A r v i n d r a j   D e s a i
Showing posts with label BANGALORE. Show all posts
Showing posts with label BANGALORE. Show all posts

Sunday, April 21, 2013

ಪಾಪಿಗಳ ಲೋಕದಲ್ಲಿ:- ಭೂಗತ ಲೋಕದ ತೆರೆ ಮರೆಯ ವಿಮರ್ಶೆ

ನಾನು ಯಾವಾಗಲೂ ಕಾದಂಬರಿಗಳನ್ನು  ಕೊಳ್ಳುವಾಗ, ಅದರ ಪೂರ್ವಾಪರಗಳನ್ನು ಅಭ್ಯಸಿಸಿ, ಕೊಂಡು ಓದಿ ಆನಂದ ಪಡುವ ಸಾಮಾನ್ಯ ಜೀವಿ. ನನಗೆ ಇತಿಹಾಸ, ದೇಶ, ಯುದ್ಧ, ರಾಜಕೀಯ, ಪ್ರೇಮ ಕಾದಂಬರಿಗಳ ಮೇಲೆ ಹೆಚ್ಚಿನ ಆಸಕ್ತಿ. ಆದರೂ ಈ ಬಾರಿ ನನಗೇ ಗೊತ್ತಿಲ್ಲದ ಹಾಗೆ ಈ ಹೊತ್ತಿಗೆಯನ್ನು ಕೊಂಡಾಗಿತ್ತು, ಇನ್ನು ಓದಿ ಮುಗಿಲಸಲೇಬೇಕಲ್ಲ, ಇಲ್ಲವೆಂದರೆ ಪೈಸಾ ವಸೂಲ್ ಹೇಗಾದಿತು?...  ಓದಲೋ? ಬೇಡವೋ? ಎನ್ನುವ ನನ್ನ ತಳಮಳಕ್ಕೂ ಕಾರಣವಿದೆ. ಇದು ಒಂದು ಭೂಗತ ಲೋಕದ ರಕ್ತಸಿಕ್ತ ದಿನಗಳ ಚುಟುಕು ಚಿತ್ರಣ  ಮೂಡಿಸುವಂಥಹ ರವೀ ಬೆಳೆಗೆರೆಯವರ ಕಾದಂಬರಿ.
ಬಿಸಿರಕ್ತದ ತರುಣ, ಎಲ್ಲಾದರೂ ಅನ್ಯವಾದಾಗ, ಅಪಚರವಾದಾಗ, ಪಾಪವಾದಾಗ, ಉರಿದು ಬೀಳುವ ಕ್ರುದ್ಧನಾಗುವ ನಾನು, ಅದೆಷ್ಟು ಸಂಯಮದಿಂದ ಈ ಪಾಪದ, ಕೊಲೆಗಡುಕರ, ತಲೆಹಿಡುಕರ, ಧರ್ಮಹೀನ ಮನುಷ್ಯರ ಕಥೆಗಳನ್ನು ಓದಿದೆನೆಂದು ಆಶ್ಚರ್ಯ ಮೂಡುತ್ತದೆ. ನನ್ನಂಥಹ ಯುವಕರ ಪಾಲಿಗೆ ಏನು ಸಂದೇಶ ಕೊಡುತ್ತದೆ ಈ ಪುಸ್ತಕ? ಏನು ಸಾಧಿಸಲೆಂದು? ಯಾರ ಸ್ಪೂರ್ತಿಗಾಗಿ, ಈ ಪುಸ್ತಕ ಹಿಡಿದೆನೆಂದು ಈ ಹೊತ್ತಿಗೂ ತಿಳಿದಿಲ್ಲ. ಬಹುಷಃ ರವಿ  ಬೆಳೆಗೆರೆಯಂಥ ಮಾಗಿದ ಕಾದಂಬರಿಕಾರರ ಇದೊಂದು ಪುಸ್ತಕ ಓದಿದರೆ ತಪ್ಪಲ್ಲ ಎಂದೆನಿಸಿ ಶುರುಮಾಡಿದೆ. 
                ಎಂಭತ್ತು ತೊಂಭತ್ತರ ದಶಕದ ರಕ್ತದೋಕುಳಿಯ, ಸಾಲು ಸಾಲು ಕೊಲೆಗಳ, ಸಾಲು ಸಾಲು ಮಾನಭಂಗಗಳ, ರೌಡಿ ಷೀಟರುಗಳ ಅಬ್ಬರ ಕೋಪತಾಪ, ಜನಸಾಮಾನ್ಯರ ಅಸಹಾಯಕತೆ, ರಾಜಕಾರಣಿಗಳ ಅವಕಾಶವಾದಿತನ, ಸತ್ಯ ಘಟನೆಗಳ ಸರಮಾಲೆಯೇ ಈ ಕಾದಂಬರಿ. ಕತ್ತಲಾದರೆ ಎಚ್ಚರಗೊಳ್ಳುವ ಈ ಭೂಗತ ಲೋಕದ ಪ್ರತೀ ರೌಡಿಗಳ ಮನಸ್ತಿತಿ, ಮನಸ್ತಾಪ, ಹೆದರಿಕೆ, ಭಂಡತನ, ಕ್ರೌರ್ಯ, ಹಿಂಸೆ, ಮೃಗತನ, ಚಾಣಾಕ್ಷತನ, ರೌಡಿಗಳೇ ಹೇಳಿದ ಕಥೆಗಳ ಸುತ್ತ ಗಿರಕಿ ಹೊಡಿಯುತ್ತದೆ 'ಪಾಪಿಗಳ ಲೋಕದಲ್ಲಿ'. 
                 ಕೊತ್ವಾಲ್ ರಾಮಚಂದ್ರನ ರೋಲ್ ಕಾಲ್, ಜಯರಾಜ್ ತಾನಿರುವ ಜೈಲಿನಿಂದಲೇ ಜಗತ್ತನ್ನು ಆಳಿದ ರೀತಿ, ಆಯಿಲ್ ಧಂದೆಯನ್ನು ಅಷ್ಟೊಂದು ಅಚ್ಚುಕಟ್ಟಾಗಿ ನಡೆಸಿದ ಆಯಿಲ್ ಕುಮಾರನ ರೀತಿ, ಮುಟ್ಟಿದರೆ ಮಾಸುವ ಮುತ್ತಪ್ಪ ರೈ ಎಂಬಾತನ ರೀತಿ, ಎಂಥ ಚಿಕ್ಕ ವಯಸ್ಸಿನ ಪುಡಿ ರೌಡಿಗಳಲ್ಲಿ ಭೂಗತ ಲೋಕದ ಭಯಾನಕ ಆಸೆಗಳ ಬಾಗಿಲು ತೆರೆದುಕೊಂಡರೆ ಆಶ್ಚರ್ಯವೇನಿಲ್ಲ. ಆದರೆ, ಅದರ ಹಿಂದಿದ್ದ (ತೆರೆಯ ಹಿಂದಿನ) ಮಸಲತ್ತುಗಳು, ಪೋಲೀಸರ ಬೆಂಡೆತ್ತು (ಏರೋಪ್ಲೇನ್ ), ಯಾವ ರೌಡಿಯ ಬಿಸಿರಕ್ತವನ್ನು ತಣ್ಣಗೆ ಮಾಡುವಷ್ಟು ಬಲಶಾಲಿಯಾಗಿದ್ದವು, ಈಗಲೂ ಇವೆ. 
                ಈ  ಕಾದಂಬರಿ ಓದುವಾಗ, ನಾನಿರುವ ಸ್ಥಳವಾದ ರಾಜಾಜಿನಗರದ  ಕೆಲವು ದೃಶ್ಯಗಳು ಬಂದರೆ, ಬಸವನಗುಡಿಯ ಬಗೆ ಕತೆಗಳಲ್ಲಿ ಪ್ರಸ್ಥಾಪವಾದರೆ, ನಾನಿರುವ ಪ್ರದೇಶದಲ್ಲಿ ಇಂಥ ಭಯನಕಗಳು ನಡೆದಿವೆಯಾ? ರಕ್ತದ ಹೊಳೆಹರೆದಿದೆಯಾ? ಎಂದು ಯೋಚನಾ ಲಹರಿಗೆ ಇಳಿದರೆ, ಒಂದು ಕ್ಷಣ ಮೈಯಲ್ಲಿ ನಡುಕ ಬಂದಿದ್ದಂತೂ ಸುಳ್ಳಲ್ಲ. ಈಗ ಆ ರಕ್ತದ ಹೊಳೆ ಬತ್ತಿ ಹೋಗಿ ಟಾರು ರೋಡು ಹಾಕಿರುವುದೂ ಅಷ್ಟೇ ಸತ್ಯ. ಆ ಕಾಲದಲ್ಲಿ ಅಷ್ಟೊಂದು ಭಾಯಾನಕಗಳು ಘಟಿಸುವುದಕ್ಕೆ ಕಾರಣವೇನಿರಬಹುದೆಂದು ನನ್ನಲ್ಲಿ ನಾನೇ ವಿಮರ್ಶೆ ಮಾಡಿಕೊಂಡಾಗ, ಬಿಟ್ಟಿ ದುಡ್ಡು ಬರುವಾಗ ಬಗ್ಗಿಸಿ ದುಡಿದು ಯಾಕೆ ತಿನ್ನಬೇಕು ಎಂಬ ಸೋಮಾರಿಗಳೇ ಆಗಿನ ರೌಡಿಗಳು! ಕುಡಿತ, ಜೂಜು, ಹೆಂಗಳೆಯರ ಸಹವಾಸ, ಒಟ್ಟಿನಲ್ಲಿ ಒಂದು ವರ್ಣರಂಜಿತ ಬದುಕು. ಇದನ್ನು ಸಾಗಿಸಲಿಕ್ಕೆ ಬೇಕಾಗಿದ್ದು ಒಂದು ಬ್ಲೇಡು, ಒಂದು ಮಚ್ಚು (ಲಾಂಗ್) ಒಂದಿಷ್ಟು ಭಂಡತನ, ಮುಗೀತು. ಭಂಡತನದ ಪರಮಾವಧಿ ಭೂಗತ ಲೋಕದೊಳಕ್ಕೆ 'ರೆಡ್ ಕಾರ್ಪೆಟ್'.. 
                  ಜಯರಾಜ್, ಕೊತ್ವಾಲ್ ರಾಮಚಂದ್ರ,  ಆಯಿಲ್ ಕುಮಾರ, ಮುತ್ತಪ್ಪ ರೈ, ಎಂ ಸಿ ಪ್ರಕಾಶ್, ಬಿಂಡ, ಸಿದ್ದ, ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಮುಚ್ಚ ರಾಜೇಂದ್ರ, ಡೆಡ್ಲಿ ಸೋಮ, ಚಂದು, ರಾಜಶೇಖರ್, ಬಸವ, ಕರಿಯ, ಸಕ್ರೆ, ಶ್ರೀರಾಂಪುರ್ ಕಿಟ್ಟಿ, ಕುಳ್ಳ ನಾರಾಯಣ, ಪಟ್ರೆ ನಾರಾಯಣ, ಕೋಟೆ ನಾಗರಾಜ, ಕೋಟೆ ರಾಜೇಂದ್ರ, ಕಾಲಾ ಪತ್ಥರ್, ಕೋಳಿ ಫ್ಹಯಾಜ್, ಬಲರಾಮ್, ಚೋಟು ಪ್ರಕಾಶ್, ಹೀಗೆ ಭೂಗತ ಲೋಕದ ಭಂಡರ ಹೆಸರುಗಳನ್ನು ಬೆರೆಯುತ್ತ ಕುಳಿತರೆ ಕಾಗದ ಸಾಕಾಗದು. ಇವರೆಲ್ಲರ ಸ್ಥೂಲ ಚಿತ್ರಣ ಕಣ್ಣು ಮುಂದೆ ಬಂದು ಹೋಗುವಂಥ ಶಕ್ತಿ ಬೆಳೆಗೆರೆಯವರ ಬರವಣಿಗೆಗಿದೆ.
                 ಹಾಯಾಗಿ ಕಾಲೇಜಿಗೆ ಹೋಗಿ ಗೆಳೆಯರ ಜೊತೆ ಗಂಟೆಗಟ್ಟಲೆ ಗೀಳು ಮಾತಾಡಿ, ಅಲ್ಲೊಂದಿಷ್ಟು ಇಲ್ಲೊಂದುಷ್ಟು ಶಿಕ್ಷಕರ, ಅಪ್ಪ, ಅವ್ವ, ಅಣ್ಣನ ಹತ್ತಿರ ಕೀಟಲೆ ಮಾಡಿಕೊಂಡು, ಚಟಕ್ಕಾಗಿ ಕೆಲವು ಕನ್ನಡ ಪುಸ್ತಕಗಳನ್ನು ಓದಿಕೊಂಡು, ಬೋರು ಹೊಡೆದಾಗ ಟ್ರಿಪ್ ಹಾಕುವ ಅದೃಷ್ಟ, ಬಹುಚಂದದ ಬದುಕನ್ನು ಬಹುಷಃ ಈ ಭೂಗತ ಲೋಕದ ಕಿರೀಟವಿಲ್ಲದ ಅನಭಿಷಕ್ತ ದೊರೆಗಳು ನೋಡಿರಲಿಕ್ಕಿಲ್ಲ, ಅನುಭವಿಸಿರಲಿಕ್ಕಿಲ್ಲ.
              ನೋಡಿದ್ದರೆ, ಅನುಭವಿಸಿದ್ದರೆ ಅಂಥ ಲೋಕಕ್ಕೆ ಕಾಲಿಡುತ್ತಿರಲಿಲ್ಲವೇನೋ! ನಮ್ಮ ಹಿರಿಯರ ಪುಣ್ಯದಿಂದಲೇ ಏನೋ? ನಮಗೆ ಇಂಥ ಬದುಕು ಸಿಕ್ಕಿದೆ, ಕಲಿಯೋಣ ಸವಿಯೋಣ .. 
               ಈ ಕೋಲ್ಡ್ ಬ್ಲಡೆಡ್ ಮರ್ಡರ್ ರೌಡಿಗಳನ್ನು, ಹಿರೋಗಳನ್ನಾಗಿ ವಿಜ್ರುಂಬಿಸಿರುವುದು ಕೊಂಚ ಮಟ್ಟಿಗೆ ಖೇದ ಉಂಟು ಮಾಡುವ ಸಂಗತಿ. ಹೊತ್ತು ಕಳೆಯಲು ಈ ಹೊತ್ತಿಗೆಯನ್ನು ಓದುವುದಾದರೆ, ಓದಿ ಆನಂದಪಡಿ. ಯಾವುದೋ ಸಂದೇಶಕ್ಕಾಗಿ, ಸ್ಪೂರ್ತಿಗಾಗಿ, ಇದನ್ನು ಓದುವುದಾದರೆ, ಖಂಡಿತ ಬೇಡ. 
                   ಪಾಪದ್ದು ಅನ್ನಿಸಿದರೆ, ಪ್ರತ್ಯುತ್ತರ ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ. 


ಎಂದೆಂದೂ ನಿಮ್ಮವ,
ಅರವಿಂದರಾಜ ಬಿ ದೇಸಾಯಿ. 

Saturday, July 2, 2011

ಬೆಂಗಳೂರು: ಭಾವನಾತ್ಮಕ ವಿದಾಯ

               ಒಂದು ಸುಂದರ ಮುತ್ಸಂಜೆಗೆ ಈ ಬರಹ ಸಾಕ್ಷಿಯಾಗುತ್ತದೆಂದು ನಾನಂದುಕೊಂಡಿರಲಿಲ್ಲ. ಇಸ್ರೋ ಲೇಔಟಿನ ಎರಡನೇ ಮಹಡಿಯ ಮೇಲ್ಛಾವಣಿಯ ಮೇಲೆ ಕುರ್ಚಿ ಹಾಕ್ಕೊಂಡು ಕುಳಿತಿದ್ದೆ. ಕಪ್ಪು ಮೋಡದ ನರ್ತನ, ಮಿಂಚು ಗುಡುಗುಗಳ ಆರ್ಭಟ, ಧೂಳು ಮತ್ತು ಹಿಮತುಕದಿಯ ಆಕ್ಸಿಡೆಂಟ್, ಮುಂಗಾರು ಮಳೆಯಾಗಿ ಪರಿವರ್ತನೆಗೊಂಡು ಭೂಮಿಯ ಮಡಿಲು ಸೇರಿತು. ಅದೇನೋ "ಪ್ರೀತಿ ಮಧುರ, ತ್ಯಾಗ ಅಮರ" ಮುಂಗಾರು ಮಳೆಯ ಮಾತು ನೆನಪಾಗಿ, ಮಳೆಯಲ್ಲಿಯೇ ನೆನೆಯುತ್ತಾ ಕುಳಿತುಬಿಟ್ಟೆ. ಮನಸ್ಸಿನಲ್ಲಿ ಏನೋ ದುಗುಡ ದುಮ್ಮಾನ. ಯಾರನ್ನೋ ಕಳೆದುಕೊಂಡ ಭಾವನೆ. ಚಿತ್ರ ವಿಚಿತ್ರ ನೆನಪುಗಳ ಲಹರಿ. ಅಣ್ಣಾವ್ರ ಹಾಡುಗಳ ಮೆಲಕು, ಆ ಚಳಿಗೆ ಮಳೆಗೆ ಟೀ ಹೀರೋಣವೆನ್ನಿಸಿತು, ಅಷ್ಟರಲ್ಲೇ ನನ್ನ ಆತ್ಮೀಯ ಗೆಳೆಯ ವಿಜಯ ಟೀಯೊಂದಿಗೆ ಪ್ರತ್ಯಕ್ಷ. ಕಳೆದುಕೊಂಡಿದ್ದೆಲ್ಲಾ ಸಿಕ್ಕಂತಾದ ಭಾವನೆ. 
ನೆನಪಿನಂಗಳದಲ್ಲಿ ರಂಗೋಲಿಯನ್ನು ಹಾಕತೊಡಗಿದೆನು. ಮಳೆಯ ನೀರಿನಲ್ಲಿ ಕಾಗದದ ದೋಣಿ ಬಿಟ್ಟಾಗಿನಿಂದ ಹಿಡಿದು ಎಲ್ಲಿಯತನಕ:-


"ಸವಿ ಸವಿ ನೆನಪು, ಸಾವಿರ ನೆನಪು, ಸಾವಿರ ಕಾಲಕು ಸವೆಯದ ನೆನಪು". 

ನಾನು ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗ ಅದು ಪರವೂರು. ಈಗದು ತವರೂರಿಂತಾಗಿಬಿಟ್ಟಿದೆ. ಬೆಂಗಳೂರು ಬದುಕು ಕಲಿಸಿದೆ. ಸ್ಟೈಲ್, ಸ್ಮೈಲ್ ಕಲಿಸಿದೆ. ಆತ್ಮೀಯ ಗೆಳೆಯ, ಗೆಳತಿಯರನ್ನು ಪರಿಚಯ ಮಾಡಿಸಿದೆ. ಸೋಲು, ಗೆಲುವು ಸಹಿತ. ಮತ್ತೊಂದು ಸಾರಿ ಬೆಂಗಳೂರಿಗೆ ಬಂದಾಗ ಈ ಊರು ನನ್ನನ್ನು ತನ್ನ ಮೊಮ್ಮಗನೆಂಬುದನ್ನೇ ಮರೆತು ಬೇರೆಯವರಂತೆ ನಡೆಸಿಕೊಂಡುಬಿಡುತ್ತದೇನೋ ಎಂಬ ಭಯ.

ನಾನು ಎಲ್ಲಿಗೆ ಬಂದು ಏನು ಸಾಧಿಸಿದೆ? ಅಂಕಗಳು ನನ್ನ ಸಾಧನಾ ಮಾಪನವಾ? ಎಂಥ ನೂರೆಂಟು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹೊರಳಾಡಿದ್ದು ಸತ್ಯ. ಜ್ಞಾನದ ಹಸಿವು ಇನ್ನೂ ಆರಿಲ್ಲ. ಆದರೂ ಪದವೀಧರ.

ನಾನು ನನ್ನ ಹುಟ್ಟಿದೂರಿಗೆ ಬರುವಾಗ ಕೊನೆಯ ಬಾರಿ ಮತ್ತೆ ಸಿಗೋಣವೆಂದು ಹೇಳಲು ಸರದಾರ ಪಟೇಲ್ ಹಾಸ್ಟೆಲಿಗೆ ಹೋದಾಗ ಎಲ್ಲ ಜೂನಿಯರ್ಸ್ ವಿದಾಯ ಹೇಳಿದ್ದು ಮರೆಯಲಾಗದ ಕ್ಷಣ. ಮತ್ತೊಂದು ಸಂಗತಿ, ನನ್ನನ್ನು ಬಸ್ ನಿಲ್ದಾಣಕ್ಕೆ ಬಿಡಲೆಂದು ಬಂದ ನನ್ನ ಸ್ನೇಹಿತರಿಗೆ ಯಾವ ರೀತಿ ಚಿರರುಣಿಯಾಗಿರಲಿ. ಬಸ್ ನಿಲ್ದಾಣಕ್ಕೆ ತಲುಪಲು ಮುಂಚೆ ಬಹಳ ರೋಚಕ ಕ್ಷಣಗಳನ್ನು ಬೈಕಿನಲ್ಲ ಕಳೆದು ತಲುಪಿದಾಗ, ಕೊನೆಯ ಬಾರಿಗೆ ಆ ದಿನದ ಟೀ ಕರುಳಿನ  ಆಳಕ್ಕೆ ಇಳಿದು ನಿರಾಳ ಎನಿಸಿತು. ಬಸ್ ಹೊರಟು ನಿಂತಾಗ, ಯಾವುದೋ ಭಾರ ಮನಸ್ಸಿನ ಮೇಲೆ ಬಿದ್ದಂತಾಯಿತು. ಮತ್ತೆ ಮತ್ತೆ ಭೇಟಿಯಾಗಲೇಬೇಕೆಂಬ ಆಣೆ ಪ್ರಮಾಣದೊಂದಿಗೆ ನನ್ನನ್ನು ಅಲ್ಲಿಂದ ಬೀಳ್ಕೊಡಲಾಯಿತು. ಭಾವನಾಜೀವಿಯಾದ ನಾನು, ನಿಮ್ಮ ಸ್ನೇಹದ ಮೇಲೆ ಎಲ್ಲಿಲ್ಲದ ಪ್ರೀತಿ ಗೌರವ.
ಈ ಎಲ್ಲಾ ಭಾವನಾತ್ಮಕ ವಿದಾಯವನ್ನು ಬೆಂಗಳೂರಿಗೆ ಅರ್ಪಿಸುವಾಗ ಕಣ್ ಹನಿಯು ಭೂಮಡಿಲು ಸೇರಿತು.

"ಯುಗ ಯುಗಗಳೇ ಸಾಗಲಿ, ನಮ್ಮ ಸ್ನೇಹ ಶಾಶ್ವತ" ಎಂದು ಮನ ಹೇಳಿತು.

ಯಾರು ಯಾರಿಗೂ ಶಾಶ್ವತ ಅಲ್ಲ, ಮುಂದೊಂದು ದಿನ ನನ್ನ ಕಣ್ಣೀರ ಕಟ್ಟೆಯೊಡೆದಾಗ ನಿಲ್ಲಿಸಲು, ಮತ್ತು ಸಾಧನೆ ಮಾಡಿದಾಗ ಖುಷಿ ಪಡಲು ನನ್ನ ಆತ್ಮೀಯ ಸ್ನೇಹಿತರು ಯಾವತ್ತೂ ನನ್ನೊಂದಿಗಿರುತ್ತಾರೆಂಬ ನಂಬಿಕೆಯಿಂದ,
"ಇಲ್ಲಿಗೆ ಮುಗಿದಿಲ್ಲ ಜೀವನ, ಮುಂದಿದೆ ಮಹಾಯುದ್ಧ",
ನಿಮ್ಮ ಹಾರೈಕೆ ನನ್ನನ್ನು ಆ ಮಹಾಯುದ್ಧದಲ್ಲಿ ಗೆಲ್ಲಿಸುತ್ತದೆಂಬ ಆತ್ಮವಿಶ್ವಾಸ ನನ್ನಲ್ಲಿದೆ.

ನಿಮ್ಮ ಪ್ರೀತಿಯ ಸ್ನೇಹಿತ,
ಅರವಿಂದರಾಜ ಬಿ ದೇಸಾಯಿ.