಧವರು ಮತ್ತು ಅನ್ನದಾತರೂ ಹೌದು. ಇವರೊಬ್ಬ ಪರಿಸರವಾದಿ. ಬೆಟ್ಟದ ಮೇಲೆ ಅಡಿಕೆ ತೋಟ, ಹೈನುಗಾರಿಕೆ ನಡೆಸುತ್ತಿರುವ ತುಂಬು ಹೃದಯದ ಜೀವ. ನನಗೆ ಇವರನ್ನು ನೋಡಿದರೆ, ಶಿವರಾಮ ಕಾರಂತರ 'ಬೆಟ್ಟದ ಜೀವ' ಕಾದಂಬರಿಯ ನಾಯಕರಾದ ಕಾಟುಮೂಲೆಯ ನಿರ್ಮಾತೃ ಗೋಪಾಲಭಟ್ಟರು ನೆನಪಾಗುತ್ತಾರೆ. ವಿಶ್ರಾಂತ ಮತ್ತು ಆದರ್ಶ ಜೀವನ. ಹಸಿದು ಬಂದವರಿಗೆ, ಇವರು ಮಾಡುವ ಮಾಮೂಲಿ ಅನ್ನ ಸಾಂಬಾರ್ ಮೃಷ್ಟಾನ್ನದಂತೆಯೂ ಮಜ್ಜಿಗೆ ಅಮೃತದಂತೆಯೂ ಅನಿಸಿದರೆ ಅತಿಶಯೋಕ್ತಿ ಅಲ್ಲ.
             ಅಲ್ಲಿಂದ ಶೇಷ ಪರ್ವತ. ಕುಮಾರ ಪರ್ವತಕ್ಕೆ ಇಬ್ಬರು ತಮ್ಮಂದಿರಿದ್ದಾರೆ, ಅವರೇ ಶೇಷ ಪರ್ವತ ಮತ್ತು ಸಿದ್ದ ಪರ್ವತ. ಎರಡರಲ್ಲಿ ಶೇಷ ಪರ್ವತ ಮಾತ್ರ ತುಂಬಾ ಅತ್ಯಾಕರ್ಷಕವಾಗಿ ಕಂಗೊಳಿಸುತ್ತಿರುತ್ತಾನೆ. ಮನಸ್ಸಿಗೆ ಮುದ ನೀಡುವ ರುದ್ರ ರಮಣೀಯ ಸ್ಥಳ. ನೀವು ಅಚಲ ನಿರ್ದಾರಗಳೇನಾದರೂ ತೆಗೆದು ಕೊಳ್ಳಬೇಕಿದ್ದರೆ, ಶೇಷ ಪರ್ವತವನ್ನು ಸ್ಪೂರ್ತಿಯಾಗಿ ಇಟ್ಟುಕೊಳ್ಳಿ, ಅಷ್ಟೊಂದು ನಿಶ್ಚಲ ಹೆಬ್ಬಂಡೆ.  
         ಅಲ್ಲಿಂದ, ಒಣ ಹುಲ್ಲಿನ ನಡುವೆ, ಭಾರವಾದ ಹೆಜ್ಜೆಗಳನ್ನಿಡುತ್ತಾ ಏರುಪೇರಾದ ದಾರಿಗಳನ್ನು ದಾಟುತ್ತಾ ಬಂದು ತಲುಪಿದ್ದೇ ಕಲ್ಲು ಮಂಟಪಕ್ಕೆ. ಭಟ್ಟರ ಮನೆ ಬಿಟ್ಟರೆ ನಿಮಗೆ ನೀರು ಸಿಗುವುದೇ ಈ ಸ್ಥಳದಲ್ಲಿ. ಮೊದಲೆಲ್ಲಾ ಇಲ್ಲಿ ಕಾಡುಪ್ರಾಣಿಗಳು ಅಡ್ಡಾಡುತ್ತಿದ್ದವಂತೆ, ಪಾಪಿ ಮನುಷ್ಯ ಕಾಲಿಟ್ಟ ಮೇಲೆ ಪ್ರಾಣಿ, ಪಕ್ಷಿಗಳಾದರೂ ಹೇಗೆ ಉಳಿದಾವು..? ಕಲ್ಲು ಮಂಟಪಕ್ಕೆ ನಮ್ಮೆಲ್ಲಾ ಶಕ್ತಿ ಕುಂದಿ ಹೋಗಿತ್ತು. ಆದರೆ ನಮ್ಮ ತಂಡದಲ್ಲಿದ್ದ ಹದ್ದುಗಳು, ಪಾರಿವಾಳಗಳು ಹಾರಿಹೋಗಿದ್ದವು KP ಯ ತುತ್ತ ತುದಿಯ ಕಡೆಗೆ. ಈ ದಾರಿ ಸಾಮಾನ್ಯವಾದುದೇನಲ್ಲ. 60 ರಿಂದ 70 ಡಿಗ್ರಿ ವಾಲಿರೋ ಏರು ಕಲ್ಲು ಮಿಶ್ರಿತ ಹಾದಿಗಳು, ದುರ್ಗಮ, ಕಡಿದಾದ ದಾರಿ. ಒಂದೊಂದು ಬಂಡೆಗಳಂತೂ 80 ಡಿಗ್ರಿ ಏರಿರುತ್ತವೆ. ಇದನ್ನೆಲ್ಲಾ ನೋಡಿ, ಆವಾಗವಾಗ ಅನ್ನಿಸುತ್ತಿತ್ತು 'ಇವೆಲ್ಲಾ ಬೇಕಿತ್ತಾ?'ಅಂತ. ಆದರೂ ದಕ್ಷಿಣ ಭಾರತದ ಅಂತ್ಯಂತ ಕ್ಲಿಷ್ಟಕರವಾದ ಚಾರಣವನ್ನು ಮಾಡಲೇಬೇಕೆಂಬ, ತುತ್ತತುದಿಯನ್ನು ಮುಟ್ಟಲೇಬೇಕೆಂಬ ಭಂಡತನ ನಮ್ಮ ಬೆನ್ನು ತಟ್ಟುತ್ತಲೇ ಇತ್ತು.
          ನಮ್ಮ ಶಕ್ತಿ ತಲೆಯಿಂದ ಪಾದದವರೆಗೂ ಝೀರೋ ಆಗಿತ್ತು . ಇನ್ನೇನು ಮುಂದೆ ಹೋಗಕ್ಕಾಗಲ್ಲಾ ಎಂದುಕೊಳ್ಳುತ್ತಿರುವಾಗ ಹೊಳೆಯಿತು ಒಂದು ಉಪಾಯ. ಮುಂದೆ ಬಾಗಿ ತಲೆ ಬಗ್ಗಿಸಿ ಕೈಯಲ್ಲಿ ಒಂದು ಬೆತ್ತ ಹಿಡಿದು ಬೆಟ್ಟ ಹತ್ತಿದರೆ, ಎಷ್ಟು ದೂರ ಬೇಕಾದರೂ ಕ್ರಮಿಸಬಹುದೆಂದು. ನಮ್ಮೆಲ್ಲ ಸೊಕ್ಕಡಗಿದ ಮೇಲೆ, ಸಾಲು ಸಾಲು ಬೆಟ್ಟಗಳನ್ನು ಮೆಟ್ಟಿ ನಿಂತ ಮೇಲೆ ಬಂತು kpಯ ತುತ್ತತುದಿ. ನಿಮಗಿದು ಜಾಸ್ತಿ ಅನಿಸಿದರೂ, ನಮಗಾಗಿದ್ದು ಮಾತ್ರ ಜಗತ್ತು ಗೆದ್ದ ಅನುಭವ. ಎಷ್ಟೇ ಕಷ್ಟ ಇದ್ದರೂ, ದೃತಿಗೆಡದೇ ಕುಮಾರ ಪರ್ವತ ಹತ್ತಿದ ಕುಮಾರರು ನಾವು. ಆಗಿರುವ ಮಾನಸಿಕ ಸಂತೋಷಕ್ಕೆ, ದೈಹಿಕ ನೋವಿಗೆ ಮಲಗುವುದೇ ಮದ್ದು ಎಂದು ತಿಳಿದು, ತಂದಿದ್ದ ಚಪಾತಿ ತಿಂದು, ಫೈರ್ ಕ್ಯಾಂಪ್ ಹಾಕದೇ, ಬೆಟ್ಟದ ಮೇಲೊಂದು ಮನೆಯ ಮಾಡಿ ಎಂಬ ಕವಿವಾಣಿಯಂತೆ, ನಾವೂ ತಾತ್ಕಾಲಿಕ ಮನೆಯೊಂದ ನಿರ್ಮಿಸಿ, ಮಲಗುವ ಚೀಲ (sleeping bag)ದಲ್ಲಿ ಹೊಕ್ಕಿದ್ದೇ ಸುಮಧುರ ಕ್ಷಣ, ಶುಭರಾತ್ರಿ.
ಬೆಳಗಾಯಿತು, ಸೂರ್ಯೋದಯ ನೋಡುವ ಸಮಯ. ಬೆಟ್ಟದ ಮೇಲಿನಿಂದ, ವಿಶೇಷವಾಗಿ 5712 ಅಡಿಗಳಷ್ಟು ಎತ್ತರದಿಂದ ನೋಡುವುದೇ ಒಂದು ಅಂದ ಒಂದು ಚಂದ. ಮೋಡದ ಮರೆಯಲ್ಲಿ ನಿಂತು ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದ ಸೂರ್ಯ, ಬೆಳಿಗ್ಗೆ 7ರ ಸುಮಾರಿಗೆ ದರ್ಶನ ಭಾಗ್ಯ ಕೊಟ್ಟ. ಕೆಳಗಡೆ ಬಿದ್ದರೆ ದೇಹ ದೊರಕದಂಥ ದಟ್ಟಾರಣ್ಯ, ಎದುರಿಗೆ ಸೂರ್ಯ, ಸೂಯನ ಕೆಳಗೆ ಸಮುದ್ರದಂತೆ ಕೊನೆಯೇ ಇರದ ಬೆಟ್ಟಗಳ ಸಾಲು. ಪಕೃತಿ ಎಂಬ ಹುಡುಗಿಗೆ ಕುಂಕುಮ ಬೊಟ್ಟು ಇಟ್ಟಂತಾಗಿಬಿಟ್ಟಿತ್ತು ಈ ಸೂರ್ಯನ ಆಗಮನ. ನಮ್ಮ ಸಮೀಪದಲ್ಲಿ ತೇಲುತ್ತಿರುವ ಮೋಡಗಳು, ನಮ್ಮನ್ನೇ ನಾವು ಕಳೆದುಕೊಂಡ ಅನುಭವ. ಸೂರ್ಯೋದಯ ನೋಡಲಿಕ್ಕೆ ಅಲ್ಲಿಗೆ ಹೋಗಬೇಕಾ? ಎಂಬ ನನ್ನ ಸ್ನೇಹಿತ ಕೇಳಿದ ಪ್ರಶ್ನೆಗೆ ತಾತ್ವಿಕ ಮೆರುಗು ನೀಡಿತ್ತು ಈ ನಿಸರ್ಗ. ಕವಿ ಹೃದಯ ಜಾಗೃತವಾಗುವುದೇ ಎಂಥ ಸ್ಥಳದಲ್ಲಿ. ಅದರ ಸೊಬಗನ್ನು ಎಷ್ಟು ಬಾಚಿ ತಬ್ಬಿ ಹಿಡಿದರೂ, ತೃಪ್ತಿ ಸಿಗದು. ಪ್ರಕೃತಿಯ ಪಂಚಭೂತಗಳೆದುರು, ಮನುಷ್ಯ ಎಷ್ಟೇ ದೊಡ್ಡವನಾದರೂ, ಚಿಕ್ಕವನು. 
            ಜನಶ್ರಾವಂತಿಯಲ್ಲಿ ಮತ್ತೆ ಬೇರೆಯುವುದಕ್ಕೆ, ನಿಸರ್ಗದ ಮಡಿಲಿನಿಂದ ಎದ್ದು, ಟೆಂಟ್ಗಳನ್ನು ಕೊಂಕುಳಲ್ಲಿ ಸಿಕ್ಕಿಸಿಕೊಂಡು ಬರಬರನೇ ತುಂಬಾ ಜಾಗೃತವಾಗಿ ನಡೆಯತೊಡಗಿದೆವು. ಹತ್ತಿದ್ದಕ್ಕಿಂತ ಕಡಿಮೆ ಸಮಯ ತೆಗೆದುಕೊಂಡು ಕೆಳ ತುದಿ ಸೇರಿಕೊಂಡೆವು. ಸೋಮವಾರಪೇಟೆ ಕಡೆಯಿಂದಲೂ ಇಳಿಯಬಹುದು. 
             ಈ ಟ್ರೆಕ್ಕಿಂಗ್, ನಮ್ಮ ಶಕ್ತಿಯೇನು? ಸಾಮರ್ಥ್ಯವೇನು? ನಿಸರ್ಗದ ಮುಂದೆ ನಾವೆಷ್ಟು ಚಿಕ್ಕವರು? ನಮ್ಮ ಅಹಂ? ಈ ಎಲ್ಲಾ ವಿಷಯಗಳ ಮೇಲೆ ಬೆಳಕು ಚೆಲ್ಲಿತ್ತು, ಮತ್ತೂ ಆ ಎಲ್ಲಾ ಪ್ರಶ್ನೆಗಳಿಗೆ ಮಾರ್ಮಿಕ ಉತ್ತರ ದೊರೆತಿದ್ದೂ ಸುಳ್ಳಲ್ಲ. ನಿಮ್ಮ ನಿಮ್ಮ ದೇಹ ದಂಡಿಸುವುದಕ್ಕೂ ಬೇಕಾದರೂ kp ಹತ್ತಿ ಇಳಿಯಬಹುದು. ಹಳೆಯ ಗಾದೆ ಮಾತಿದೆ "ರೊಕ್ಕ ಇದ್ದರೆ ಗೋಕರ್ಣಕ್ಕೆ ಹೋಗು, ಸೊಕ್ಕಿದ್ದರೆ ಯಾಣಕ್ಕೆ ಹೋಗು" ಅಂತ. ಸೊಕ್ಕಿದ್ದರೆ ಯಾಣಕ್ಕಲ್ಲ (ಬಸ್ ವ್ಯವಸ್ಥೆ ನಿರ್ಮಾಣ ಆಗಿರುವುದರಿಂದ, ಯಾಣದ ಬುಡದವರೆಗೂ ಹೋಗಿ ಬರಬಹುದು) ಕುಮಾರ ಪರ್ವತ ಹತ್ತಿ ಬನ್ನಿ.
         ಚಾರಣಿಗರಿಗೆ ಸ್ವರ್ಗ ಸುಖ ನಿದುವಂಥ ಸ್ಥಳ.  "hell to be there but heaven to see" ಆ ಮಾತು ಸುಳ್ಳಲ್ಲ ಬಿಡ್ರಿ.  ನಮ್ಮಂಥ ಅಮಾವಾಸ್ಯೆ ಹುಣ್ಣಿಮೆಗೆ ಚಾರಣ ಮಾಡುವವರಿಗೆ ಕಷ್ಟಸಾದ್ಯ. ನಾನು ಇನ್ನೊಮ್ಮೆ ಅಲ್ಲಿಗೆ ಹೋಗುವುದು ಮಾತ್ರ ತಿರುಕನ ಕನಸು ಎಂದು ಹೇಳುತ್ತಾ, ಇಷ್ಟವಾದರೆ ಶಭಾಷ್ ಅನ್ನಿ. ಇಷ್ಟ ಆಗ್ಲಿಲ್ಲ ಅಂದ್ರೆ ಕೋಳಿ ಮೊಟ್ಟೆ ತಗೊಂಡು ಹೊಡಿರಿ ಪರವಾಗಿಲ್ಲ, ನಿಮ್ಮ ಪ್ರತಿಕ್ರಿಯೆ ಮಾತ್ರ ಯಾವತ್ತೂ ಇರಲಿ. 

ತಂಡ: ಬಿಂದು, ಚೇತನ್, ನಿತಿನ್, ಅಬ್ದುಲ್, ಸಚಿನ್, ಶುಕ್ಲಾ, ನಿಧಿನ್, ವಿಶ್ವ, ಬಸವ, ಹರೀಶ, ಮಿಲ್ಲಾ, ಕಾರ್ತಿಕ್, ರಾಕೇಶ್, ನಾನು(ಅರವಿಂದ). 

ಮಾಹಿತಿ:
1. ಭಟ್ಟರ ಮನೆ ಊಟ - 90 ರೂ 
    ಮೊಬೈಲ್ ನಂಬರ್ : 9448647947 (ಹೋಗುವ ಮುನ್ನಾ ದಿನ ಅವರಿಗೆ ತಿಳಿಸಿ)
2. Forest Dept entry fees: 200/- per head..
3. ನೀರು ಸಿಗುವ ಸ್ಥಳ : 
                                ಒಂದು ಫಾಲ್ಸ್ ಹತ್ತಿರ (after 3km)
                                ಭಟ್ಟರ ಮನೆ 
                                ಕಲ್ಲು ಮಂಟಪ 
                                after forest end
4. ಮಾರ್ಗ: ಬೆಂಗಳೂರು > ಚನ್ನರಾಯಪಟ್ಟಣ > ಸಕಲೇಶಪುರ > ಶಿರಾಡಿ ಘಾಟ್ > ಕುಕ್ಕೆ 
5. ದೂರ: 
    ಬೆಂಗಳೂರು > ಕುಕ್ಕೆ : 282km
    ಕುಕ್ಕೆ to kp ಕೆಳತುದಿ : 1.2km
    kp ಕೆಳತುದಿ ಇಂದ ತುತ್ತತುದಿ: 13km 


Tuesday, October 22, 2013

ನೇತಾಜಿ: ಚಲೋ ದಿಲ್ಲಿ ಎಂದು ಹೋದರೆಲ್ಲಿ? : ಒಂದು ವಿಮರ್ಶೆ, ಒಂದು ಚಿಂತನೆ.

'Give me your blood, I promise you the freedom'. ಎಂದು ಹೇಳಲು ಯಾವುದೇ ಮನುಷ್ಯನಿಗೆ ಎದೆಯಲ್ಲಿ ಅದೆಷ್ಟು ಕ್ರಾಂತಿಯ ಕಿಚ್ಚು ಹೊತ್ತಿರಬೇಕು? ಅದೆಂಥ ಗುಂಡಿಗೆ ಇರಬೇಕು?. ಹೌದು ೧೯೪೫ ಆ, ೧೮ ರಂದು ಕಣ್ಮರೆಯಾದಂಥ, ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್. ಅವರ ಕಣ್ಮರೆಯ ಚಿತ್ರಣವನ್ನು ತಮ್ಮ ಕಣ್ಮುಂದೆ ತೆರೆದಿಡುವ ಕೆಲಸವನ್ನು ಮಾಡಿದವರು, ಜಗತ್ತಿನ ಸೋಗಿನ ಬಟ್ಟೆಯನ್ನು ಕಳಚಿ ಬೆತ್ತಲಾಗಿ ತೋರಿಸುವ, 'ಬೆತ್ತಲೆ ಜಗತ್ತು' ಪ್ರಖ್ಯಾತಿಯ ಪ್ರತಾಪ್ ಸಿಂಹ.
'The great escape', ಕನ್ನಡ ಅವತರಣಿಕೆಯನ್ನು, ೬ನೇ ಕ್ಲಾಸಿನಲ್ಲಿದ್ದಾಗ, ಬೆರಗುಗಣ್ಣಿನಿಂದ ಓದಿದ್ದ ಬಾಲಕ ನಾನು. ಆವತ್ತಿನಿಂದ ಇಲ್ಲಿಯವರೆಗೆ, ನೇತಾಜಿ ಎಲ್ಲಿ ಹೋದರು? ಎಂಬ ಪ್ರಶ್ನೆ ಯಾವತ್ತಿಗೂ ಕಾಡುತ್ತಿರುತ್ತದೆ. ಆ ಪ್ರಶ್ನೆಗೆ ಉತ್ತರ ಅರಸಿ, ಪುಸ್ತಕವನ್ನು ತೆರೆದು, ಓದಿ, ಮುಗಿಸಿದರೂ ಉತ್ತರ ಸಿಕ್ಕಿಲ್ಲ. ನೇತಾಜಿ ಜೀವನದ ಸುತ್ತ ಒಂದು ಸಣ್ಣ 'ಪಿಕ್ ನಿಕ್' ಹೋಗಿ ಬರಲಾಗಿದೆ. ಹೃದಯ ಭಾಗದ ಕಥೆ ಮಾತ್ರ ಕುತೂಹಲಕಾರಿಯಾದ 'ನೇತಾಜಿ ಕಾಣೆಯಾದುದರ ಬಗ್ಗೆಯೇ'!!
ಭಾರತಾಂಬೆಯನ್ನು ಬ್ರಿಟಿಷರ ಬಂಧನದಿಂದ ಬಿಡುಗಡೆ ಮಾಡಬೇಕೆಂಬ ಮಹದಾಸೆ ಹೊತ್ತ ಮಹಾನ್ ನಾಯಕರಲ್ಲಿ ಇವರೂ ಒಬ್ಬರು. ೧೯೩೫ರಲ್ಲಿ ಕಾಂಗ್ರೆಸ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಚಲೋ ದಿಲ್ಲಿ ಎಂದು ಕೆರೆಕೊಟ್ಟರು. ಅವರ ಕಿಚ್ಚು ಹೊತ್ತಿಸುವ ಭಾಷಣವನ್ನು ಕೇಳಿ ಬ್ರಿಟಿಷರು ಬೆಪ್ಪಾಗಿ, ಅವರನ್ನು ಗೃಹಬಂಧನದಲ್ಲಿ ಇಡುತ್ತಾರೆ. ಅವರು ಗೃಹಬಂಧನದಿಂದ ಕಾಶ್ಮೀರ್, ಕಾಬುಲ್ ಮೂಲಕ ಬರ್ಲಿನ್ ತಲುಪಿದ್ದು, ನಿಜಕ್ಕೂ ರೋಮಾಂಚನಕಾರಿ, ಇತಿಹಾಸ ಎಂದೂ ಮರೆಯದ ಘಟನೆ. ನೇತಾಜಿ ದೇಶವಲ್ಲದ ದೇಶಕ್ಕೆ ಹೋಗಿ, ಹೊರದೇಶದಲ್ಲಿರುವ ಭಾರತೀಯರನ್ನು ಒಕ್ಕೂಡಿಸಿ, ೩೦,೦೦೦ ಜನರ 'ಇಂಡಿಯನ್ ನ್ಯಾಷನಲ್ ಆರ್ಮಿ (INA)' ಸ್ಥಾಪಿಸಿದ್ದು ಸಾಮಾನ್ಯ ವಿಷಯವೇನಲ್ಲ.
ನಂತರ ಮುಸ್ಸೊಲಿನಿ, ಸರ್ವಾಧಿಕಾರಿ ಹಿಟ್ಲರ್, ಜಪಾನ್ ಮಿಲಿಟರಿಯನ್ನು ಸಂಧಿಸಿ, ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ಒಪ್ಪಂದ ಮಾಡಿಕೊಂಡಿದ್ದು, ಸುಭಾಷರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯೇ ಸರಿ. ರಷ್ಯಾ ಆವತ್ತಿನ ಮಟ್ಟಿಗೆ ಜಗತ್ತಿನ ಎರಡನೇ ಶಕ್ತಿ ಕೇಂದ್ರ, ಅಂಥ ಶಕ್ತಿಯ ಜೊತೆಗೆ ಕೈ ಜೋಡಿಸ ಹೋದ ಭಾರತದ ಬೆಂಕಿ ಚೆಂಡು ಚಂದ್ರ ಬೋಸ್.
ಈ ಕಾದಂಬರಿಯು ನೇತಾಜಿ ಕಥಾಕಥಿತ ವಿಮಾನ ಅಪಘಾತದಲ್ಲಿ ಸತ್ತಿಲ್ಲವೆಂಬುದರ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದೆ. ಅವರು ಕಾಣೆಯಾದುದರ ಬಗ್ಗೆ ಹಲವಾರು ರೋಚಕ, ಕುತೂಹಲಕಾರಿ ಕಥೆಗಳನ್ನು, ಮಜಲುಗಳನ್ನಾಗಿ ಹೆಣೆಯಲಾಗಿದೆ. ೧೯೪೫ ಆ ೧೮ ರಂದು ನೇತಾಜಿ ಸಾವನ್ನಪ್ಪಿಲ್ಲವಾದರೆ ಹೋದರಾದರೂ ಎಲ್ಲಿಗೆ? ಎಂಬ ಪ್ರಶ್ನೆಯನ್ನು ದಟ್ಟವಾಗಿಸುವಲ್ಲಿ, ಲೇಖಕ ಯಶಸ್ವಿ.
ನಾನು ಯಾವುದೇ ರಾಜಕೀಯ ಪಕ್ಷದ ಪರ/ವಿರೋಧಿ ಅಲ್ಲವಾದರೂ, ಕಾಂಗ್ರೆಸ್ಸನ್ನು ಪ್ರತಿ ಹಂತದಲ್ಲೂ ದೂಷಿಸಿರುವುದು, ಈ ಕಾದಂಬರಿಯ ಪಾರದರ್ಶಕತೆಯನ್ನು ಪ್ರಶ್ನಿಸಿಸಲು ಪ್ರೇರಣೆ ನೀಡುತ್ತದೆ.
ಒಂದು ಮೂಲದ ಪ್ರಕಾರ, ಅವರು ರಹಸ್ಯವಾಗಿ ರಷ್ಯ ತೆರೆಳಿದ್ದಾರೆ  ಎಂತಾದರೆ, ಇನ್ನೂ ಕೆಲವು ಮೂಲಗಳ ಪ್ರಕಾರ, ಅವರು ರಷ್ಯದಲ್ಲಿ ಯುದ್ಧ ಖೈದಿಯಾಗಿದ್ದಾರೆ ಎಂಬುದು, ಬಲೂಚಿಸ್ಥಾನದಲ್ಲೆಲ್ಲೋ  ಕೊಲೆಯಾದರು, ೧೯೬೭ರ ತನಕ ವಿಜಯ್ ಭಗವಾನ್ ಎಂಬ ಹೆಸರಿನಲ್ಲಿ ಜೀವಿಸಿರುವುದು, ೧೯೭೫ರ ತನಕ ಗಮ್ ನಾಮೀ ಬಾಬಾ ಎಂಬ ಹೆಸರಿನಲ್ಲಿ ಜೀವಿಸಿರುವುದು. ಕೇವಲ ಊಹಾಪೋಹವಷ್ಟೇ, ಯಾವುದಕ್ಕೂ ಖಚಿತ ಮಾಹಿತಿಗಳಿಲ್ಲ, ಸಾಕ್ಷಿ ಪುರಾವೆಗಳಿಲ್ಲ.
ಹಾಗಾದರೆ ನೇತಾಜಿ ಕಣ್ಮರೆ ಅಷ್ಟೊಂದು ನಿಗೂಢವಾಗಿ ಉಳಿಯಲು ಕಾರಣವೇನು? ಭಾರತ ಸರಕಾರನಾ? ಭಾರತದ ಆಯೋಗಕ್ಕೆ ಸ್ಪಂದಿಸದ ಇತರೆ ರಾಷ್ಟ್ರಗಳಾ? ಸ್ವಾತಂತ್ರ್ಯ ಪೂರ್ವ ಒಳ ರಾಜಕೀಯವಾ? ಇದೆಲ್ಲದರ ಮೇಲೆ ಮುಖರ್ಜಿ ಆಯೋಗ, ಕೊಂಚ ಮಟ್ಟಿಗೆ ಬ್ಯಾಟರಿ ಹಾಕಿ ಸತ್ಯ ಬಗೆಯಲು ಪ್ರಯತ್ನವೇನೋ ಮಾಡಿತಾದರೂ, 'ನೇತಾಜಿ ಆ ವಿಮಾನ ಅಪಘಾತದಲ್ಲಿ ಸತ್ತಿಲ್ಲವೆಂದು' ಸಾಕ್ಷಿ ಸಮೇತ ಪ್ರತಿಪದಿಸಿತಾದರೂ, ನೇತಾಜಿ ಎಲ್ಲಿ ಹೋದರು ಎಂಬ ಪ್ರಶ್ನೆ ಕೋಟಿ ರೂಪಾಯಿ ಪ್ರಶ್ನೆಯಾಗಿಯೇ ಉಳಿಸಿಬಿಟ್ಟಿತು.


ನಮ್ಮೆಲ್ಲರ ಸ್ವಾತಂತ್ರ್ಯಕ್ಕಾಗಿ, ಶ್ರೆಯೋಭಿಲಾಷಕ್ಕಾಗಿ ಬಡಿದಾಡಿದ ನೇತಾಜಿಯ ಬಗ್ಗೆ ಯಾಕಿಷ್ಟು ತಾತ್ಸಾರ? ಅಂಥ ಮಹಾನ್ ನಾಯಕರು ಕಾಣೆಯಾದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದಿರುವಾಗ ನಮ್ಮಂಥ ಜನಸಾಮಾನ್ಯರು ಕಾಣೆಯಾದರೆ ಗತಿಯೇನು?

ಜಪಾನ್ ಹೇಳುವ ಪ್ರಕಾರ, ವಿಮಾನ ಅಪಘಾತದಲ್ಲಿ ನೇತಾಜಿ ತೀರಿ ಹೋದರು ಎಂಬ ಸುಳ್ಳನ್ನು, ಭಾರತದ ಜನಮಾನಸ ಯಾವತ್ತೂ ಒಪ್ಪುವುದಿಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾ, 'ನೇತಾಜಿಯ ಸಾಧನೆಗಳನ್ನು ನಾವು ಎಂದು ಮರೆಯುತ್ತೆವೆಯೋ ಅಂದೇ ಅವರು ಸತ್ತಂತೆ', ಎಂದು ಹೇಳುತ್ತಾ, ಮತ್ತೆ ಹುಟ್ಟಿ ಬನ್ನಿ ನೇತಾಜಿ, ಹಿಂದೂಸ್ತಾನವು ಎಂದೂ ಮರೆಯದ ಭಾರತರತ್ನವು ನೀವು, ನಿಮ್ಮನ್ನೆಂದೂ ಮರೆವೆವು ನಾವು. ನಿಮಗೂ ಏನಾದರೂ ಅನಿಸಿದರೆ, ಪ್ರತ್ಯುತ್ತರಕ್ಕಾಗಿ ಯಾವತ್ತೂ ಕಾಯುವ, ನಿಮ್ಮವ
ಅರವಿಂದರಾಜ ಬಿ ದೇಸಾಯಿ. 

Sunday, April 21, 2013

ಪಾಪಿಗಳ ಲೋಕದಲ್ಲಿ:- ಭೂಗತ ಲೋಕದ ತೆರೆ ಮರೆಯ ವಿಮರ್ಶೆ

ನಾನು ಯಾವಾಗಲೂ ಕಾದಂಬರಿಗಳನ್ನು  ಕೊಳ್ಳುವಾಗ, ಅದರ ಪೂರ್ವಾಪರಗಳನ್ನು ಅಭ್ಯಸಿಸಿ, ಕೊಂಡು ಓದಿ ಆನಂದ ಪಡುವ ಸಾಮಾನ್ಯ ಜೀವಿ. ನನಗೆ ಇತಿಹಾಸ, ದೇಶ, ಯುದ್ಧ, ರಾಜಕೀಯ, ಪ್ರೇಮ ಕಾದಂಬರಿಗಳ ಮೇಲೆ ಹೆಚ್ಚಿನ ಆಸಕ್ತಿ. ಆದರೂ ಈ ಬಾರಿ ನನಗೇ ಗೊತ್ತಿಲ್ಲದ ಹಾಗೆ ಈ ಹೊತ್ತಿಗೆಯನ್ನು ಕೊಂಡಾಗಿತ್ತು, ಇನ್ನು ಓದಿ ಮುಗಿಲಸಲೇಬೇಕಲ್ಲ, ಇಲ್ಲವೆಂದರೆ ಪೈಸಾ ವಸೂಲ್ ಹೇಗಾದಿತು?...  ಓದಲೋ? ಬೇಡವೋ? ಎನ್ನುವ ನನ್ನ ತಳಮಳಕ್ಕೂ ಕಾರಣವಿದೆ. ಇದು ಒಂದು ಭೂಗತ ಲೋಕದ ರಕ್ತಸಿಕ್ತ ದಿನಗಳ ಚುಟುಕು ಚಿತ್ರಣ  ಮೂಡಿಸುವಂಥಹ ರವೀ ಬೆಳೆಗೆರೆಯವರ ಕಾದಂಬರಿ.
ಬಿಸಿರಕ್ತದ ತರುಣ, ಎಲ್ಲಾದರೂ ಅನ್ಯವಾದಾಗ, ಅಪಚರವಾದಾಗ, ಪಾಪವಾದಾಗ, ಉರಿದು ಬೀಳುವ ಕ್ರುದ್ಧನಾಗುವ ನಾನು, ಅದೆಷ್ಟು ಸಂಯಮದಿಂದ ಈ ಪಾಪದ, ಕೊಲೆಗಡುಕರ, ತಲೆಹಿಡುಕರ, ಧರ್ಮಹೀನ ಮನುಷ್ಯರ ಕಥೆಗಳನ್ನು ಓದಿದೆನೆಂದು ಆಶ್ಚರ್ಯ ಮೂಡುತ್ತದೆ. ನನ್ನಂಥಹ ಯುವಕರ ಪಾಲಿಗೆ ಏನು ಸಂದೇಶ ಕೊಡುತ್ತದೆ ಈ ಪುಸ್ತಕ? ಏನು ಸಾಧಿಸಲೆಂದು? ಯಾರ ಸ್ಪೂರ್ತಿಗಾಗಿ, ಈ ಪುಸ್ತಕ ಹಿಡಿದೆನೆಂದು ಈ ಹೊತ್ತಿಗೂ ತಿಳಿದಿಲ್ಲ. ಬಹುಷಃ ರವಿ  ಬೆಳೆಗೆರೆಯಂಥ ಮಾಗಿದ ಕಾದಂಬರಿಕಾರರ ಇದೊಂದು ಪುಸ್ತಕ ಓದಿದರೆ ತಪ್ಪಲ್ಲ ಎಂದೆನಿಸಿ ಶುರುಮಾಡಿದೆ. 
                ಎಂಭತ್ತು ತೊಂಭತ್ತರ ದಶಕದ ರಕ್ತದೋಕುಳಿಯ, ಸಾಲು ಸಾಲು ಕೊಲೆಗಳ, ಸಾಲು ಸಾಲು ಮಾನಭಂಗಗಳ, ರೌಡಿ ಷೀಟರುಗಳ ಅಬ್ಬರ ಕೋಪತಾಪ, ಜನಸಾಮಾನ್ಯರ ಅಸಹಾಯಕತೆ, ರಾಜಕಾರಣಿಗಳ ಅವಕಾಶವಾದಿತನ, ಸತ್ಯ ಘಟನೆಗಳ ಸರಮಾಲೆಯೇ ಈ ಕಾದಂಬರಿ. ಕತ್ತಲಾದರೆ ಎಚ್ಚರಗೊಳ್ಳುವ ಈ ಭೂಗತ ಲೋಕದ ಪ್ರತೀ ರೌಡಿಗಳ ಮನಸ್ತಿತಿ, ಮನಸ್ತಾಪ, ಹೆದರಿಕೆ, ಭಂಡತನ, ಕ್ರೌರ್ಯ, ಹಿಂಸೆ, ಮೃಗತನ, ಚಾಣಾಕ್ಷತನ, ರೌಡಿಗಳೇ ಹೇಳಿದ ಕಥೆಗಳ ಸುತ್ತ ಗಿರಕಿ ಹೊಡಿಯುತ್ತದೆ 'ಪಾಪಿಗಳ ಲೋಕದಲ್ಲಿ'. 
                 ಕೊತ್ವಾಲ್ ರಾಮಚಂದ್ರನ ರೋಲ್ ಕಾಲ್, ಜಯರಾಜ್ ತಾನಿರುವ ಜೈಲಿನಿಂದಲೇ ಜಗತ್ತನ್ನು ಆಳಿದ ರೀತಿ, ಆಯಿಲ್ ಧಂದೆಯನ್ನು ಅಷ್ಟೊಂದು ಅಚ್ಚುಕಟ್ಟಾಗಿ ನಡೆಸಿದ ಆಯಿಲ್ ಕುಮಾರನ ರೀತಿ, ಮುಟ್ಟಿದರೆ ಮಾಸುವ ಮುತ್ತಪ್ಪ ರೈ ಎಂಬಾತನ ರೀತಿ, ಎಂಥ ಚಿಕ್ಕ ವಯಸ್ಸಿನ ಪುಡಿ ರೌಡಿಗಳಲ್ಲಿ ಭೂಗತ ಲೋಕದ ಭಯಾನಕ ಆಸೆಗಳ ಬಾಗಿಲು ತೆರೆದುಕೊಂಡರೆ ಆಶ್ಚರ್ಯವೇನಿಲ್ಲ. ಆದರೆ, ಅದರ ಹಿಂದಿದ್ದ (ತೆರೆಯ ಹಿಂದಿನ) ಮಸಲತ್ತುಗಳು, ಪೋಲೀಸರ ಬೆಂಡೆತ್ತು (ಏರೋಪ್ಲೇನ್ ), ಯಾವ ರೌಡಿಯ ಬಿಸಿರಕ್ತವನ್ನು ತಣ್ಣಗೆ ಮಾಡುವಷ್ಟು ಬಲಶಾಲಿಯಾಗಿದ್ದವು, ಈಗಲೂ ಇವೆ. 
                ಈ  ಕಾದಂಬರಿ ಓದುವಾಗ, ನಾನಿರುವ ಸ್ಥಳವಾದ ರಾಜಾಜಿನಗರದ  ಕೆಲವು ದೃಶ್ಯಗಳು ಬಂದರೆ, ಬಸವನಗುಡಿಯ ಬಗೆ ಕತೆಗಳಲ್ಲಿ ಪ್ರಸ್ಥಾಪವಾದರೆ, ನಾನಿರುವ ಪ್ರದೇಶದಲ್ಲಿ ಇಂಥ ಭಯನಕಗಳು ನಡೆದಿವೆಯಾ? ರಕ್ತದ ಹೊಳೆಹರೆದಿದೆಯಾ? ಎಂದು ಯೋಚನಾ ಲಹರಿಗೆ ಇಳಿದರೆ, ಒಂದು ಕ್ಷಣ ಮೈಯಲ್ಲಿ ನಡುಕ ಬಂದಿದ್ದಂತೂ ಸುಳ್ಳಲ್ಲ. ಈಗ ಆ ರಕ್ತದ ಹೊಳೆ ಬತ್ತಿ ಹೋಗಿ ಟಾರು ರೋಡು ಹಾಕಿರುವುದೂ ಅಷ್ಟೇ ಸತ್ಯ. ಆ ಕಾಲದಲ್ಲಿ ಅಷ್ಟೊಂದು ಭಾಯಾನಕಗಳು ಘಟಿಸುವುದಕ್ಕೆ ಕಾರಣವೇನಿರಬಹುದೆಂದು ನನ್ನಲ್ಲಿ ನಾನೇ ವಿಮರ್ಶೆ ಮಾಡಿಕೊಂಡಾಗ, ಬಿಟ್ಟಿ ದುಡ್ಡು ಬರುವಾಗ ಬಗ್ಗಿಸಿ ದುಡಿದು ಯಾಕೆ ತಿನ್ನಬೇಕು ಎಂಬ ಸೋಮಾರಿಗಳೇ ಆಗಿನ ರೌಡಿಗಳು! ಕುಡಿತ, ಜೂಜು, ಹೆಂಗಳೆಯರ ಸಹವಾಸ, ಒಟ್ಟಿನಲ್ಲಿ ಒಂದು ವರ್ಣರಂಜಿತ ಬದುಕು. ಇದನ್ನು ಸಾಗಿಸಲಿಕ್ಕೆ ಬೇಕಾಗಿದ್ದು ಒಂದು ಬ್ಲೇಡು, ಒಂದು ಮಚ್ಚು (ಲಾಂಗ್) ಒಂದಿಷ್ಟು ಭಂಡತನ, ಮುಗೀತು. ಭಂಡತನದ ಪರಮಾವಧಿ ಭೂಗತ ಲೋಕದೊಳಕ್ಕೆ 'ರೆಡ್ ಕಾರ್ಪೆಟ್'.. 
                  ಜಯರಾಜ್, ಕೊತ್ವಾಲ್ ರಾಮಚಂದ್ರ,  ಆಯಿಲ್ ಕುಮಾರ, ಮುತ್ತಪ್ಪ ರೈ, ಎಂ ಸಿ ಪ್ರಕಾಶ್, ಬಿಂಡ, ಸಿದ್ದ, ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಮುಚ್ಚ ರಾಜೇಂದ್ರ, ಡೆಡ್ಲಿ ಸೋಮ, ಚಂದು, ರಾಜಶೇಖರ್, ಬಸವ, ಕರಿಯ, ಸಕ್ರೆ, ಶ್ರೀರಾಂಪುರ್ ಕಿಟ್ಟಿ, ಕುಳ್ಳ ನಾರಾಯಣ, ಪಟ್ರೆ ನಾರಾಯಣ, ಕೋಟೆ ನಾಗರಾಜ, ಕೋಟೆ ರಾಜೇಂದ್ರ, ಕಾಲಾ ಪತ್ಥರ್, ಕೋಳಿ ಫ್ಹಯಾಜ್, ಬಲರಾಮ್, ಚೋಟು ಪ್ರಕಾಶ್, ಹೀಗೆ ಭೂಗತ ಲೋಕದ ಭಂಡರ ಹೆಸರುಗಳನ್ನು ಬೆರೆಯುತ್ತ ಕುಳಿತರೆ ಕಾಗದ ಸಾಕಾಗದು. ಇವರೆಲ್ಲರ ಸ್ಥೂಲ ಚಿತ್ರಣ ಕಣ್ಣು ಮುಂದೆ ಬಂದು ಹೋಗುವಂಥ ಶಕ್ತಿ ಬೆಳೆಗೆರೆಯವರ ಬರವಣಿಗೆಗಿದೆ.
                 ಹಾಯಾಗಿ ಕಾಲೇಜಿಗೆ ಹೋಗಿ ಗೆಳೆಯರ ಜೊತೆ ಗಂಟೆಗಟ್ಟಲೆ ಗೀಳು ಮಾತಾಡಿ, ಅಲ್ಲೊಂದಿಷ್ಟು ಇಲ್ಲೊಂದುಷ್ಟು ಶಿಕ್ಷಕರ, ಅಪ್ಪ, ಅವ್ವ, ಅಣ್ಣನ ಹತ್ತಿರ ಕೀಟಲೆ ಮಾಡಿಕೊಂಡು, ಚಟಕ್ಕಾಗಿ ಕೆಲವು ಕನ್ನಡ ಪುಸ್ತಕಗಳನ್ನು ಓದಿಕೊಂಡು, ಬೋರು ಹೊಡೆದಾಗ ಟ್ರಿಪ್ ಹಾಕುವ ಅದೃಷ್ಟ, ಬಹುಚಂದದ ಬದುಕನ್ನು ಬಹುಷಃ ಈ ಭೂಗತ ಲೋಕದ ಕಿರೀಟವಿಲ್ಲದ ಅನಭಿಷಕ್ತ ದೊರೆಗಳು ನೋಡಿರಲಿಕ್ಕಿಲ್ಲ, ಅನುಭವಿಸಿರಲಿಕ್ಕಿಲ್ಲ.
              ನೋಡಿದ್ದರೆ, ಅನುಭವಿಸಿದ್ದರೆ ಅಂಥ ಲೋಕಕ್ಕೆ ಕಾಲಿಡುತ್ತಿರಲಿಲ್ಲವೇನೋ! ನಮ್ಮ ಹಿರಿಯರ ಪುಣ್ಯದಿಂದಲೇ ಏನೋ? ನಮಗೆ ಇಂಥ ಬದುಕು ಸಿಕ್ಕಿದೆ, ಕಲಿಯೋಣ ಸವಿಯೋಣ .. 
               ಈ ಕೋಲ್ಡ್ ಬ್ಲಡೆಡ್ ಮರ್ಡರ್ ರೌಡಿಗಳನ್ನು, ಹಿರೋಗಳನ್ನಾಗಿ ವಿಜ್ರುಂಬಿಸಿರುವುದು ಕೊಂಚ ಮಟ್ಟಿಗೆ ಖೇದ ಉಂಟು ಮಾಡುವ ಸಂಗತಿ. ಹೊತ್ತು ಕಳೆಯಲು ಈ ಹೊತ್ತಿಗೆಯನ್ನು ಓದುವುದಾದರೆ, ಓದಿ ಆನಂದಪಡಿ. ಯಾವುದೋ ಸಂದೇಶಕ್ಕಾಗಿ, ಸ್ಪೂರ್ತಿಗಾಗಿ, ಇದನ್ನು ಓದುವುದಾದರೆ, ಖಂಡಿತ ಬೇಡ. 
                   ಪಾಪದ್ದು ಅನ್ನಿಸಿದರೆ, ಪ್ರತ್ಯುತ್ತರ ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ. 


ಎಂದೆಂದೂ ನಿಮ್ಮವ,
ಅರವಿಂದರಾಜ ಬಿ ದೇಸಾಯಿ. 

Saturday, July 2, 2011

ಬೆಂಗಳೂರು: ಭಾವನಾತ್ಮಕ ವಿದಾಯ

               ಒಂದು ಸುಂದರ ಮುತ್ಸಂಜೆಗೆ ಈ ಬರಹ ಸಾಕ್ಷಿಯಾಗುತ್ತದೆಂದು ನಾನಂದುಕೊಂಡಿರಲಿಲ್ಲ. ಇಸ್ರೋ ಲೇಔಟಿನ ಎರಡನೇ ಮಹಡಿಯ ಮೇಲ್ಛಾವಣಿಯ ಮೇಲೆ ಕುರ್ಚಿ ಹಾಕ್ಕೊಂಡು ಕುಳಿತಿದ್ದೆ. ಕಪ್ಪು ಮೋಡದ ನರ್ತನ, ಮಿಂಚು ಗುಡುಗುಗಳ ಆರ್ಭಟ, ಧೂಳು ಮತ್ತು ಹಿಮತುಕದಿಯ ಆಕ್ಸಿಡೆಂಟ್, ಮುಂಗಾರು ಮಳೆಯಾಗಿ ಪರಿವರ್ತನೆಗೊಂಡು ಭೂಮಿಯ ಮಡಿಲು ಸೇರಿತು. ಅದೇನೋ "ಪ್ರೀತಿ ಮಧುರ, ತ್ಯಾಗ ಅಮರ" ಮುಂಗಾರು ಮಳೆಯ ಮಾತು ನೆನಪಾಗಿ, ಮಳೆಯಲ್ಲಿಯೇ ನೆನೆಯುತ್ತಾ ಕುಳಿತುಬಿಟ್ಟೆ. ಮನಸ್ಸಿನಲ್ಲಿ ಏನೋ ದುಗುಡ ದುಮ್ಮಾನ. ಯಾರನ್ನೋ ಕಳೆದುಕೊಂಡ ಭಾವನೆ. ಚಿತ್ರ ವಿಚಿತ್ರ ನೆನಪುಗಳ ಲಹರಿ. ಅಣ್ಣಾವ್ರ ಹಾಡುಗಳ ಮೆಲಕು, ಆ ಚಳಿಗೆ ಮಳೆಗೆ ಟೀ ಹೀರೋಣವೆನ್ನಿಸಿತು, ಅಷ್ಟರಲ್ಲೇ ನನ್ನ ಆತ್ಮೀಯ ಗೆಳೆಯ ವಿಜಯ ಟೀಯೊಂದಿಗೆ ಪ್ರತ್ಯಕ್ಷ. ಕಳೆದುಕೊಂಡಿದ್ದೆಲ್ಲಾ ಸಿಕ್ಕಂತಾದ ಭಾವನೆ. 
ನೆನಪಿನಂಗಳದಲ್ಲಿ ರಂಗೋಲಿಯನ್ನು ಹಾಕತೊಡಗಿದೆನು. ಮಳೆಯ ನೀರಿನಲ್ಲಿ ಕಾಗದದ ದೋಣಿ ಬಿಟ್ಟಾಗಿನಿಂದ ಹಿಡಿದು ಎಲ್ಲಿಯತನಕ:-


"ಸವಿ ಸವಿ ನೆನಪು, ಸಾವಿರ ನೆನಪು, ಸಾವಿರ ಕಾಲಕು ಸವೆಯದ ನೆನಪು". 

ನಾನು ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗ ಅದು ಪರವೂರು. ಈಗದು ತವರೂರಿಂತಾಗಿಬಿಟ್ಟಿದೆ. ಬೆಂಗಳೂರು ಬದುಕು ಕಲಿಸಿದೆ. ಸ್ಟೈಲ್, ಸ್ಮೈಲ್ ಕಲಿಸಿದೆ. ಆತ್ಮೀಯ ಗೆಳೆಯ, ಗೆಳತಿಯರನ್ನು ಪರಿಚಯ ಮಾಡಿಸಿದೆ. ಸೋಲು, ಗೆಲುವು ಸಹಿತ. ಮತ್ತೊಂದು ಸಾರಿ ಬೆಂಗಳೂರಿಗೆ ಬಂದಾಗ ಈ ಊರು ನನ್ನನ್ನು ತನ್ನ ಮೊಮ್ಮಗನೆಂಬುದನ್ನೇ ಮರೆತು ಬೇರೆಯವರಂತೆ ನಡೆಸಿಕೊಂಡುಬಿಡುತ್ತದೇನೋ ಎಂಬ ಭಯ.

ನಾನು ಎಲ್ಲಿಗೆ ಬಂದು ಏನು ಸಾಧಿಸಿದೆ? ಅಂಕಗಳು ನನ್ನ ಸಾಧನಾ ಮಾಪನವಾ? ಎಂಥ ನೂರೆಂಟು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹೊರಳಾಡಿದ್ದು ಸತ್ಯ. ಜ್ಞಾನದ ಹಸಿವು ಇನ್ನೂ ಆರಿಲ್ಲ. ಆದರೂ ಪದವೀಧರ.

ನಾನು ನನ್ನ ಹುಟ್ಟಿದೂರಿಗೆ ಬರುವಾಗ ಕೊನೆಯ ಬಾರಿ ಮತ್ತೆ ಸಿಗೋಣವೆಂದು ಹೇಳಲು ಸರದಾರ ಪಟೇಲ್ ಹಾಸ್ಟೆಲಿಗೆ ಹೋದಾಗ ಎಲ್ಲ ಜೂನಿಯರ್ಸ್ ವಿದಾಯ ಹೇಳಿದ್ದು ಮರೆಯಲಾಗದ ಕ್ಷಣ. ಮತ್ತೊಂದು ಸಂಗತಿ, ನನ್ನನ್ನು ಬಸ್ ನಿಲ್ದಾಣಕ್ಕೆ ಬಿಡಲೆಂದು ಬಂದ ನನ್ನ ಸ್ನೇಹಿತರಿಗೆ ಯಾವ ರೀತಿ ಚಿರರುಣಿಯಾಗಿರಲಿ. ಬಸ್ ನಿಲ್ದಾಣಕ್ಕೆ ತಲುಪಲು ಮುಂಚೆ ಬಹಳ ರೋಚಕ ಕ್ಷಣಗಳನ್ನು ಬೈಕಿನಲ್ಲ ಕಳೆದು ತಲುಪಿದಾಗ, ಕೊನೆಯ ಬಾರಿಗೆ ಆ ದಿನದ ಟೀ ಕರುಳಿನ  ಆಳಕ್ಕೆ ಇಳಿದು ನಿರಾಳ ಎನಿಸಿತು. ಬಸ್ ಹೊರಟು ನಿಂತಾಗ, ಯಾವುದೋ ಭಾರ ಮನಸ್ಸಿನ ಮೇಲೆ ಬಿದ್ದಂತಾಯಿತು. ಮತ್ತೆ ಮತ್ತೆ ಭೇಟಿಯಾಗಲೇಬೇಕೆಂಬ ಆಣೆ ಪ್ರಮಾಣದೊಂದಿಗೆ ನನ್ನನ್ನು ಅಲ್ಲಿಂದ ಬೀಳ್ಕೊಡಲಾಯಿತು. ಭಾವನಾಜೀವಿಯಾದ ನಾನು, ನಿಮ್ಮ ಸ್ನೇಹದ ಮೇಲೆ ಎಲ್ಲಿಲ್ಲದ ಪ್ರೀತಿ ಗೌರವ.
ಈ ಎಲ್ಲಾ ಭಾವನಾತ್ಮಕ ವಿದಾಯವನ್ನು ಬೆಂಗಳೂರಿಗೆ ಅರ್ಪಿಸುವಾಗ ಕಣ್ ಹನಿಯು ಭೂಮಡಿಲು ಸೇರಿತು.

"ಯುಗ ಯುಗಗಳೇ ಸಾಗಲಿ, ನಮ್ಮ ಸ್ನೇಹ ಶಾಶ್ವತ" ಎಂದು ಮನ ಹೇಳಿತು.

ಯಾರು ಯಾರಿಗೂ ಶಾಶ್ವತ ಅಲ್ಲ, ಮುಂದೊಂದು ದಿನ ನನ್ನ ಕಣ್ಣೀರ ಕಟ್ಟೆಯೊಡೆದಾಗ ನಿಲ್ಲಿಸಲು, ಮತ್ತು ಸಾಧನೆ ಮಾಡಿದಾಗ ಖುಷಿ ಪಡಲು ನನ್ನ ಆತ್ಮೀಯ ಸ್ನೇಹಿತರು ಯಾವತ್ತೂ ನನ್ನೊಂದಿಗಿರುತ್ತಾರೆಂಬ ನಂಬಿಕೆಯಿಂದ,
"ಇಲ್ಲಿಗೆ ಮುಗಿದಿಲ್ಲ ಜೀವನ, ಮುಂದಿದೆ ಮಹಾಯುದ್ಧ",
ನಿಮ್ಮ ಹಾರೈಕೆ ನನ್ನನ್ನು ಆ ಮಹಾಯುದ್ಧದಲ್ಲಿ ಗೆಲ್ಲಿಸುತ್ತದೆಂಬ ಆತ್ಮವಿಶ್ವಾಸ ನನ್ನಲ್ಲಿದೆ.

ನಿಮ್ಮ ಪ್ರೀತಿಯ ಸ್ನೇಹಿತ,
ಅರವಿಂದರಾಜ ಬಿ ದೇಸಾಯಿ. 

Tuesday, March 1, 2011

ನಿತ್ಯೋತ್ಸವ ನಗರಿಯಲ್ಲಿ ಕನ್ನಡದ ತೇರು

   ಬೆಂಗಳೂರಿನಲ್ಲಿ ಫೆಬ್ರುವರಿ 4,5,6 ರಂದು ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಾಧಕ ಭಾದಕಗಳ 
ದೂರದೃಷ್ಟಿಯ ಅವಲೋಕನಾ ಲೇಖನ ಇದು. ಪಬ್ಬು, ಬಾರ್ ಗಳ ಭರಾಟೆಯಂಥ ನಿತ್ಯ ಉತ್ಸವಗಳ ನಗರಿಯಲ್ಲಿ ಅಕ್ಷರ ಜಾತ್ರೆ ಯಶಸ್ವಿಯಾದದ್ದು ಕನ್ನಡದ ಮಟ್ಟಿಗೆ ಆರೋಗ್ಯಕರ ಬೆಳವಣಿಗೆ. ಆದರೆ ಯಶಸ್ವೀ ಎಂಬುದು ಯಾವ ಅರ್ಥದಲ್ಲಿ ಅವಲೋಕಿಸಬಹುದು? 70,000 ದಿಂದ 1,00,000 ಜನ ಇದಕ್ಕೆ ಸಾಕ್ಷಿಯಾದರೆಂದು ಪೇಪರಿನಲ್ಲಿ ಓದುವಾಗ ನಗು ಬಂತು, ಯಾಕೆಂದರೆ, ಇಂದಿನ ಯಾಂತ್ರಿಕ ಜೀವನದಲ್ಲಿ ಜನರನ್ನು ಸೇರಿಸುವುದು ರಾಜಕೀಯ ಗಿಮಿಕ್. ಇರಲಿ, ಸಾಹಿತ್ಯ ಸಮ್ಮೇಳನಗಳ ಇತಿಹಾಸ ಏನಿರಬಹುದು? ಇವುಗಳ ಕೊಡುಗೆ ಕನ್ನಡ ಸಾಹಿತ್ಯಕ್ಕೆ, ಕನ್ನಡ ನಾಡು ನುಡಿಗೆ ಕೊಡುಗೆ ಯಾವ ರೀತಿಯದ್ದು, ಎಂಬುದಕ್ಕೆ ಉತ್ತರ ಹುಡುಕಲು ಇಂಟರ್ನೆಟ್ ನಲ್ಲಿ ಹುಡುಕಿದ್ದು, ತಡಕಾದಿದ್ದು ನಿಮ್ಮ ಮುಂದಿಡುತ್ತಿದ್ದೇನೆ. 
   
     1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉದಯ. ಆಗ ಮೇರು ಬರಹಗಾರರಿದ್ದರು, ಕನ್ನಡವನ್ನು ತಮ್ಮ ಉಸಿರಾಗಿಸಿಕೊಂಡವರಿದ್ದರು. 1932ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಿ.ವಿ.ಜಿ.ಯವರು ಮಂಡಿಸಿದ ವಿಷಯಗಳು, ಕರ್ನಾಟಕದ ಏಕೀಕರಣ ಚಳುವಳಿಯ ಸ್ವರೂಪವನ್ನೇ ಬದಲಾಯಿಸಿದವು. 1948ರಲ್ಲಿ ಬೇಂದ್ರೆ, "ಹಕ್ಕಿ ಹಾರುತಿದೆ ನೋಡಿದಿರಾ", ಎಂದಾಗ ವೇದಿಕೆ ಮುಂದಿದ್ದ ಮೂವತ್ತು ಸಾವಿರ ಜನ ತಲೆಯೆತ್ತಿ ನೋಡಿದ್ದರು. 1958ರಲ್ಲಿ ವಿ.ಕೃ.ಗೋಕಾಕ ಬಳ್ಳಾರಿಯಲ್ಲಿ ಮಂಡಿಸಿದ ಹೊಸ ವಿಚಾರಗಳು ನವ್ಯ ಸಾಹಿತ್ಯ ಎಂಬ ಹೊಸ ಚಳುವಳಿಗೆ ಕಾರಣವಾದವು. 1960ರಲ್ಲಿ ಅ.ನ.ಕೃ ಮಣಿಪಾಲದಲ್ಲಿ, ಬೆಂಗಳೂರಿನಲ್ಲಿನ ಕನ್ನಡದ ಸ್ಥಿತಿಗತಿಗಳು, ಚಿತ್ರರಂಗದ ಪರಿಭಾಷಾ ಒಲವಿನ ಬಗ್ಗೆ ಚರ್ಚೆ ನಡೆದಾಗ, ಡಬ್ಬಿಂಗ್ ವಿರೋಧಿ ಚಳುವಳಿಗಳು ನಡೆದವು. ಇನ್ನೂ ಕೆಲವು ಮೇರು ಕವಿಗಳು ತಮ್ಮ ನಿಲುವಿಗೆ ಬದ್ಧರಾಗಿದ್ದರು. ಕರ್ನಾಟಕ ಏಕೀಕರಣವಾಗುವ ತನಕ ಕುವೆಂಪು ಅಧ್ಯಕ್ಷತೆವಹಿಸುವುದಿಲ್ಲವೆಂದಾಗ, ಅವರ ಪ್ರಕಾರ, ಕರ್ನಾಟಕ ಏಕೀಕರಣವಾದ ಮೇಲೆ ಅಂದರೆ 1957ರಲ್ಲಿ ಅಧ್ಯಕ್ಷತೆ ವಹಿಸಿದರು. ಕನ್ನಡದ ಕೆಲಸಗಳಿಗೆ ಅಡ್ಡಿಯಾಗುವುದೆಂಬ ಕಾರಣಕ್ಕೆ, ಕೊನೆಯವರೆಗೂ ತಿ.ನಂ.ಶ್ರೀ. ಅಧ್ಯಕ್ಷತೆ ವಹಿಸದೇ ಇದ್ದರು.


      ಇನ್ನು ಈ ಸಮ್ಮೇಳನದ ವಿಷಯಕ್ಕೆ ಬರೋಣ. ನಾನೂ 70,000 ಜನರಲ್ಲಿ ಒಬ್ಬನಾಗಿ ಸಮ್ಮೇಳನದ ಎಲ್ಲಾ ಚರ್ಚೆಗಳಲ್ಲಿ ಜವಾಬ್ದಾರಿಯುತ ಪ್ರೇಕ್ಷಕನಾಗಿ ಭಾಗವಹಿಸಿದ್ದೇನೆ, ಖುಷಿ ಪಟ್ಟಿದ್ದೇನೆ. ನನ್ನ ಖುಷಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಈ ಲೇಖನ. 
ಅಧ್ಯಕ್ಷರು-ಪ್ರೊ.ಜಿ.ವೆಂಕಟಸುಬ್ಬಯ್ಯನವರು ಈ ಬಾರಿಯ ಕನ್ನಡದ ತೇರು ಎಳೆದ ಸಾಹಸದ ಸಾರ್ಥಕ ರೂವಾರಿ. ಪ್ರಭಂದ, ವ್ಯಕ್ತಿಚಿತ್ರ, ಸಂಪಾದನೆಯಲ್ಲಿ ಇವರ ಕೊಡುಗೆ ಅನನ್ಯ. ಬಿ.ಎಂ.ಶ್ರೀ. ವೆಂಕಣ್ಣಯ್ಯನವರಂಥ ಕನ್ನಡದ ಸಾಹಿತ್ಯದ ಕಲಿಗಳ ಶಿಷ್ಯರಿವರು. 98ರ ಇಳಿ ವಯಸ್ಸಿನ ಇವರು, ತನು ಮನ ಧನಗಳಿಂದ ಕನ್ನಡ ಕಟ್ಟುವ ಕೆಲಸ ಮಾಡಿದರು. ಜೀ.ವಿ ಎಂದೇ ಪ್ರಖ್ಯಾತರಾದ ಇವರು ಮುಪ್ಪಾಗಿರಬಹುದು ಆದರೆ ಇವರು ಮಾಡಿದ ಕನ್ನಡದ ಕೆಲಸಕ್ಕೆ ಎಂದಿಗೂ ಮುಪ್ಪಿಲ್ಲ.

ಈ ಬಾರಿ ಕೆಲವು ನಿರ್ಣಯಗಳೂ ಮಂಡನೆಯಾದವು , ಕೆಲವು ಸವಕಲು ವಿಷಯಗಳು ಚರ್ಚೆಯಾದವು. 
ಆಗಿನ ಈಗಿನ ಹಳ್ಳಿ ಜೀವನ, ಒಂದು ಅನುಪಯುಕ್ತ ಚರ್ಚೆ ನಡೆಯುತ್ತಿತ್ತು,
ಒಬ್ಬ ಮಹಾನುಭಾವ ಆಗಿನ ಹಳ್ಳಿ ಜೀವನವೇ ಚನ್ನಾಗಿತ್ತು, ಈಗೆಲ್ಲ ಯಾಂತ್ರಿಕವಾಗಿದೆ ಎಂದ. ಅರ್ರೇ, ಬದಲಾವಣೆ ಜಗದ ನಿಯಮವಲ್ಲವೇ?, ಕಾಲಕ್ಕೆ ತಕ್ಕಂತೆ ಜನ ಬದಲಾಗುತ್ತಾರೆ, ತಪ್ಪೇನಿಲ್ಲ. ಹಾಗೆ, ಮತ್ತೊಂದು ವಿಷಯ ಚರ್ಚೆ ಕೂಡಾ ಆಯಿತು, 20 ರಿಂದ 30 ವರ್ಷದ ಯುವಕರು ಪೇಟೆಗಳತ್ತ ಮುಖ ಮಾಡುತ್ತಿದ್ದಾರೆ. ಅವರೆಲ್ಲ ತಿರುಗಿ ಹಳ್ಳಿಗಳತ್ತ ಹೊರಡಬೇಕು ಎಂದು ಆಜ್ಞೆಯನ್ನೂ ಮಾಡಿದರು. ಆದರೆ ದಿನಗೂಲಿ 200 ರೂಪಾಯಿ ಕೂಡ ಸಿಗದ ಹಳ್ಳಿಯಲ್ಲಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು ಕಷ್ಟವಾಗಿರುವಾಗ ಪೇಟೆಗಳತ್ತ ಮುಖ ಮಾಡುವುದರಲ್ಲಿ ತಪ್ಪೇನಿದೆ. ಇಂಥ ವಿಷಯಗಳನ್ನು ಚರ್ಚಿಸುವಾಗ ವಾಸ್ತವಿಕತೆ, ವ್ಯೆಜ್ಞಾನಿಕತೆಯನ್ನು ಮನಗಂಡು ವಿಷಯಗಳನ್ನು ಆಯ್ಕೆ ಮಾಡಬೇಕೆಂಬುದು  ನನ್ನ ಅನಿಸಿಕೆ.

ಮುಖ್ಯವಾದ ಸಂಗತಿ ನಿರ್ಣಯಗಳದ್ದು, ಸಮ್ಮೇಳನದ ಫಲವಾಗಿ ಇಂಥ ನಿರ್ಣಯ ಜನಾಭಿಪ್ರಾಯವಾಗಿ ರೂಪುಗೊಂಡು, ಕಾರ್ಯ ರೂಪಕ್ಕೆ ಬಂದಿತು ಎಂದು ಹೇಳಬಲ್ಲ ಉದಾಹರಣೆ ಇದುವರೆಗೂ ಸಿಕ್ಕಿಲ್ಲ.   ಸಮ್ಮೇಳನಾಧ್ಯಕ್ಷರು  ೩ ದಿನಗಳ ವೈಭವಕ್ಕೆ ಸೀಮಿತವಾಗಿಬಿಟ್ಟಿದ್ದಾರೆ. ಅವರ ಭಾಷಣ ಔಪಚಾರಿಕ ವಿಧಿಯಾಗಿಬಿಟ್ಟಿದೆ, ೩ ದಿನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ನಿರ್ಣಯಗಳ ವಿವರಗಳೂ ಬರುತ್ತವೆ, ನಂತರ ಎಲ್ಲವೂ ತಣ್ಣಗಾಗುತ್ತವೆ. ಕನಿಷ್ಠ ಚರ್ಚೆ ಕೂಡ ನಡೆಯುವದಿಲ್ಲ.
ನಿರ್ಣಯ ಎಂದರೆ ಕಾವೇರಿ ಚಳುವಳಿ, ಬೆಳಗಾವಿ ಕರ್ನಾಟಕದ್ದೇ, ಗೋಕಾಕ್ ಚಳುವಳಿ ಇತ್ಯಾದಿ.
ನಿರ್ಣಯಗಳು ಮೊದಲು ಜನಾಭಿಪ್ರಾಯವಾಗಿ ರೂಪುಗೊಳ್ಳಬೇಕು, ನಂತರ ಚರ್ಚೆಯಾಗಿ ಅದನ್ನು ಕಾರ್ಯಗತಗೊಳಿಸಬೇಕು. ಪ್ರತಿ ಸಮ್ಮೇಳನಾಧ್ಯಕ್ಷರನ್ನು ಒಂದು ವರ್ಷದ ಅವಧಿಯವರೆಗೆ ಸಾಕ್ಷಿ ಪ್ರಜೆಯಾಗಿ ನಿಯಮಿಸಬೇಕೆಂಬುದು ಪರಿಷತ್ತಿನ ಆಗ್ರಹ, ಆದರೆ ಯಾವ ರಾಜಕೀಯ ಪಕ್ಷಗಳೂ ಒಂದು ಖುರ್ಚಿಯನ್ನು ಬಿಡುವುದಿಲ್ಲ ಎಂಬುದು ಅಷ್ಟೇ ಕಟುಸತ್ಯ. 
ಬೇರೆ ರಾಜ್ಯಗಳಿಂದ ಬಂದವರು ಕನ್ನದಲ್ಲಿ ಕಲಿತು ಬಳಸಬೇಕೆಂಬುದು ಈ ಬಾರಿಯ 10 ನಿರ್ಣಯಗಳಲ್ಲಿ ಒಂದಾಗಿತ್ತು. ಆದರೆ ಕನ್ನಡಿಗರೇ ಕನ್ನಡವನ್ನು ಬಳಸುವಲ್ಲಿ ಅನಾಸ್ಥೆ  ತೋರುವಾಗ, ಬೇರೆಯವರು ಹೇಗೆ ಕಲಿತಾರು?

'ಕನ್ನಡ ಪದ ಎಂಬುದು ಕಬ್ಬಿಣದ ಕಡಲೆಯಲ್ಲ, ಹಿರಿದಿದೆ ಕನ್ನಡದ ಅರ್ಥ' ಎಲ್ಲೋ ಓದಿದ ನೆನಪು. ಅರ್ಥ ತಿಳುದುಕೊಂಡವನೇ ಸಾರ್ಥಕ ಜೀವಿ, ಕನ್ನಡದ ಮುದ್ದಣರಿಂದ ಹಿಡಿದು ಈಗಿನ ಮುಂಗಾರು ಮಳೆಯ ತನಕ ಸಾಹಿತ್ಯ ಕೃಷಿಯಾಗಿದೆ, ಇನ್ನು ಮುಂದಿನ ಪೀಳಿಗೆಯ ಕನ್ನಡದ ಉಳಿವು-ಅಳಿವು ನಮ್ಮ ಯುವ ಜನಾಂಗದ ಕೈಯಲ್ಲಿದೆ. ಮಾಯಾನಗರಿಗಳ ಮಲ್ಟಿಪ್ಲೆಕ್ಸ್ ಬೆಂಗಳೂರಿನಲ್ಲಿ ಅಕ್ಷರ ಜಾತ್ರೆಗೆ ಜನಗಳ ಸಾಥ್ ಸಿಕ್ಕಿರುವುದು, ಕನ್ನಡದ ಕೆಲಸಗಳಿಗೆ ಪ್ರೋತ್ಸಾಹವಿದ್ದಂತೆ.
ತಮ್ಮ ಮನಸ್ಸಿಗೆ ತಟ್ಟಿದರೆ ಮರುತ್ತರ ಬರೆಯಿರಿ, ತಟ್ಟದಿದ್ದರೂ ಬರೆಯಿರಿ. 

ಜವಾಬ್ದಾರಿಯುತ ಕನ್ನಡಿಗ,
ಅರವಿಂದರಾಜ ಬಿ ದೇಸಾಯಿ.