A r v i n d r a j   D e s a i
Showing posts with label RAVI BELEGERE. Show all posts
Showing posts with label RAVI BELEGERE. Show all posts

Sunday, April 21, 2013

ಪಾಪಿಗಳ ಲೋಕದಲ್ಲಿ:- ಭೂಗತ ಲೋಕದ ತೆರೆ ಮರೆಯ ವಿಮರ್ಶೆ

ನಾನು ಯಾವಾಗಲೂ ಕಾದಂಬರಿಗಳನ್ನು  ಕೊಳ್ಳುವಾಗ, ಅದರ ಪೂರ್ವಾಪರಗಳನ್ನು ಅಭ್ಯಸಿಸಿ, ಕೊಂಡು ಓದಿ ಆನಂದ ಪಡುವ ಸಾಮಾನ್ಯ ಜೀವಿ. ನನಗೆ ಇತಿಹಾಸ, ದೇಶ, ಯುದ್ಧ, ರಾಜಕೀಯ, ಪ್ರೇಮ ಕಾದಂಬರಿಗಳ ಮೇಲೆ ಹೆಚ್ಚಿನ ಆಸಕ್ತಿ. ಆದರೂ ಈ ಬಾರಿ ನನಗೇ ಗೊತ್ತಿಲ್ಲದ ಹಾಗೆ ಈ ಹೊತ್ತಿಗೆಯನ್ನು ಕೊಂಡಾಗಿತ್ತು, ಇನ್ನು ಓದಿ ಮುಗಿಲಸಲೇಬೇಕಲ್ಲ, ಇಲ್ಲವೆಂದರೆ ಪೈಸಾ ವಸೂಲ್ ಹೇಗಾದಿತು?...  ಓದಲೋ? ಬೇಡವೋ? ಎನ್ನುವ ನನ್ನ ತಳಮಳಕ್ಕೂ ಕಾರಣವಿದೆ. ಇದು ಒಂದು ಭೂಗತ ಲೋಕದ ರಕ್ತಸಿಕ್ತ ದಿನಗಳ ಚುಟುಕು ಚಿತ್ರಣ  ಮೂಡಿಸುವಂಥಹ ರವೀ ಬೆಳೆಗೆರೆಯವರ ಕಾದಂಬರಿ.
ಬಿಸಿರಕ್ತದ ತರುಣ, ಎಲ್ಲಾದರೂ ಅನ್ಯವಾದಾಗ, ಅಪಚರವಾದಾಗ, ಪಾಪವಾದಾಗ, ಉರಿದು ಬೀಳುವ ಕ್ರುದ್ಧನಾಗುವ ನಾನು, ಅದೆಷ್ಟು ಸಂಯಮದಿಂದ ಈ ಪಾಪದ, ಕೊಲೆಗಡುಕರ, ತಲೆಹಿಡುಕರ, ಧರ್ಮಹೀನ ಮನುಷ್ಯರ ಕಥೆಗಳನ್ನು ಓದಿದೆನೆಂದು ಆಶ್ಚರ್ಯ ಮೂಡುತ್ತದೆ. ನನ್ನಂಥಹ ಯುವಕರ ಪಾಲಿಗೆ ಏನು ಸಂದೇಶ ಕೊಡುತ್ತದೆ ಈ ಪುಸ್ತಕ? ಏನು ಸಾಧಿಸಲೆಂದು? ಯಾರ ಸ್ಪೂರ್ತಿಗಾಗಿ, ಈ ಪುಸ್ತಕ ಹಿಡಿದೆನೆಂದು ಈ ಹೊತ್ತಿಗೂ ತಿಳಿದಿಲ್ಲ. ಬಹುಷಃ ರವಿ  ಬೆಳೆಗೆರೆಯಂಥ ಮಾಗಿದ ಕಾದಂಬರಿಕಾರರ ಇದೊಂದು ಪುಸ್ತಕ ಓದಿದರೆ ತಪ್ಪಲ್ಲ ಎಂದೆನಿಸಿ ಶುರುಮಾಡಿದೆ. 
                ಎಂಭತ್ತು ತೊಂಭತ್ತರ ದಶಕದ ರಕ್ತದೋಕುಳಿಯ, ಸಾಲು ಸಾಲು ಕೊಲೆಗಳ, ಸಾಲು ಸಾಲು ಮಾನಭಂಗಗಳ, ರೌಡಿ ಷೀಟರುಗಳ ಅಬ್ಬರ ಕೋಪತಾಪ, ಜನಸಾಮಾನ್ಯರ ಅಸಹಾಯಕತೆ, ರಾಜಕಾರಣಿಗಳ ಅವಕಾಶವಾದಿತನ, ಸತ್ಯ ಘಟನೆಗಳ ಸರಮಾಲೆಯೇ ಈ ಕಾದಂಬರಿ. ಕತ್ತಲಾದರೆ ಎಚ್ಚರಗೊಳ್ಳುವ ಈ ಭೂಗತ ಲೋಕದ ಪ್ರತೀ ರೌಡಿಗಳ ಮನಸ್ತಿತಿ, ಮನಸ್ತಾಪ, ಹೆದರಿಕೆ, ಭಂಡತನ, ಕ್ರೌರ್ಯ, ಹಿಂಸೆ, ಮೃಗತನ, ಚಾಣಾಕ್ಷತನ, ರೌಡಿಗಳೇ ಹೇಳಿದ ಕಥೆಗಳ ಸುತ್ತ ಗಿರಕಿ ಹೊಡಿಯುತ್ತದೆ 'ಪಾಪಿಗಳ ಲೋಕದಲ್ಲಿ'. 
                 ಕೊತ್ವಾಲ್ ರಾಮಚಂದ್ರನ ರೋಲ್ ಕಾಲ್, ಜಯರಾಜ್ ತಾನಿರುವ ಜೈಲಿನಿಂದಲೇ ಜಗತ್ತನ್ನು ಆಳಿದ ರೀತಿ, ಆಯಿಲ್ ಧಂದೆಯನ್ನು ಅಷ್ಟೊಂದು ಅಚ್ಚುಕಟ್ಟಾಗಿ ನಡೆಸಿದ ಆಯಿಲ್ ಕುಮಾರನ ರೀತಿ, ಮುಟ್ಟಿದರೆ ಮಾಸುವ ಮುತ್ತಪ್ಪ ರೈ ಎಂಬಾತನ ರೀತಿ, ಎಂಥ ಚಿಕ್ಕ ವಯಸ್ಸಿನ ಪುಡಿ ರೌಡಿಗಳಲ್ಲಿ ಭೂಗತ ಲೋಕದ ಭಯಾನಕ ಆಸೆಗಳ ಬಾಗಿಲು ತೆರೆದುಕೊಂಡರೆ ಆಶ್ಚರ್ಯವೇನಿಲ್ಲ. ಆದರೆ, ಅದರ ಹಿಂದಿದ್ದ (ತೆರೆಯ ಹಿಂದಿನ) ಮಸಲತ್ತುಗಳು, ಪೋಲೀಸರ ಬೆಂಡೆತ್ತು (ಏರೋಪ್ಲೇನ್ ), ಯಾವ ರೌಡಿಯ ಬಿಸಿರಕ್ತವನ್ನು ತಣ್ಣಗೆ ಮಾಡುವಷ್ಟು ಬಲಶಾಲಿಯಾಗಿದ್ದವು, ಈಗಲೂ ಇವೆ. 
                ಈ  ಕಾದಂಬರಿ ಓದುವಾಗ, ನಾನಿರುವ ಸ್ಥಳವಾದ ರಾಜಾಜಿನಗರದ  ಕೆಲವು ದೃಶ್ಯಗಳು ಬಂದರೆ, ಬಸವನಗುಡಿಯ ಬಗೆ ಕತೆಗಳಲ್ಲಿ ಪ್ರಸ್ಥಾಪವಾದರೆ, ನಾನಿರುವ ಪ್ರದೇಶದಲ್ಲಿ ಇಂಥ ಭಯನಕಗಳು ನಡೆದಿವೆಯಾ? ರಕ್ತದ ಹೊಳೆಹರೆದಿದೆಯಾ? ಎಂದು ಯೋಚನಾ ಲಹರಿಗೆ ಇಳಿದರೆ, ಒಂದು ಕ್ಷಣ ಮೈಯಲ್ಲಿ ನಡುಕ ಬಂದಿದ್ದಂತೂ ಸುಳ್ಳಲ್ಲ. ಈಗ ಆ ರಕ್ತದ ಹೊಳೆ ಬತ್ತಿ ಹೋಗಿ ಟಾರು ರೋಡು ಹಾಕಿರುವುದೂ ಅಷ್ಟೇ ಸತ್ಯ. ಆ ಕಾಲದಲ್ಲಿ ಅಷ್ಟೊಂದು ಭಾಯಾನಕಗಳು ಘಟಿಸುವುದಕ್ಕೆ ಕಾರಣವೇನಿರಬಹುದೆಂದು ನನ್ನಲ್ಲಿ ನಾನೇ ವಿಮರ್ಶೆ ಮಾಡಿಕೊಂಡಾಗ, ಬಿಟ್ಟಿ ದುಡ್ಡು ಬರುವಾಗ ಬಗ್ಗಿಸಿ ದುಡಿದು ಯಾಕೆ ತಿನ್ನಬೇಕು ಎಂಬ ಸೋಮಾರಿಗಳೇ ಆಗಿನ ರೌಡಿಗಳು! ಕುಡಿತ, ಜೂಜು, ಹೆಂಗಳೆಯರ ಸಹವಾಸ, ಒಟ್ಟಿನಲ್ಲಿ ಒಂದು ವರ್ಣರಂಜಿತ ಬದುಕು. ಇದನ್ನು ಸಾಗಿಸಲಿಕ್ಕೆ ಬೇಕಾಗಿದ್ದು ಒಂದು ಬ್ಲೇಡು, ಒಂದು ಮಚ್ಚು (ಲಾಂಗ್) ಒಂದಿಷ್ಟು ಭಂಡತನ, ಮುಗೀತು. ಭಂಡತನದ ಪರಮಾವಧಿ ಭೂಗತ ಲೋಕದೊಳಕ್ಕೆ 'ರೆಡ್ ಕಾರ್ಪೆಟ್'.. 
                  ಜಯರಾಜ್, ಕೊತ್ವಾಲ್ ರಾಮಚಂದ್ರ,  ಆಯಿಲ್ ಕುಮಾರ, ಮುತ್ತಪ್ಪ ರೈ, ಎಂ ಸಿ ಪ್ರಕಾಶ್, ಬಿಂಡ, ಸಿದ್ದ, ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಮುಚ್ಚ ರಾಜೇಂದ್ರ, ಡೆಡ್ಲಿ ಸೋಮ, ಚಂದು, ರಾಜಶೇಖರ್, ಬಸವ, ಕರಿಯ, ಸಕ್ರೆ, ಶ್ರೀರಾಂಪುರ್ ಕಿಟ್ಟಿ, ಕುಳ್ಳ ನಾರಾಯಣ, ಪಟ್ರೆ ನಾರಾಯಣ, ಕೋಟೆ ನಾಗರಾಜ, ಕೋಟೆ ರಾಜೇಂದ್ರ, ಕಾಲಾ ಪತ್ಥರ್, ಕೋಳಿ ಫ್ಹಯಾಜ್, ಬಲರಾಮ್, ಚೋಟು ಪ್ರಕಾಶ್, ಹೀಗೆ ಭೂಗತ ಲೋಕದ ಭಂಡರ ಹೆಸರುಗಳನ್ನು ಬೆರೆಯುತ್ತ ಕುಳಿತರೆ ಕಾಗದ ಸಾಕಾಗದು. ಇವರೆಲ್ಲರ ಸ್ಥೂಲ ಚಿತ್ರಣ ಕಣ್ಣು ಮುಂದೆ ಬಂದು ಹೋಗುವಂಥ ಶಕ್ತಿ ಬೆಳೆಗೆರೆಯವರ ಬರವಣಿಗೆಗಿದೆ.
                 ಹಾಯಾಗಿ ಕಾಲೇಜಿಗೆ ಹೋಗಿ ಗೆಳೆಯರ ಜೊತೆ ಗಂಟೆಗಟ್ಟಲೆ ಗೀಳು ಮಾತಾಡಿ, ಅಲ್ಲೊಂದಿಷ್ಟು ಇಲ್ಲೊಂದುಷ್ಟು ಶಿಕ್ಷಕರ, ಅಪ್ಪ, ಅವ್ವ, ಅಣ್ಣನ ಹತ್ತಿರ ಕೀಟಲೆ ಮಾಡಿಕೊಂಡು, ಚಟಕ್ಕಾಗಿ ಕೆಲವು ಕನ್ನಡ ಪುಸ್ತಕಗಳನ್ನು ಓದಿಕೊಂಡು, ಬೋರು ಹೊಡೆದಾಗ ಟ್ರಿಪ್ ಹಾಕುವ ಅದೃಷ್ಟ, ಬಹುಚಂದದ ಬದುಕನ್ನು ಬಹುಷಃ ಈ ಭೂಗತ ಲೋಕದ ಕಿರೀಟವಿಲ್ಲದ ಅನಭಿಷಕ್ತ ದೊರೆಗಳು ನೋಡಿರಲಿಕ್ಕಿಲ್ಲ, ಅನುಭವಿಸಿರಲಿಕ್ಕಿಲ್ಲ.
              ನೋಡಿದ್ದರೆ, ಅನುಭವಿಸಿದ್ದರೆ ಅಂಥ ಲೋಕಕ್ಕೆ ಕಾಲಿಡುತ್ತಿರಲಿಲ್ಲವೇನೋ! ನಮ್ಮ ಹಿರಿಯರ ಪುಣ್ಯದಿಂದಲೇ ಏನೋ? ನಮಗೆ ಇಂಥ ಬದುಕು ಸಿಕ್ಕಿದೆ, ಕಲಿಯೋಣ ಸವಿಯೋಣ .. 
               ಈ ಕೋಲ್ಡ್ ಬ್ಲಡೆಡ್ ಮರ್ಡರ್ ರೌಡಿಗಳನ್ನು, ಹಿರೋಗಳನ್ನಾಗಿ ವಿಜ್ರುಂಬಿಸಿರುವುದು ಕೊಂಚ ಮಟ್ಟಿಗೆ ಖೇದ ಉಂಟು ಮಾಡುವ ಸಂಗತಿ. ಹೊತ್ತು ಕಳೆಯಲು ಈ ಹೊತ್ತಿಗೆಯನ್ನು ಓದುವುದಾದರೆ, ಓದಿ ಆನಂದಪಡಿ. ಯಾವುದೋ ಸಂದೇಶಕ್ಕಾಗಿ, ಸ್ಪೂರ್ತಿಗಾಗಿ, ಇದನ್ನು ಓದುವುದಾದರೆ, ಖಂಡಿತ ಬೇಡ. 
                   ಪಾಪದ್ದು ಅನ್ನಿಸಿದರೆ, ಪ್ರತ್ಯುತ್ತರ ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ. 


ಎಂದೆಂದೂ ನಿಮ್ಮವ,
ಅರವಿಂದರಾಜ ಬಿ ದೇಸಾಯಿ. 

Monday, November 1, 2010

ಹಿಮಾಲಯನ್ ಬ್ಲಂಡರ್ : ರಾಜಕೀಯ v/s ಸೈನ್ಯ


ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು. ಪತ್ರಿಕೋದ್ಯಮದಲ್ಲಿ ಹೊಸ ಗಾಳಿಯನ್ನು ಬೀಸಿದಂಥ ರವಿ ಬೆಳೆಗೆರೆಯವರ "ಹಿಮಾಲಯನ್ ಬ್ಲಂಡರ್" ಕೃತಿಯನ್ನು ಓದಲು ಪ್ರೇರೇಪಿಸಿದವರು ಬಹಳ ಆದರೆ ಕೃತಿಯನ್ನು ಓದಲು ಕೊಟ್ಟು ಪ್ರಾಮಾಣಿಕ ಪ್ರಯತ್ನ ಮಾಡಿದವರಲ್ಲಿ ನನ್ನ ಆತ್ಮೀಯ ಸ್ನೇಹಿತ ಶ್ರೀನಿಧಿ ಮೊದಲಿಗ. ಈ ಕೃತಿಯ ಕುರಿತು ನನ್ನ ಅನಿಸಿಕೆ ಮತ್ತು ಸಂತೋಷ ವ್ಯಕ್ತಪಡಿಸಲು ಈ ಲೇಖನ.
ಇದು ಜಾನ್ ಪಿ ದಳವಿಯವರ ಮೂಲ ಕೃತಿಯಾಗಿದ್ದು, ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು ಶ್ರೀ ರವಿ ಬೆಳೆಗೆರೆಯವರು.
ಯಾವುದೇ ಕೃತಿ ಯನ್ನು ತರ್ಜುಮೆ ಮಾಡುವಾಗ ಅಲ್ಲಿನ ನೆಲೆಗೆಟ್ಟು ಮತ್ತು ಪ್ರಾಂತ್ಯದ ಜನರ ಅಭಿರುಚಿಗೆ ತಕ್ಕಂತೆ ಮನಮುಟ್ಟುವಂತೆ ಹೇಳುವುದಾಗಲೀ ಬರೆಯುವುದಾಗಲೀ ಒಂದು ಕಲೆಯೆಂದೂ ಭಾವಿಸಿರುತ್ತೇನೆ. ಆ ಕಲೆಯು ಮತ್ತು ಕನ್ನಡಿಗರ ನಾಡಿ ಮಿಡಿತದ ಹಿಡಿತ ಕವಿಗೆ ಚೆನ್ನಾಗಿ ಗೊತ್ತಿದೆ ಎಂದೆನಿಸದೇ ಇರಲಾರದು.

ಕೃತಿಯ ಮುಂಚೆ ಕವಿಯ ಬಗ್ಗೆ ಹೇಳುವುದಾದರೆ, ನನ್ನ ತಂದೆಯವರು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಎಲ್ಲ ಕವಿಗಳ ಸೂಚ್ಯ ಪರಿಚಯ ನೀಡುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ. 10ನೇ ವಯಸ್ಸಿನಿಂದ ರವಿ ಬೆಳೆಗೆರೆಯವರ ಹೆಸರನ್ನು ಕೇಳುತ್ತಾ ಬಂದಿದ್ದರೂ ಕೂಡಾ, ಅವರ ಕೃತಿ ಓದಲು ಮತ್ತೂ 10 ವರ್ಷಗಳು ಬೇಕಾಯಿತು. ಅವರ "ಹಂತಕಿ ಐ ಲವ್ ಯೂ" ನಾನು ಓದಿದ ಮೊದಲ ಕೃತಿ ನಂತರ "ಮಾಂಡೋವಿ", "ಖಾಸ್ ಬಾತ್", "ಗಾಂಧಿ ಹತ್ಯೆ ಮತ್ತು ಗೋಡ್ಸೆ", "ಓ ಮನಸೇ", "ಹಾಯ್ ಬೆಂಗಳೂರು". ಈಗ "ಹಿಮಾಲಯನ್ ಬ್ಲಂಡರ್".

ಓದುತ್ತಾ ಓದುತ್ತಾ ಹೋದಂತೆಲ್ಲಾ ಭಾರತದ ಸೈನ್ಯದ ಬಗ್ಗೆ ಏನು ತಿಳುವಳಿಕೆ ಇಲ್ಲದ ವ್ಯಕ್ತಿಗೂ ಸಾಮಾನ್ಯ ತಿಳುವಳಿಕೆ ಬರದೇ ಇರದು. ಒಂದು ಬ್ರಿಗೇಡ್, ಒಬ್ಬ ಬ್ರಿಗೇಡಿಯರ್, ಒಂದು ಸೈನ್ಯ, ಒಬ್ಬ ಜನರಲ್, ಕ್ಯಾಪ್ಟನ್, ಲೆಫ್ಟಿನೆಂಟ್, ಕರ್ನಲ್, ಮೇಜರ್ ಮುಂತಾದ ಸೈನ್ಯದ ವಿಭಾಗಗಳು ಮತ್ತೂ ವಿಭಾಗಾಧಿಕಾರಿಗಳ ಚಿತ್ರಣ, ಅವರ ಕಾರ್ಯಗಳು, ಮನಸ್ಸಿನ ತಳಮಳಗಳು ಏನು? ಎಂಬುದರ ಪೂರ್ಣ ಪ್ರಮಾಣದ ಜ್ಞಾನ ಕೃತಿಯ ಜೀವಾಳವಾಗಿದೆ. ೧೯೭೦ರ ದಶಕದಲ್ಲಿ ಭಾರತೀಯ ರಾಜಕಾರಣಿಗಳು ಮತ್ತೂ ಸೈನ್ಯದ ಹಿರಿಯ ಅಧಿಕಾರಿಗಳು ಎಷ್ಟರ ಮಟ್ಟಿಗೆ ಭಾರತೀಯ ಸೈನ್ಯದ ಮತ್ತೂ ಸೈನಿಕರ ಬಗ್ಗೆ ಕಾಳಜಿ ವಹಿಸಿದ್ದರೆಂಬುದು ಮತ್ತೂ ಆ ಮಿಲಿಟರಿ ಇತಿಹಾಸದಿಂದ ಪ್ರಸ್ತುತ ಪೀಳಿಗೆ ಏನನ್ನು ಕಲಿಯಬೇಕೆಂಬುದನ್ನು ಸ್ಪಷ್ಟಪಡಿಸಲಾಗಿದೆ.
ಆಗಷ್ಟೇ ಸ್ವಾತಂತ್ರ್ಯ ಹೊಂದಿದ್ದ ಭಾರತ ದೇಶದ ಚುಕ್ಕಾಣಿ ಹಿಡಿದ ಭಾರತದ ಕುವರರು ಜನಸಾಮಾನ್ಯರ ಅಭಿವೃದ್ಧಿಯ ಬಗ್ಗೆ ಅನುಭವ ಇತ್ತೇ ಹೊರತು, ಮಿಲಿಟರಿ ಯುದ್ದ ತಾಂತ್ರಿಕತೆ ಮತ್ತು ಮಿತ್ರು ರಾಷ್ಟ್ರಗಳ ಕೋಮು ಮನಸ್ತಿತಿಯನ್ನುಅರ್ಥಮಾಡಿಕೊಳ್ಳಲು ವಿಫಲವಾದುದೇ ಈ ದುರಂತಕ್ಕೆ ಕಾರಣವಿರಬಹುದೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಕೂಡಾ, ನಾಲ್ಕು ಗೋಡೆಗಳ ಮಧ್ಯೆ ನಡೆದ ವಿಚಾರಗಳೇನು? ಸತ್ಯ ಸಂಗತಿಯೇನು? ಯಾರ ಪ್ರತಿಷ್ಠೆಯ ಕುತಂತ್ರವಿರಬಹುದೆಂದು ಬಹುಶ: ಬ್ರಿಗೇಡಿಯರ್ ಜಾನ್ ಪಿ ದಳವಿಯವರ ಮಿಲಿಟರಿ ಇತಿಹಾಸದ ಮಹತ್ತರ ಕೃತಿ ಎನಿಸಿಕೊಂಡಿರುವ "ಹಿಮಾಲಯನ್ ಬ್ಲಂಡರ್"ನಲ್ಲಿ ತಿಳಿಯಬಹುದಾಗಿದೆ.
ಕತೃ ರವಿ ಬೆಳೆಗೆರೆಯವರು ಈ ಕೃತಿಯ ಮುನ್ನುಡಿಯಲ್ಲಿ ಈ ಕೃತಿ ಓದಿ ಒಂದು ಹನಿ ಕಣ್ಣೀರು ಸುರಿಸಿದರೆ ಈ ಕೃತಿ ಬರೆದುದಕ್ಕೆ ಸಾರ್ಥಕ ಎಂದು ಬರೆದಿದ್ದಾರೆ. ಅಂತೆಯೇ ನಾನೂ ಕೂಡಾ ಭಹಲ ಸಲ ಈ ಕೃತಿ ಓದುವಾಗ ಕಣ್ಣೀರು ಸುರಿಸಿದ್ದೇನೆ. ನಾನೂ ಎಷ್ಟು ಸಲ ಕಣ್ಣೀರು ಸುರಿಸಿದೆ ಎಂಬುದು ಬಹುಶಃ ಲೆಕ್ಕವಿದಬಹುದೇ ವಿನಃ ಎಷ್ಟು ಕಣ್ಣೆರ ಹನಿ ಸುರಿಸಿದೆ ಎಂಬುದು ಲೆಕ್ಕವಿಡಲಾಗಲಿಲ್ಲ. ವಿಶೇಷವಾಗಿ ಪಂಜಾಬಿ ಸೈನಿಕರು ರೊಟ್ಟಿಯ ಹಂಚನ್ನು ಏಕೆ ತರಲಿಲ್ಲವೆಂದು ಬ್ರಿಗೇಡಿಯರ್ ಕೇಳಿದಾಗ, ಪ್ಲಟೂನ್ ಸೈನಿಕು ಕೊಡುವ ಉತ್ತರ. ಕನ್ನಡಕ ಇವತ್ತು ಬರಬಹುದು ನಾಳೆ ಬರಬಹುದು ಎಂದು ಕಾಯುವ ನಿರ್ಭಾಗ್ಯ ಸೈನಿಕ . ಬೂಟುಗಳಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದಿದ್ರೂ, ಕಾಡತೂಸು ಇರುವ ತನಕ ಬಡಿದಾಡಿದ ಹುತಾತ್ಮ ಸೈನಿಕರನ್ನು ನೆನಸಿಕೊಂಡಾಗಲಂತೂ ಕಣ್ಣೀರ ಕಟ್ಟೆಯನ್ನು ನನ್ನಿಂದ ತಡೆಹಿಡಿಯಲು ಸಾಧ್ಯವಾಗಲೇ ಇಲ್ಲ.
ಒಂದು ಕಡೆ ಪರ್ವತ ಹತ್ತುವಾಗ 40 ಸೈನಿಕರಿದ್ದ ತುಕಡಿ, ಸಂಖ್ಯೆ 11ಕ್ಕೆ ಇಳಿದಾಗ ಬಿದ್ದ ದುಖಃದ ಕಣ್ಣೀರು, ಕ್ರೋಧದ ಕಣ್ಣೀರು, ಕನಿಕರದ ಕಣೀರು, ಅಯ್ಯೋ ಪಾಪ ಕಣ್ಣೀರು, ನಮ್ಮ ಮನೆಯಲ್ಲೇ ಒಬ್ಬನನ್ನು ಕಳೆದುಕೊಂಡ ಮನಸ್ತಿತಿಯ ಕಣ್ಣೀರಿಗೆ ಲೆಕ್ಕವಿಲ್ಲ. ಯಾರ ಕುತಂತ್ರ ಏನೆ ಇದ್ದರೂ ಗಡಿ ಕಾಯುವ ಕೆಲಸ ತಪ್ಪದೇ ಮಾಡುವ ಸೈನಿಕರ ನೆನದು ಕನ್ನಲಿಗೆಗಳು ಮುಂದಿನ ಸಾಲು ಓದಲಿಕ್ಕಾಗದಷ್ಟು ತುಂಬುತ್ತಿದ್ದವು.
ಕೃತಿ ಬಿಡುಗಡೆಯಾದ ಮೇಲೆ ಜನರ ಮನಸ್ಸಿನ ಮೇಲೆ ಉಂಟಾಗುವ ಪರಿಣಾಮಗಳ ಅರಿವು ಲೇಖಕನಿಗೆ ಇದ್ದೆ ಇರುತ್ತದೆ. ಈ ಕೃತಿಯ ಪರಿಣಾಮ 'ಜಾಗೃತಿ'. ಇನ್ನು ಮುಂದಾದರೂ ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕೆಂಬ ಅರಿವು ಮತ್ತು ತಿಳುವಳಿಕೆ ರಾಜಕಾರಣಿಗಳಿಗಾಗಲೀ, ಸೈನ್ಯದ ಅಧಿಕಾರಿಗಳಿಗಾಗಲೀ ಮೂಡುತ್ತದೆ. ನನ್ನಂಥ ಎಷ್ಟೋ ವಿದ್ಯಾರ್ಥಿಗಳ ಜಾಗೃತಿಗೆ ಕವಿ ಕಾರಣರಾಗಿದ್ದಾರೆ.
ಈ ಕೃತಿಯನ್ನು ನಾವು ಓದಿದ್ದಕ್ಕಿಂತ ಮಿಲಿಟರಿಯಲ್ಲಿರುವವರು ಓದಿದರೆ ಹೆಚ್ಚು ಧನ್ಯರಾಗುತ್ತಾರೆ ಮತ್ತು ಪರಿಸ್ತಿತಿಯನ್ನು ಕೊಂಚ ಮಟ್ಟಿಗೆ ಸುಧಾರಣೆ ಮಾಡುತ್ತಾರೆಂದು ನಂಬಿ ಈ ಕೃತಿಯನ್ನು ಕನ್ನಡಾಭಿಮಾನಿಯಾದ ನನ್ನ ಅಣ್ಣ
ಜೆ ಸಿ ಸಂಗಮೇಶ ಮೊಳೆ,ತಿಮ್ಮಯ್ಯ ಬೆಟಾಲಿಯನ್, ಐ ಎಂ ಎ, ಡೆಹರಾಡೂನ್.
ಎಂಬಲ್ಲಿಗೆ ಕಳಿಸಿ ನನ್ನ ಜವಾಬ್ದಾರಿಯನ್ನು ಗುಲಗಂಜಿಯಷ್ಟು ಕಡಿಮೆ ಮಾಡಿಕೊಂಡಿದ್ದೇನೆ.
ಈ ಕೃತಿಯ ಜೀವಾಳ ಮತ್ತು ಹಿರೋಗಳಾದಂಥ ನಮ್ಮ ಭಾರತೀಯ ಸೇನೆಯ ಸೈನಿಕರಿಗೆ ಹೃದಯಾಂತರಾಳದಿಂದ ಸಾವಿರ ಸಾವಿರ ವಂದನೆಗಳನ್ನು ಸಮರ್ಪಿಸುತ್ತ, ಮತ್ತು ಎಂಥ ಜಾಗೃತಿ ಹಿನ್ನೆಲೆಯಿರುವ ಕೃತಿಯನ್ನು ಹೊರ ತಂದಂಥ ಬೆಳೆಗೆರೆಯವರಿಗೂ ನನ್ನದೊಂದು ಸೆಲ್ಯೂಟ್ ಹೇಳುತ್ತಾ, "ಹಿಮಾಲಯನ್ ಬ್ಲಂಡರ್" ಮೂಲ ಕೃತಿಯ ಕತೃ ಮತ್ತು 1962 ರ ಚೀನಾ ವಿರುಧ್ಧ ಯುದ್ಧದ ಪ್ರತ್ಯಕ್ಷದರ್ಶಿಯಾಗಿದ್ದಂಥ ಮಹಾನ್ ಹೋರಾಟಗಾರ ಬ್ರಿಗೇಡಿಯರ್ ಜಾನ್ ಪಿ ದಳವಿಯವರಿಗೂ ಕೂಡಾ ನನ್ನ ಸಾವಿರ ನಮನಗಳನ್ನು ಅರ್ಪಿಸುತ್ತಿದ್ದೇನೆ. 
ಶಿಕ್ಷಕನನ್ನು ಹೊರತುಪಡಿಸಿದರೆ ಬಹುಶಃ ಎಂಥ ಗುರುತರ ಜವಾಬ್ದಾರಿ ಇರುವುದು ಲೇಖಕನ ಲೇಖನಿಗೆ ಮಾತ್ರ ಇದೆ. ಇಂಥ ಜವಾಬ್ದಾರಿಯನ್ನು ಬೆಳೆಗೆರೆಯವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದನ್ನು ಈ ಕರುನಾಡು ಬೆಳೆಗೆರೆಯವರಿಂದ ಯಾವತ್ತೂ ಅಪೇಕ್ಷಿಸುತ್ತಲೇ ಇರುತ್ತದೆ.
ನನ್ನ ಈ ಲೇಖನವನ್ನು ನನ್ನ ಮಿತಿಯ ಪದಗಳಲ್ಲಿ ಅವಲೋಕಿಸಿ, ಕೃತಿಯ ಸಾರ್ಥಕತೆಯನ್ನು ಕೊಂಚ ಜಾಸ್ತಿ ಮಾಡುವ ಪುಟ್ಟ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.



ಎಂದೆಂದೂ ನಿಮ್ಮವ,
ಅರವಿಂದರಾಜ ಬಿ ದೇಸಾಯಿ.